ಈಗಂತೂ ಈ ಸೈಬರ್ ವಂಚನೆ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಕೆಲಸ ಕೊಡಿಸುತ್ತೇವೆ ಅಂತ ಯಾವುದೋ ಒಂದು ಲಿಂಕ್ ಅನ್ನು ಜನರ ವಾಟ್ಸಾಪ್ ಗೆ ಕಳುಹಿಸುವುದು ಮತ್ತು ಅದನ್ನು ಕ್ಲಿಕ್ ಮಾಡಿದರೆ ನಿಮಗೆ ಕೆಲಸ ಸಿಗುತ್ತದೆ, ನೀವು ಅದರಿಂದ ಮನೆಯಲ್ಲಿಯೇ ಕುಳಿತು ಚೆನ್ನಾಗಿ ದುಡ್ಡು ಮಾಡಬಹುದು ಅಂತೆಲ್ಲಾ ಸೈಬರ್ ವಂಚಕರು ಅಮಾಯಕ ಜನರ ಮೇಲೆ ತಮ್ಮ ಬಲೆಯನ್ನು ಬೀಸುತ್ತಾರೆ.
ಇತ್ತೀಚೆಗೆ ಈ ಹೆಚ್ಚುತ್ತಿರುವ ಸೈಬರ್ ವಂಚನೆ ಪ್ರಕರಣಗಳ ಬಗ್ಗೆ ಜೆರೋಧಾ ಸಿಇಒ ನಿತಿನ್ ಕಾಮತ್ ಸಹ ಜನರಿಗೆ ತುಂಬಾನೇ ಎಚ್ಚರಿಕೆಯಿಂದ ಇರಿ ಅಂತ ಹೇಳಿದ್ದರು. ಹೀಗೆ ಆನ್ಲೈನ್ನಲ್ಲಿ ವಂಚಕರು ಬೇಗನೆ ದುಡ್ಡು ಮಾಡಬಹುದು ಅಂತೆಲ್ಲಾ ಆಮಿಷವನ್ನು ಒಡ್ಡುತ್ತಾರೆ. ಆದರೆ ಇಂತಹ ಆಸೆ ಆಮಿಷಗಳಿಗೆ ಬಲಿಯಾಗಬೇಡಿ ಅಂತ ನಿತಿನ್ ಅವರು ಜನರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದರು.
ಸೈಬರ್ ವಂಚನೆಯಿಂದ ಬುದ್ದಿವಂತಿಕೆಯಿಂದ ಪಾರಾದ ಮಹಿಳೆ: ಈಗ ಇಲ್ಲೊಂದು ಅಂತಹ ವಾಟ್ಸಾಪ್ ಸ್ಕ್ಯಾಮ್ ಗೆ ಪ್ರಯತ್ನ ನಡೆದಿದ್ದು, ಅದನ್ನ ಮಹಿಳೆಯೊಬ್ಬರು ತುಂಬಾನೇ ಬುದ್ದಿವಂತಿಕೆಯಿಂದ ನಿಭಾಯಿಸಿದ್ದಾರೆ ಮತ್ತು ಆ ಸೈಬರ್ ವಂಚನೆಯಿಂದ ಪಾರಾಗಿದ್ದಾರೆ. ಮಾಧ್ಯಮದಲ್ಲಿ ಬಂದ ಸುದ್ದಿಯ ಪ್ರಕಾರ, ಆನ್ಲೈನ್ ಹಗರಣಗಳು ಈಗೇನು ಹೊಸತೇನಲ್ಲ. ತಂತ್ರಜ್ಞಾನದ ಅಭಿವೃದ್ಧಿಯು ಕಳ್ಳ ಖದೀಮರಿಗೆ ಜನರು ತುಂಬಾನೇ ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಕ್ಷಣ ಮಾತ್ರದಲ್ಲಿ ದೋಚಲು ಹೆಚ್ಚುವರಿ ಅವಕಾಶಗಳನ್ನು ನೀಡಿದಂತಾಗಿದೆ.
ಸಾಲ್ಟ್ ನ ಸಹ-ಸಂಸ್ಥಾಪಕಿ ಉದಿತಾ ಪಾಲ್, ಇಂತಹ ಖದೀಮನೊಬ್ಬ ತನ್ನಿಂದ ಹಣವನ್ನು ಸುಲಿಗೆ ಮಾಡುವ ಪ್ರಯತ್ನಕ್ಕೆ ವಿಭಿನ್ನ ರೀತಿಯಲ್ಲಿ ಬ್ರೇಕ್ ಹಾಕಿದ್ದಾರೆ ನೋಡಿ. ಬೆಂಗಳೂರು ಫಿನ್ಟೆಕ್ ಕಂಪನಿಯ ಸಹ-ಸಂಸ್ಥಾಪಕಿ ಖದೀಮನೊಂದಿಗೆ ವಾಟ್ಸಾಪ್ ನಲ್ಲಿ ಚಾಟ್ ಮಾಡಿದ ಕೆಲವು ಸ್ಕ್ರೀನ್ಶಾಟ್ಗಳನ್ನು ತಮ್ಮ ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಸ್ಕ್ರೀನ್ಶಾಟ್ಗಳು ಉದಿತಾ ಅವರನ್ನು ಲಿಂಕ್ ಅನ್ನು ಕ್ಲಿಕ್ ಮಾಡಲು, ವಿಡಿಯೋವನ್ನು ವೀಕ್ಷಿಸಲು, ನಂತರ ಕೆಲಸಕ್ಕೆ ಅವರನ್ನು ಪರಿಗಣಿಸುವುದಾಗಿ ಅದನ್ನು ಲೈಕ್ ಮಾಡಲು ಹೇಳಿದ್ದನ್ನು ಇಲ್ಲಿ ನಾವು ನೋಡಬಹುದಾಗಿದೆ.
ಇಲ್ಲಿ ಮೆಸೇಜ್ ಮಾಡಿದ ವ್ಯಕ್ತಿ ತಾನು ಮುಂಬೈ ಮೂಲದವನು ಅಂತ ಹೇಳಿಕೊಂಡಿದ್ದರಂತೆ ಮತ್ತು ವಿಚಿತ್ರ ಸಂಖ್ಯೆಯಿಂದ ಸಂದೇಶ ಕಳುಹಿಸಿದ್ದಾರೆ. ಈ ವ್ಯಕ್ತಿ ಕಳುಹಿಸಿದ ಪ್ರತಿ ಮೆಸೇಜ್ ಗೆ ಉದಿತಾ ಅವರು ತುಂಬಾನೇ ಬುದ್ದಿವಂತಿಕೆಯಿಂದ ಪ್ರತಿಕ್ರಿಯಿಸಿದರು. ಉದಿತಾ ಅವರು ಆ ವ್ಯಕ್ತಿಯ ಉದ್ದೇಶವನ್ನು ಮತ್ತು ತಂತ್ರವನ್ನು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಆಕೆಯ ಜೊತೆ ಚಾಟ್ ಮಾಡುವುದನ್ನು ನಿಲ್ಲಿಸಿ ಆಕೆಯನ್ನು ತಕ್ಷಣವೇ ಬ್ಲಾಕ್ ಮಾಡಿದ್ದಾನೆ ಆ ವ್ಯಕ್ತಿ.