ಮತದಾನದ ದಿನಕ್ಕೆ ದಿನಗಣನೆ ಶುರುವಾಗಿದೆ. ಆದರೆ, ಈ ನಡುವೆ ಮತದಾರರಿಗೆ ಆತಂಕ ಶುರುವಾಗುತ್ತಿದೆ. ಪ್ರತಿ ದಿನ ಹತ್ತಾರು ಕರೆಗಳು ಮತದಾರರಿಗೆ ಬರುತ್ತಿದೆ. ಅದರಲ್ಲಿ ಕೇಳುತ್ತಿರುವ ಪ್ರಶ್ನೆಗಳು, ಬರುತ್ತಿರುವ ಸಂದೇಶಗಳಿಂದ ಮತದಾರರ ಮಾಹಿತಿ ಕದಿಯುತ್ತಿರುವ ಸಂಶಯ ಶುರುವಾಗಿದೆ. ಕಾಲರ್ ಟ್ಯೂನ್ ಬದಲು ರಾಜಕೀಯ ನಾಯಕರ ಧ್ವನಿ ಕೇಳುತ್ತಿದೆ. ಕರೆ ಸ್ವೀಕಾರ ಮಾಡೋದಕ್ಕಿಂತ ಮೊದಲು ಚುನಾವಣಾ ಪಕ್ಷಗಳ ಬಗ್ಗೆ ಹೊಗಳಿಕೆ ಕೇಳುತ್ತಿದೆ.
ದಿಢೀರ್ನೇ ಬರುತ್ತಿರುವ ಕರೆಗಳೆಲ್ಲವೂ ರಾಜಕೀಯ ಪಕ್ಷಗಳ ಪ್ರಣಾಳಿಕೆ ಬಗ್ಗೆ ಮಾಹಿತಿ ನೀಡುತ್ತಿವೆ. ಮತದಾರರನ್ನ ಸೆಳೆಯೋಕೆ ಫೋನ್ ಮೂಲಕವೇ ಕಸರತ್ತು ನಡೆಯುತ್ತಿದೆ. ಕರೆ ಮೂಲಕ ಮತದಾರರ ಮನ ಬದಲಾಯಿಸೋದು ಮಾತ್ರವಲ್ಲದೆ, ಮತದಾರರ ಗೌಪ್ಯ ಮಾಹಿತಿಯನ್ನೂ ಸಂಗ್ರಹಿಸುತ್ತಿವೆ. ಯಲಹಂಕದ ಮತದಾರರಾಗಿರುವ ಪ್ರಿಯಾಂಕ ಅವರಿಗೆ ಕೆಲ ದಿನಗಳಿಂದ ಅಪರಿಚಿತ ನಂಬರ್ನಿಂದ ಒಂದು ಕರೆ ಬಂದಿತ್ತು. ಕಾಲರ್ ಐಡೆಂಟಿಫಿಕೇಷನ್ ಆ್ಯಪ್ನಲ್ಲಿ ಅದು ಭಾರತದ ಚುನಾವಣಾ ಆಯೋಗದ ಕರೆ ಅಂತ ತೋರುತ್ತಿತ್ತು.
ಪ್ರಿಯಾಂಕ ಅವರು ಕೂಡ ಕಾಲ್ ರಿಸೀವ್ ಮಾಡಿದ್ದಾರೆ. ಬಳಿಕ ಅವರಿಗೆ ಸಂದೇಶಗಳು ಕೇಳಲು ಆರಂಭಿಸಿದೆ. "ನೀವು ಬಿಜೆಪಿಗೆ ವೋಟ್ ಮಾಡುವುದಾದರೆ ಒಂದನೇ ನಂಬರ್ ಪ್ರೆಸ್ ಮಾಡಿ. ಕಾಂಗ್ರೆಸ್ಗೆ ವೋಟ್ ಮಾಡುವುದಾದರೆ 2ನೇ ನಂಬರ್ ಪ್ರೆಸ್ ಮಾಡಿ. ಜೆಡಿಎಸ್ ಆದರೆ ಮೂರನೇ ನಂಬರ್ ಪ್ರೆಸ್ ಮಾಡಿ" ಎಂದಿದ್ದಾರೆ. ಇದೇ ರೀತಿಯ ಕರೆಗಳು ನಗರದಲ್ಲಿ ಅನೇಕರಿಗೆ ಬಂದಿವೆ. ಕೇವಲ ಯಾರಿಗೆ ಮತ ಹಾಕುತ್ತೀರಿ ಅಂತ ಮಾತ್ರವಲ್ಲ, ಅನೇಕ ಮಾಹಿತಿಯನ್ನ ಮತದಾರರಿಂದ ಸಂಗ್ರಹಿಸುತ್ತಿದ್ದಾರೆ.
ಖಾಸಗಿ ಸಂಸ್ಥೆಗಳು, ಮೀಡಿಯಾ ಏಜೆನ್ಸಿಗಳ ಕಾಲ್, ಮೆಸೇಜ್ ಮೂಲಕ ಮತದಾರರ ಮಾಹಿತಿ ಸಂಗ್ರಹಿಸುತ್ತಿವೆ. ರಾಜಕೀಯ ಪಕ್ಷಗಳಿಗೆ ಹಾಗೂ ಚುನಾವಣಾ ಅಭ್ಯರ್ಥಿಗಳಿಗೆ ಈ ಮಾಹಿತಿಯನ್ನು ನೀಡುತ್ತಿವೆ. ಮತ್ತೊಂದು ಗಮನಿಸಬೇಕಾದ ವಿಷಯ ಏನೆಂದರೆ, ಆ ಕ್ಷೇತ್ರದಿಂದ ಬೇರೆ ಕಡೆ ಮನೆಗಳಿಗೆ ಶಿಫ್ಟ್ ಮಾಡಿರುವಂತಹ, ಹೊಸದಾಗಿ ಆ ಕ್ಷೇತ್ರಕ್ಕೆ ಬಂದಿರುವಂತಹ ಜನರಿಗೂ ಕೂಡ ಕರೆಗಳು ಬರುತ್ತಿವೆ.
ಉದ್ಯಮಿಯಾದ ಪಿ.ವೈಶಾಕ್ ಅವರಿಗೂ ಇದೇ ರೀತಿಯ ಅನುಭವ ಆಗಿದೆ. "ಇಂದಿರಾನಗರದಲ್ಲಿ ವಾಸವಿದ್ದ ನಾನು ಅನೇಕ ವರ್ಷಗಳ ಹಿಂದೆಯೇ ರಾಜ್ಯವನ್ನ ಬಿಟ್ಟು ಹೋಗಿದ್ದೇನೆ. ಆದರೆ, ಎಎಪಿ ಪಕ್ಷದ ಕಡೆಯಿಂದ ನನಗೆ ಕರೆಯೊಂದು ಬಂದಿತ್ತು. ನನ್ನ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದೇ ಇದ್ರೂ, ನನಗೆ ಯಾಕೆ ಕರೆ ಬಂತು? ನನ್ನ ಫೋನ್ ನಂಬರ್ ಪಕ್ಷದ ಕಾರ್ಯಕರ್ತರಿಗೆ ಹೇಗೆ ಸಿಕ್ತು ಅನ್ನೋದೇ ನನಗೆ ಅಶ್ಚರ್ಯ ಹುಟ್ಟಿಸಿತು. ಸರ್ಕಾರ ಮತ್ತು ಚುನಾವಣಾ ಆಯೋಗ ಈ ಬಗ್ಗೆ ಯಾಕೆ ಗಮನ ಹರಿಸುತ್ತಿಲ್ಲ ಅನ್ನೋದು ಕೂಡ ನಿಗೂಢವಾಗಿದೆ" ಅನ್ನುತ್ತಾರೆ ವೈಶಾಕ್.
ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಅವರ ಹೆಸರಿನಲ್ಲೂ ಕರೆಗಳು: ಹೌದು, ಬಸವರಾಜ ಬೊಮ್ಮಾಯಿ ಅವರ ಹೆಸರಿನಲ್ಲಿ, ಪ್ರಧಾನಿ ಮೋದಿ ಅವರ ಹೆಸರಿನಲ್ಲೂ ಕೂಡ ಕರೆಗಳು ಬರುತ್ತಿವೆ. ಈಗಾಗಲೇ ಧ್ವನಿ ಮುದ್ರಣಗೊಂಡಿರುವ ಆ ಕರೆಯಲ್ಲಿ ನಾಯಕರು ಮತ ಕೋರುವಂತಹ ಪ್ರಕ್ರಿಯೆಗಳು ನಡೆಯುತ್ತಿವೆ. ಮತ್ತೊಂದು ಸಂಗತಿ ಏನಂದ್ರೆ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನ ವಿಷಸರ್ಪಕ್ಕೆ ಹೋಲಿಸಿದ್ರು. ಈ ಘಟನೆ ನಡೆದ ಕೆಲವೇ ಗಂಟೆಗಳ ಒಳಗೆ ಕರೆಯೊಂದು ಬಂದಿತ್ತಂತೆ.