ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಗಮಿಸಿದ್ದು, ರಾಹುಲ್ ಅವರನ್ನು ಸ್ವಾಗತ ಮಾಡಲು ಸಿದ್ದರಾಮಯ್ಯ ಅವರೊಂದಿಗೆ ಪಕ್ಷದ ನಾಯಕರು ತೆರಳಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು ಬ್ಯಾಡೇಜ್ ಹಾಕಿಕೊಂಡಿದ್ದನ್ನು ಗಮನಿಸಿದ ರಾಹುಲ್ ಗಾಂಧಿ ಅವರು ಕೂಡ ಸಿದ್ದು ಅವರ ಆರೋಗ್ಯ ಬಗ್ಗೆ ವಿಚಾರಿಸಿದ್ದಾರೆ. ಈ ವೇಳೆ ಕೈ ತುಂಬಾ ನೋವಿದೆ ಎಂದ ಸಿದ್ದರಾಮಯ್ಯ ಅವರಿಗೆ ವಿಶ್ರಾಂತಿ ಪಡೆದುಕೊಳ್ಳಲು ರಾಹುಲ್ ಸಲಹೆ ನೀಡಿದ್ದಾರೆ.
ಇನ್ನು, ನಿನ್ನೆ ಸಿದ್ದರಾಮ್ಯಯ ಅವರು ಕೊಪ್ಪಳದಲ್ಲಿ ನಡೆದ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಿದ್ದರು. ಈ ವೇಳೆ ಜನ ತಳ್ಳಾಟ, ಕೈ ಹಿಸುಕಿದ ಪರಿಣಾಮ ಸಿದ್ದು ಅವರು ಎಡಗೈಗೆ ಬ್ಯಾಂಡೇಜ್ ಹಾಕಿಕೊಂಡಿದ್ದಾರೆ. ಕೈ ನೋವಿದ್ದರೂ ಸಿದ್ದರಾಮಯ್ಯ ಅವರು ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ವೇದಿಕೆ ಮೇಲೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆ.ಎಚ್ ಮುನಿಯಪ್ಪ ಕುಳಿತುಕೊಂಡಿದ್ದರು.
ಬಿಜೆಪಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿರುವ ಜಗದೀಶ್ ಶೆಟ್ಟರ್ ಜೊತೆಗೆ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಈ ವೇಳೆ ಕಾಂಗ್ರೆಸ್ ಸೇರ್ಪಡೆಗೆ ಮುಕ್ತ ಸ್ವಾಗತ ನೀಡಿದ್ದು, ನಿಮಗೆ ಕಾಂಗ್ರೆಸ್ ನಿಂದ ಎಲ್ಲಾ ಗೌರವ ಇದೆ ಎಂದು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
ಇತ್ತ ಕಾಂಗ್ರೆಸ್ ಜೈ ಭಾರತ್ ಸಮಾವೇಶದಲ್ಲಿ ಭಾಗಿಯಾಗಿದ್ದ ಶಾಸಕ ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರ ಮೇಲೆ ಮುನಿಸಿಕೊಂಡಂತೆ ಕಂಡು ಬಂತು. ಜೈ ಭಾರತ್ ಸಮಾವೇಶದ ವೇದಿಕೆ ಮೇಲಿನ ಮೂರನೇ ಸಾಲಿನಲ್ಲಿ ರಮೇಶ್ ಕುಮಾರ್ ಕುಳಿತುಕೊಂಡಿದ್ದರು, ಇತ್ತ ಕೆಎಚ್ ಮುನಿಯಪ್ಪ ಮೊದಲ ಸಾಲಿನಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಕುಳಿತಿದ್ದರು. ಸಿದ್ದರಾಮಯ್ಯ ಅವರು ಕೋಲಾರ ಸ್ಪರ್ಧೆ ಮಾಡದ ಕಾರಣ ರಮೇಶ್ ಕುಮಾರ್ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.