ಪುತ್ಥಳಿಯ ಉದ್ಘಾಟನೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಅವನಿಗೆ ಅವನದೇ ಆದ ಹಲವಾರು ಕನಸುಗಳಿತ್ತು, ಆದರೆ ಅವನನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಒಬ್ಬ ಕಾರ್ಯಕರ್ತನ ಬಲಿದಾನವಾದಾಗ ಇಡೀ ಪಕ್ಷ ಅವನ ಜೊತೆ ನಿಂತಿತು. ಅವನ ಕನಸಿನಲ್ಲಿ ಒಂದಾದ ಮನೆ ನಿರ್ಮಾಣದ ಕನಸು ಅರ್ಧದಲ್ಲೇ ನಿಂತಿತ್ತು. ಆ ಕನಸನ್ನು ನನಸು ಮಾಡಲು ನಾವೆಲ್ಲಾ ಕೂತು ಚರ್ಚೆ ಮಾಡಿದ್ದೇವು. ಅವನ ಕುಟುಂಬಕ್ಕೆ ಬೇಕಾದ ಪೂರ್ಣವಾದ ಆರ್ಥಿಕ ಶಕ್ತಿಯನ್ನು ತುಂಬುವ ಕೆಲಸವನ್ನು ಪಕ್ಷ ಮಾಡಿದೆ ಎಂದು ಹೇಳಿದ್ದಾರೆ.
ಅಲ್ಲದೆ, ಪ್ರವೀಣ್ ಪಕ್ಷದ ಕಾರ್ಯಕರ್ತನ ಜೊತೆಗೆ ತನ್ನ ಕುಟುಂಬವನ್ನೂ ಬೆಳೆಸುತ್ತಿದ್ದ, ಪ್ರವೀಣ್ ಹತ್ಯೆಯ ನಂತರ ಅವನ ಹಂತಕರಿಗೆ ಉತ್ತರ ಕೊಡಬೇಕೆಂದು ನಿಶ್ಚಯ ಮಾಡಿದ್ದೆವು. ಪ್ರವೀಣ್ ಹತ್ಯೆಯೇ ಕೊನೆಯಾಗಬೇಕೆಂದು ನಿಶ್ಚಯ ಮಾಡಿ ಪಿಎಫ್ಐ ಮಟ್ಟ ಹಾಕಬೇಕೆಂದು ನಿರ್ಧರಿಸಿ ಪ್ರಕರಣವನ್ನು ಎನ್.ಐ.ಎಗೆ ಕೊಟ್ಟಾಗ ಹತ್ಯೆಯ ಕಾರಣ ಹೊರ ಬಂದಿದೆ. ಅಲ್ಲದೇ, ಪಿಎಫ್ಐ ನಿಷೇಧವಾಗಿದೆ, ಬೇರೆ ಬೇರೆ ಪ್ರಕರಣದಲ್ಲಿ ಭಾಗಿಯಾದ ಸುಮಾರು 400 ಪಿಎಫ್ಐ ಕಾರ್ಯಕರ್ತರನ್ನು ಎನ್.ಐ.ಎ ಬಂಧಿಸಿದೆ. ಈ ಮೂಲಕ ಪ್ರವೀಣ್ ನ ಆತ್ಮಕ್ಕೂ ಶಾಂತಿ ಕೊಡುವ ಪ್ರಯತ್ನ ಮಾಡಿದ್ದೇವೆ ಎಂದು ತಿಳಿಸಿದರು.
ಪ್ರವೀಣ್ ನೆಟ್ಟಾರು ಕನಸು ಕೇವಲ ಮನೆ ಕಟ್ಟುವುದಾಗಿರಲಿಲ್ಲ, ಅವನದ್ದು ರಾಷ್ಟ್ರ ಕಟ್ಟುವ ಕನಸಾಗಿತ್ತು. ರಾಷ್ಟ್ರಕಟ್ಟುವ ಕನಸಿಗೋಸ್ಕರ ತನ್ನ ಬಲಿದಾನವನ್ನೇ ಮಾಡಿದ್ದಾನೆ. ದೇಶವನ್ನು ಕಬಳಿಸುವ ಪ್ರಯತ್ನ ಭಯೋತ್ಪಾದಕರಿಂದ ಆಗುತ್ತಿದೆ. ದೇಶದಲ್ಲಿ ಯಾವಾಗ ಕಾಂಗ್ರೆಸ್ ಅಧಿಕಾರ ಬಂತೋ ಅಂದಿನಿಂದ ಮುಸ್ಲಿಂ ತುಷ್ಠೀಕರಣ ಪ್ರಾರಂಭವಾಯಿತು. ಇವತ್ತು ಕೂಡಾ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ ಎಂದರು.
ಮುಸ್ಲಿಂ ತುಷ್ಠೀಕರದ ನಡುವೆಯೇ ಪ್ರವೀಣ್ ಹತ್ಯೆ ನಡೆದಿದ್ದು, ಮುಸ್ಲಿಮರಿಗೆ ರಾಜಾರೋಷವಾಗಿ ನಡೆಯಬಹುದು ಎನ್ನುವಂತಹ ತಯಾರಿ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಓರ್ವ ದೇಶಭಕ್ತನ ಕೊಲೆ ಆಯ್ತು. ಇದನ್ನು ಹೀಗೇ ಬಿಟ್ಟಲ್ಲಿ ಇದು ಮುಂದುವರಿಯುತ್ತದೆ. ದೇಶಭಕ್ತ ಬಂದುಗಳು ಚುನಾವಣೆಯ ಈ ಸಂದರ್ಭದಲ್ಲಿ ಪ್ರತಿಜ್ಞೆ ತೆಗೆದುಕೊಳ್ಳಬೇಕು. ಬಿಜೆಪಿ ಪಕ್ಷಕ್ಕೆ ತಮ್ಮ ಬೆಂಬಲ ನೀಡಬೇಕು, ಪ್ರವೀಣ್ ಗೆ ಕೂಡಾ ಅದೇ ರೀತಿಯ ಚಿಂತನೆಯಿತ್ತು. ಬಿಜೆಪಿಯನ್ನು ಎಲ್ಲಾ ಕಡೆ ಗೆಲ್ಲಿಸಬೇಕು ಎನ್ನುವ ಆಸೆ ಪ್ರವೀಣ್ಗೆ ಇತ್ತ ಎಂದು ಕಲ್ಲಡ್ಕ ಪ್ರಭಾಕರ್ ಭಟ್ ತಿಳಿಸಿದ್ದಾರೆ.