ಕಲಾಪ ಆರಂಭಕ್ಕೂ ಮುನ್ನ ವಿಧಾನಸೌಧದ ಪೂರ್ವ ಭಾಗದ ಕಾಂಪೌಂಡ್ ಬಳಿ ಕಾಂಗ್ರೆಸ್ ನಾಯಕರು ಗೋವಿನ ಗಂಜಲ ಸಿಂಪಡಿಸಿ ಶುದ್ಧೀಕರಣ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡ ಮನೋಹರ್ ನೇತೃತ್ವದಲ್ಲಿ ಶುದ್ಧೀಕರಣ ಕಾರ್ಯ ನಡೆದಿದೆ. ಇಂದು ಬೆಳಗ್ಗೆ ಪುರೋಹಿತರೊಂದಿಗೆ ಆಗಮಿಸಿದ ಕಾಂಗ್ರೆಸ್ ನಾಯಕರು ಶುದ್ಧೀಕರಣ ಕಾರ್ಯ ನೆರವೇರಿಸಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರದ ದುರಾಡಳಿತ ಕೊನೆಗೊಂಡಿರುವ ಹಿನ್ನೆಲೆಯಲ್ಲಿ ಈ ಕಾರ್ಯ ಮಾಡಿದ್ದೇವೆ. ಇದು 40% ಬಿಜೆಪಿ ಸರ್ಕಾರದ ಶುದ್ಧೀಕರಣ ಎಂದು ಮನೋಹರ್ ಹೇಳಿದ್ದಾರೆ. ಮೂರು ದಿನ ಅಧಿವೇಶನ ಇಂದು, ನಾಳೆ ಮತ್ತು ನಾಡಿದ್ದು ವಿಧಾನಸಭೆ ಅಧಿವೇಶನ ಆರಂಭಗೊಂಡಿದೆ. ಕೊನೆಯ ದಿನ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಕಾಂಗ್ರೆಸ್ ಹಿರಿಯ ನಾಯಕ ಆರ್ವಿ ದೇಶಪಾಂಡೆ ಹಂಗಾಮಿ ಸ್ಪೀಕರ್ ಆಗಿದ್ದು, ಸದನ ನಡೆಸಿಕೊಂಡು ಹೋಗುತ್ತಿದ್ದಾರೆ. ಚುನಾವಣೆ ಬಳಿಕ ಮೊದಲ ಬಾರಿಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮುಖಾಮುಖಿಯಾಗಿದ್ದಾರೆ. ನೂತನ ಸಿಎಂ ಮತ್ತು ಡಿಸಿಎಂ ಅವರಿಗೆ ಬಿಜೆಪಿ ಶಾಸಕರು ಶುಭಕೋರಿದರು. ವಿರೋಧ ಪಕ್ಷದ ಮೊದಲ ಸಾಲಿನ ಮೊದಲ ಆಸನದಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕುಳಿತಿದ್ದಾರೆ.