ಮಳೆಯ ಸಿಂಚನದ ನಡುವೆಯೂ ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿದರು. ಇವತ್ತು ಬೆಳಗ್ಗೆಯೇ ರಾಜಧಾನಿಯಲ್ಲಿ ಮಳೆ ಶುರುವಾಗಿದ್ದರಿಂದ ಮೋದಿ ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಆದರೆ ರೋಡ್ಶೋ ಆರಂಭದ ವೇಳೆಗೆ ಮಳೆ ಕಡಿಮೆಯಾಯ್ತು. ಇನ್ನು ರಾಜಭವನದಿಂದ ರಸ್ತೆ ಮಾರ್ಗವಾಗಿ ನ್ಯೂ ತಿಪ್ಪಸಂದ್ರಕ್ಕೆ ಆಗಮಿಸಿದ ಪ್ರಧಾನಿಗಳು ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್ಶೋಗೆ ಚಾಲನೆ ನೀಡಿದರು. ಆರೂವರೆ ಕಿಲೋಮೀಟರ್ ನಡೆದ ರೋಡ್ಶೋನಲ್ಲಿ ಅಭಿಮಾನಿಗಳ ಮೇಲೆ ಹೂವಿನ ಮಳೆಯನ್ನೇ ಸುರಿಸಿದರು. ನಿನ್ನೆಗಿಂತ ಇಂದು ಮಾರ್ಗ ಕಡಿಮೆಯಾಗಿದ್ದರಿಂದ ರೋಡ್ಶೋ ನಿಧಾನವಾಗಿ ನಡೆಯಿತು. ಇನ್ನು ಪ್ರಧಾನಿಗಳ ಆಗಮನಕ್ಕೂ ಮುನ್ನ ವಿವಿಧ ಕಲಾತಂಡಗಳು ರೋಡ್ಶೋಗೆ ಮೆರಗು ತುಂಬಿದವು. ಅಭಿಮಾನಿಯೊಬ್ಬರು ಪ್ರಧಾನಿಗಳಿಗಾಗಿ ಚಾಕೋಲೇಟ್ ಹಾರ ಸಹ ತಂದಿದ್ದರು. ಇನ್ನು ಅಭಿಮಾನಿಗಳು ತೆರೆದ ವಾಹನದಲ್ಲಿ ಪ್ರಧಾನಿಗಳನ್ನು ಕಂಡು ದೂರದಿಂದಲೇ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಪಟ್ಟರು. ಒಂದು ಗಂಟೆ 30 ನಿಮಿಷ ರೋಡ್ಶೋ ನಡೆಯಿತು. ಸುರಂಜನ್ ದಾಸ್ ರಸ್ತೆಯಿಂದ ಆರಂಭವಾದ ರೋಡ್ಶೋ ಟ್ರಿನಿಟ್ ಸರ್ಕಲ್ನಲ್ಲಿ ಮುಕ್ತಾಯವಾಯ್ತು. ಮೋದಿ ರೋಡ್ ಶೋ ಮಾರ್ಗದಲ್ಲಿರುವ ಮನೆ, ಅಪಾರ್ಟ್ಮೆಂಟ್, ಮಳಿಗೆಗಳಿಗೆ ಪೂರ್ವ ವಿಭಾಗ ಡಿಸಿಪಿಯವರಿಂದ ನೋಟಿಸ್ ಜಾರಿ ಮಾಡಲಾಗಿತ್ತು. ಮನೆ, ಮಳಿಗೆಗಳ ಮೇಲೆ ಅಪರಿಚಿತರನ್ನು ಸೇರಿಸುವಂತಿಲ್ಲ. ಅನುಮಾನಸ್ಪದ ವಸ್ತುಗಳು ಕಂಡು ಬಂದಲ್ಲಿ ಮಾಹಿತಿ ಕೊಡಬೇಕು ಎಂದು ಹೇಳಲಾಗಿತ್ತು