ರಾಜಧಾನಿಯ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ ಹಾಗೂ ಕೇಂದ್ರ ಭಾಗ ಸೇರಿದಂತೆ ಎಲ್ಲಾ ಕಡೆ ವರುಣ ಅಬ್ಬರಿಸಿದ್ದಾನೆ. ರಾತ್ರಿ ಇಡೀ ಸುರಿದ ಮಳೆಗೆ ಹಲವು ತಗ್ಗು ಪ್ರದೇಶಗಳಲ್ಲಿ ನೀರು ಹರಿದಿದೆ. ಪರಿಣಾಮ ಮನೆ ಒಳಕ್ಕೆ ಮಳೆ ನೀರು ನುಗ್ಗಿ ಸ್ಥಳೀಯ ನಿವಾಸಿಗಳು ಪರದಾಡುವಂತಾಯ್ತು. ನಗರದ ಪ್ರಮುಖ ರಸ್ತೆಗಳಲ್ಲೆಲ್ಲ ನೀರು ನುಗ್ಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದ ವಾಹನ ಸವಾರರು ಸಂಕಷ್ಟಪಡುವಂತಾಯ್ತು.
ವೈಯಾಲಿಕಾವಲ್ ಬಳಿ ರಸ್ತೆ ಬದಿ ಮಣ್ಣು ಕುಸಿದು ಕಾರೊಂದು ಸಂಪೂರ್ಣವಾಗಿ ಜಖಂಗೊಂಡಿತು. ಜೆ.ಸಿ.ನಗರದ ಕುರುಬರಹಳ್ಳಿ, ಮೂಡಲಪಾಳ್ಯ, ಎಚ್ಎಸ್ಆರ್ ಲೇಔಟ್, ಕೋರಮಂಗಲ, ಚಿಕ್ಕಕಲ್ಲಸಂದ್ರ, ಪದ್ಮನಾಭನಗರ, ವಿಜಯನಗರ, ರಾಯಪುರಂ, ಬಸವೇಶ್ವರನಗರ 6ನೇ ಕ್ರಾಸ್, ಜಯನಗರ 3ನೇ ಬ್ಲಾಕ್, ಶಿವಾಜಿನಗರ, ಸೇರಿದಂತೆ ಹಲವು ಬಡಾವಣೆಗಳಲ್ಲಿನೂರಾರು ಮನೆಗಳಿಗೆ ನೀರು ನುಗ್ಗಿ ಸಮಸ್ಯೆಯಾಯಿತು.
ರಸ್ತೆಗಳಲ್ಲಿ ಪ್ರವಾಹದಂತೆ ನೀರು ಹರಿದ ಪರಿಣಾಮ ದ್ವಿಚಕ್ರ ವಾಹನಗಳು, ಕಾರುಗಳು ಕೊಚ್ಚಿ ಹೋಗಿ ಹಾನಿಗೀಡಾದವು. ನಗರದ ಮಿನರ್ವ ವೃತ್ತ, ಕೆ.ಎಚ್.ರಸ್ತೆ, ರಿಚ್ಮಂಡ್ ರಸ್ತೆ, ಮೈಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆ, ಕನಕಪುರ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳು ಕೆರೆಗಳಂತಾಗಿದ್ದವು. ಅಡಿಗಟ್ಟಲೆ ನಿಂತಿದ್ದ ನೀರಿನಲ್ಲಿ ಸಂಚರಿಸಲಾಗದೆ ವಾಹನ ಸವಾರರು ಪರದಾಡಿದರು.
ನಿನ್ನೆ ರಾತ್ರಿ 9:45 ರ ವೇಳೆಗೆ ಒಟ್ಡಾರೆ ಬೆಂಗಳೂರಲ್ಲಿ 95 mm ಮಳೆ ಸುರಿದಿದೆ. ನಗರದ ಹಲವು ಏರಿಯಾದಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಒಂದು ಗಂಟೆಯಲ್ಲಿ 100 mm ಹೆಚ್ಚು ಮಳೆ ಸುರಿದು ದಾಖಲೆ ನಿರ್ಮಿಸಿದೆ. ಗುಡುಗು ಸಹಿತ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ. ವಿದ್ಯಾಪೀಠ 113 mm ಮಳೆ, ಸಂಪಂಗಿರಾಮನಗರ 100.3 mm ಮಳೆ, ನಾಗಪುರ 100 mm ಮಳೆ, ಅಗ್ರಹಾರ ದಾಸರಹಳ್ಳಿ 97.5 mm ಮಳೆ, ಹಂಪಿ ನಗರ 93.5 mm ಮಳೆ, ರಾಜಮಹಲ್ ಗುಟ್ಟಹಳ್ಳಿ 95 mm ಮಳೆ, ದಯಾನಂದ ನಗರ 82 mm ಮಳೆ, ಹೊರಮಾವು 12.5 ಸೆ.ಮೀ ಮಳೆ,ಸಂಪಂಗಿರಾಮನಗರ 11.85 ಸೆ.ಮೀ ಮಳೆ,ಕೆ.ನಾರಾಯಣಪುರ 11.75 ಸೆ.ಮೀ, ವಿದ್ಯಾಪೀಠ 11.05 ಸೆ.ಮೀ ಮಳೆ, ಅಗ್ರಹಾರ ದಾಸರಹಳ್ಳಿ 10.2 ಸೆ.ಮೀ ಮಳೆಯಾಗಿರೋ ಬಗ್ಗೆ ವರದಿಯಾಗಿದೆ.
ಹಲವೆಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಬೆಸ್ಕಾಂ ವ್ಯಾಪ್ತಿಯ ಕೆಂಗೇರಿ-1 ಉಪ ವಿಭಾಗದ ಕುಂಬಳಗೋಡು ವ್ಯಾಪ್ತಿಯಲ್ಲಿ ಭಾರೀ ಮಳೆ ಹಾಗೂ ಗಾಳಿಗೆ 400 ಕೆ.ವಿ. ಸಾಮರ್ಥ್ಯದ ಬೃಹತ್ ವಿದ್ಯುತ್ ಟವರ್ಗಳು ಹಾಗೂ 36 ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಇದರಿಂದ ಸುಮಾರು 20 ಹಳ್ಳಿಗಳು 4 ದಿನ ಸಂಪೂರ್ಣ ಕಗ್ಗತ್ತಲಲ್ಲಿ ಹಾಗೂ ಮತ್ತೆ 3 ದಿನ ಭಾಗಶಃ ವಿದ್ಯುತ್ ವ್ಯತ್ಯಯವಾಗಿದೆ.