ಬೆಂಗಳೂರು: ಏರೋ ಇಂಡಿಯಾ 2023ರ (Aero India)ವಿಮಾನಗಳ ಪ್ರದರ್ಶನದಲ್ಲಿ ಹೆಚ್ಎಎಲ್ ನಿರ್ಮಾಣದ ಮಾರುತ್ ಹೆಸರಿನ HLFT-42 ಯುದ್ದ ವಿಮಾನದ ಮೇಲೆ ಹನುಮಂತನ (Hanuman) ಚಿತ್ರವನ್ನು ಹಾಕಿದ್ದಕ್ಕೆ ಪರ-ವಿರೋಧ ಚರ್ಚೆಗಳು ಶುರುವಾಗಿತ್ತು. ಇದರ ಬೆನ್ನಲ್ಲೇ ಹೆಚ್ಎಎಲ್ ಅಧಿಕಾರಿಗಳು ಹನುಮಾನ್ ಚಿತ್ರವನ್ನು ವಿಮಾನದಿಂದ ತೆಗೆದು ಹಾಕಿದ್ದರು. ಆದರೆ ಏರೋ ಇಂಡಿಯಾ ಏರ್ ಶೋ ಕೊನೆಯ ದಿನವಾದ ಇಂದು ವಿಮಾನದ ಮೇಲೆ ಮತ್ತೆ ಹನುಮಾನ್ ಚಿತ್ರ ಪ್ರತ್ಯಕ್ಷವಾಗಿದೆ.
ಈ ವೇಳೆ ಸ್ಪಷ್ಟನೆ ನೀಡಿದ್ದ ಹೆಚ್ಎಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿ.ಬಿ.ಅನಂತಕೃಷ್ಣನ್, " ಆಂತರಿಕ ಚರ್ಚೆಯ ನಂತರ ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲ ಎಂಬ ಕಾರಣದಿಂದ ಅದನ್ನು ತೆಗೆದುಹಾಕಲು ನಿರ್ಧರಿಸಿದ್ದೇವೆ " ಎಂದಿದ್ದರು. ಅಲ್ಲದೆ ಮೊದಲು ವಿಮಾನದ ಶಕ್ತಿಯನ್ನು ಪ್ರದರ್ಶಿಸಲು ಹನುಮಂತನ ಚಿತ್ರವನ್ನು ಬಳಸಲು ನಿರ್ಧರಿಸಲಾಗಿತ್ತು ಎಂದ ಮಾಹಿತಿ ಲಭ್ಯವಾಗಿತ್ತು.
ಇನ್ನು, 5 ದಿನಗಳ ಕಾಲ ನಡೆದ ಏರ್ ಶೋ ಇಂದು ತೆರೆ ಬಿದ್ದಿದೆ. ಕಳೆದ 4 ದಿನಗಳಿಂದ ಕೂಡ ಏರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ನಿನ್ನೆ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಂದಿ ಏರ್ ಶೋಗೆ ಆಗಮಿಸಿದ್ದರು. ಇಂದು ಕೊನೆ ದಿನವಾದ ಕಾರಣ ಸುಮಾರು ಒಂದೂವರೆ ಲಕ್ಷ ಜನ ಏರ್ ಶೋಗೆ ಸಾಕ್ಷಿಯಾಗಿದ್ದಾರೆ. ಇಂದು ಏರ್ ಶೋದಲ್ಲಿ ಸೂರ್ಯಕಿರಣ, ಸಾರಂಗ, ತೇಜಸ್, ಸುಕೋಯ್, ರಫೇಲ್, LUT ಹೆಲಿಕಾಪ್ಟರ್, ಡಕೋಟಾ ಸೇರಿದಂತೆ ಹಲವು ವಿಮಾನಗಳು ಶಕ್ತಿ ಪ್ರದರ್ಶನ ತೋರಿದ್ದವು.
ಏರ್ ಶೋಗೆ ಮಕ್ಕಳೊಂದಿಗೆ ಆಗಮಿಸಿದ್ದ ಹಲವು ಪೋಷಕರು ಬಾನಂಗಳದಲ್ಲಿ ಚಿತ್ತರ ಮೂಡಿಸುತ್ತಿದ್ದ ಲೋಹದ ಹಕ್ಕಿಗಳ ಪ್ರದರ್ಶನಕ್ಕೆ ಮನಸೋತಿದ್ದರು. ರಾಜ್ಯ ಮಾತ್ರವಲ್ಲದೆ ದೇಶ-ವಿದೇಶಗಳಿಂದಲೂ ಕೂಡ ಸಾವಿರಾರರು ಜನ ಬೆಂಗಳೂರಿಗೆ ಆಗಮಿಸಿ ಏರ್ ಶೋದಲ್ಲಿ ಭಾಗವಹಿಸಿದ್ದರು. ಅಲ್ಲದೆ ತಮ್ಮ ಮೊಬೈಲ್ ಕೈಲಿ ಹಿಡಿದು ಲೋಹದ ಹಕ್ಕಿಗಳ ಪ್ರದರ್ಶನವನ್ನು ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಾಣುತ್ತಿತ್ತು.