ದೆಹಲಿ-ಉತ್ತರಾಖಂಡ್ ಹೆದ್ದಾರಿಯಲ್ಲಿ ರಿಷಭ್ ಪಂತ್ ಅವರ ಕಾರು ಡಿವೈಡರ್ಗೆ ಡಿಕ್ಕಿ ಹೊಡೆದು ಬೆಂಕಿಗೆ ಸಂಪೂರ್ಣ ಭಸ್ಮವಾಗಿದೆ. ಆದರೆ ಅದೃಷ್ಠವಶಾತ್ ಪಂತ್ ಜೀವಾಪಾಯದಿಂದ ಬದುಕುಳಿದಿದ್ದಾರೆ. ಆದರೆ ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಪಂತ್ ಕಾರು ಅಪಘಾತವಾಗಲು ಅವರು ಆ ವೇಳೆ ಡ್ರಿಂಕ್ಸ್ ಮಾಡಿದ್ದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗುತ್ತಿದೆ. ಆದರೆ ಇದರ ಕುರಿತು ಇದೀಗ ಹರಿದ್ವಾರದ ಎಸ್ಎಸ್ಪಿ ಅಜಯ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಕ್ರಿಕೆಟಿಗ ಪಂತ್ ಕುಡಿದು ಮಿತಿಮೀರಿದ ವೇಗದ ಬಗ್ಗೆ ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ ಅವರು ಕಾರು ಚಲಾಯಿಸುವಾಗ ಯಾವುದೇ ರೀತಿಯಲ್ಲಿಯೂ ಕುಡಿದು ಕಾರನ್ನು ಚಲಾಯಿಸುತ್ತಿರಲಿಲ್ಲ ಎಂದು ಹರಿದ್ವಾರದ ಎಸ್ಎಸ್ಪಿ ಅಜಯ್ ಸಿಂಗ್ ಹೇಳಿದ್ದಾರೆ. ಅಲ್ಲದೇ ವಾಹನದ ವೇಗವು ಸಾಮಾನ್ಯವಾಗಿದೆ ಮತ್ತು ಪಂತ್ ಮದ್ಯಪಾನದ ಸ್ಥಿತಿಯಲ್ಲಿ ಇರಲಿಲ್ಲ ಎಂದಿದ್ದಾರೆ.
ಇದಕ್ಕೂ ಒಂದು ದಿನ ಮೊದಲು, ದೆಹಲಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ (ಡಿಡಿಸಿಎ) ಅಧಿಕಾರಿಯೊಬ್ಬರು, ಕ್ರಿಕೆಟಿಗ ಪಂತ್ ಅವರು ಹೆದ್ದಾರಿಯಲ್ಲಿನ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸುವಾಗ ಅಪಘಾತಕ್ಕೀಡಾಗಿದ್ದಾರೆ ಎಂದು ಹೇಳಿದ್ದರು. ಏತನ್ಮಧ್ಯೆ, ಸೋಂಕಿನ ಅಪಾಯವನ್ನು ಉಲ್ಲೇಖಿಸಿ ಪಂತ್ ಅವರನ್ನು ಯಾರೂ ಸಹ ಭೇಟಿ ಮಾಡದಂತೆ ಜನರಿಗೆ ಡಿಡಿಸಿಎ ನಿರ್ದೇಶಕ ಶ್ಯಾಮ್ ಶರ್ಮಾ ಸಲಹೆ ನೀಡಿದ್ದಾರೆ.
ಶರ್ಮಾ ಈ ಕುರಿತು ಮಾತನಾಡಿದ್ದು, ‘ಪಂತ್ ಅವರನ್ನು ಭೇಟಿ ಮಾಡಲು ಹೋಗುವವರು ಸೋಂಕಿನ ಸಾಧ್ಯತೆಯಿರುವುದರಿಂದ ಅದನ್ನು ತಪ್ಪಿಸಬೇಕು‘ ಎಂದು ಹೇಳಿದ್ದಾರೆ. ಜೊತೆಗೆ ಪಂತ್ ಅವರನ್ನು ಭೇಟಿ ಮಾಡಲು ಯಾವುದೇ ವಿಐಪಿ ಗಳಿಗೂ ಅವಕಾಶ ನೀಡಲಾಗುತ್ತಿಲ್ಲ. ಅವರನ್ನು ಭೇಟಿ ಮಾಡಲು ಬರುವ ಜನರಿಂದ ಪಂತ್ ಸೋಂಕಿಗೆ ಒಳಗಾಗಬಹುದು ಎಂಬ ಕಾರಣದಿಂದ ಅದನ್ನು ತಪ್ಪಿಸಬೇಕು. ಅಲ್ಲದೇ ಈ ವೇಳೆ ಅವರ ಆರೋಗ್ಯಕ್ಕೆ ಮೊದಲ ಆಧ್ಯತೆ ನೀಡಬೇಕು ಎಂದಿದ್ದಾರೆ.
ಕ್ರಿಕೆಟಿಗನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ತಂಡದ ಸದಸ್ಯರೊಬ್ಬರು ಟೈಮ್ಸ್ ಆಫ್ ಇಂಡಿಯಾಕ್ಕೆ ನೀಡಿರುವ ಮಾಹಿತಿ ಪ್ರಕಾರ, ‘ಅವರ ಸ್ಥಿತಿಯನ್ನು ಮೂಳೆಚಿಕಿತ್ಸೆ ವಿಭಾಗದ ಡಾ. ಗೌರವ್ ಗುಪ್ತಾ ಅವರು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪಂತ್ ಸ್ಥಿರವಾಗಿದ್ದಾರೆ, ಯಾವುದೇ ಪ್ರಾಣಾಪಾಯಕಾರಿ ಗಾಯದಿಂದ ಬಳಲುತ್ತಿಲ್ಲ. ಅವನ ತಾಯಿ ಅವನೊಂದಿಗೆ ಆಸ್ಪತ್ರೆಯಲ್ಲಿದ್ದಾರೆ‘ ಎಂದು ಹೇಳಿದ್ದಾರೆ.