19 ವರ್ಷಗಳ ಹಿಂದೆ ಭಾರತದಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಆಸ್ಟ್ರೇಲಿಯಾ ಗೆದ್ದಿತ್ತು. 2004ರಲ್ಲಿ ಆಸೀಸ್ ವಿಜೇತರಾಗಿದ್ದರು. ಆ ನಂತರ ಭಾರತ 2015, 2017 ಮತ್ತು 2020ರಲ್ಲಿ ಸರಣಿ ಜಯ ದಾಖಲಿಸಿತ್ತು. ಪ್ರತಿ ಬಾರಿ ಈ ಸರಣಿ ನಡೆದಾಗ ಒಂದಿಲ್ಲೊಂದು ವಿವಾದಗಳು ನಡೆಯುವುದು ಸಾಮಾನ್ಯ. ಈ ಹಿಂದೆ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ನಡೆದ ವಿವಾದಗಳು ಯಾವವು ಎಂದು ನೋಡೋಣ ಬನ್ನಿ.
2013ರ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮಧ್ಯದಲ್ಲಿ ಆಸ್ಟ್ರೇಲಿಯಾ 4 ಆಟಗಾರರನ್ನು ಅಮಾನತುಗೊಳಿಸಲಾಗಿತ್ತು. ಹೈದರಾಬಾದ್ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್ನಲ್ಲಿ ಆಸೀಸ್ 4 ದಿನಗಳಲ್ಲೇ ಸೋಲನುಭವಿಸಿತ್ತು. ಈ ಸೋಲಿನ ನಂತರ, ಆಸ್ಟ್ರೇಲಿಯಾದ ತರಬೇತುದಾರ ಮಿಕ್ಕಿ ಆರ್ಥರ್ ತನ್ನ ಆಟಗಾರರಿಗೆ ಮೂರು ವಿಷಯಗಳ ಮೇಲೆ ಹೋಮ್ವರ್ಕ್ ಮಾಡಲು ಹೇಳಿದ್ದರು.
ಆದರೆ, ಶೇನ್ ವ್ಯಾಟ್ಸನ್, ಮಿಚೆಲ್ ಜಾನ್ಸನ್, ಉಸ್ಮಾನ್ ಖವಾಜಾ, ಜೇಮ್ಸ್ ಪ್ಯಾಟಿನ್ಸನ್ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಈ ಕೆಲಸ ಮಾಡಿದ್ದಾರೆ. ಕೋಚ್ನ ಆದೇಶವನ್ನು ಪಾಲಿಸದ ಕಾರಣಕ್ಕಾಗಿ ಈ ನಾಲ್ವರು ಆಟಗಾರರನ್ನು ಅಮಾನತುಗೊಳಿಸಲಾಗಿತ್ತು. ಹೀಗಾಗಿ ಮುಂದಿನ ಟೆಸ್ಟ್ ಆಡಲು ಅವಕಾಶ ನೀಡಿರಲಿಲ್ಲ. ಈ ನಿರ್ಧಾರ ಆಸ್ಟ್ರೇಲಿಯಾ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಕೋಲಾಹಲಕ್ಕೆ ಕಾರಣವಾಗಿತ್ತು.
2008ರಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ನಡೆದ ಮಂಕಿಗೇಟ್ ವಿವಾದವನ್ನು ಅರಿಯದ ಕ್ರಿಕೆಟ್ ಅಭಿಮಾನಿಗಳೇ ಇಲ್ಲ. ಪಂದ್ಯದ ವೇಳೆ ಭಾರತೀಯ ಕ್ರಿಕೆಟಿಗ ಹರ್ಭಜನ್ ಸಿಂಗ್ ಮತ್ತು ಆಂಡ್ರ್ಯೂ ಸೈಮಂಡ್ಸ್ ನಡುವೆ ಈ ವಿವಾದ ಪ್ರಾರಂಭವಾಯಿತು. ಹರ್ಭಜನ್ ಸಿಂಗ್ ಕೋಪದಿಂದ ಸೈಮಂಡ್ಸ್ ಅವರನ್ನು ನಿಂದಿಸಿದ್ದರು. ಆ ವೇಳೆ ಬಜ್ಜಿ ಸೈಮಂಡ್ಸ್ಗೆ ಮಂಗ ಎಂಬರ್ಥದಲ್ಲಿ ನಿಂದಿಸಿದ್ದರು. ಹರ್ಭಜನ್ ತನ್ನ ಮೇಲೆ ಜನಾಂಗೀಯ ದ್ವೇಷವನ್ನು ಹೊಂದಿದ್ದಾರೆ ಮತ್ತು ಅವರು ನನ್ನನ್ನು ಕೋತಿ ಎಂದು ಕರೆದಿದ್ದಾರೆ ಎಂದು ಸೈಮಂಡ್ಸ್ ಆರೋಪಿಸಿದ್ದರು.
ಇದರೊಂದಿಗೆ ಹರ್ಭಜನ್ ಸಿಂಗ್ ವಿರುದ್ಧ ಐಸಿಸಿ ಕ್ರಮ ಕೈಗೊಂಡಿತ್ತು. ಅವರಿಗೆ ಮೂರು ಪಂದ್ಯಗಳ ನಿಷೇಧ ಹೇರಲಾಗಿತ್ತು. ಆದರೆ, ವಿವಾದದ ವೇಳೆ ಹರ್ಭಜನ್ ಜೊತೆಗೆ ಸಚಿನ್ ತೆಂಡೂಲ್ಕರ್ ಕೂಡ ಬ್ಯಾಟಿಂಗ್ ಮಾಡುತ್ತಿದ್ದರು. ಹರ್ಹಜನ್ ಅವರು ಸೈಮಂಡ್ಸ್ ವಿರುದ್ಧ ಜನಾಂಗೀಯವಾಗಿ ಏನನ್ನೂ ಹೇಳಿಲ್ಲ ಎಂದು ಸಚಿನ್ ತೆಂಡೂಲ್ಕರ್ ಸ್ಪಷ್ಟಪಡಿಸಿದ್ದರು. ಬಳಿಕ ಐಸಿಸಿ ಹರ್ಭಜನ್ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿತ್ತು.
2020-21ರಲ್ಲಿ ಭಾರತ ತಂಡದ ಆಸ್ಟ್ರೇಲಿಯಾ ಪ್ರವಾಸದ ವೇಳೆ ಭಾರತದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಜನಾಂಗೀಯ ತಾರತಮ್ಯಕ್ಕೆ ಒಳಗಾಗಿದ್ದರು. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸಿರಾಜ್ ಮತ್ತು ಬುಮ್ರಾ ಅವರನ್ನು ಆಸೀಸ್ ಅಭಿಮಾನಿಗಳು ಜನಾಂಗೀಯ ನಿಂದನೆ ಮಾಡಿದ್ದರು. ಈ ಘಟನೆಯಲ್ಲಿ ಮೊಹಮ್ಮದ್ ಸಿರಾಜ್ ಕಣ್ಣೀರಿಟ್ಟಿದ್ದರು. ಆಸೀಸ್ ತಂಡದ ಆಗಿನ ನಾಯಕ ಟಿಮ್ ಪೈನ್, ಆಸೀಸ್ ಅಭಿಮಾನಿಗಳು ಸಿರಾಜ್ ಮೇಲೆ ಜನಾಂಗೀಯ ಕಾಮೆಂಟ್ಗಳನ್ನು ಮಾಡಬಾರದು ಎಂದು ಕೇಳಿಕೊಂಡಿದ್ದರು.
2017ರ ಬೆಂಗಳೂರು ಟೆಸ್ಟ್ನಲ್ಲಿ ಆಸ್ಟ್ರೇಲಿಯದ ನಾಯಕ ಸ್ಟೀವ್ ಸ್ಮಿತ್ ಮತ್ತು ಅಂಪೈರ್ ನಡುವಿನ ವಿವಾದ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅಲ್ಲದೇ ವಿಕೆಟ್ಗಾಗಿ ಸ್ಮಿತ್ DRS ಗೆ ಮನವಿ ಮಾಡುವ ಮೊದಲು ಡ್ರೆಸ್ಸಿಂಗ್ ಕೊಠಡಿಯನ್ನು ನೋಡಿದ್ದರು. ಅಲ್ಲದೇ DRS ತೆಗೆದುಕೊಳ್ಳಲು ಐಸಿಸಿ ನಿಯಮದ ಪ್ರಕಾರ ಮೈದಾನದಲ್ಲಿ ಇರುವ ಆಟಗಾರರಿಗೆ ಮಾತ್ರ ಹಕ್ಕಿರುತ್ತದೆ. ಬಳಿಕ ಈ ತಪ್ಪನ್ನು ಸ್ಮಿತ್ ಒಪ್ಪಿಕೊಂಡಿದ್ದರು.