ಭಾರತ ಕ್ರಿಕೆಟ್ ತಂಡದ ಮೇರು ನಾಯಕ, ಭಾರತದ ಕ್ರಿಕೆಟ್ ಅನ್ನು ವೈಭವದ ಎತ್ತರಕ್ಕೆ ಕೊಂಡೊಯ್ದ ಆಟಗಾರ. 90ರ ದಶಕದಲ್ಲೇ ಟಿ20 ಮಾದರಿಯಂತೆ ಬ್ಯಾಟ್ ಬೀಸುವ ಮೂಲಕ ಕೋಟ್ಯಾಂತರ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾದ, ಭಾರತಕ್ಕೆ ಅನೇಕ ಪಂದ್ಯಗಳನ್ನೂ ಸರಣಿಯನ್ನು ಗೆಲ್ಲಿಸಿಕೊಟ್ಟ, ಅಭಿಮಾನಿಗಳ ನೆಚ್ಚಿನ ದಾದಾ- ಬಂಗಾಳ ಹುಲಿ ಸೌರವ್ ಗಂಗೂಲಿಗೆ ಇಂದು ಹುಟ್ಟುಹಬ್ಬ. 49ನೇ ವಸಂತಕ್ಕೆ ದಾದಾ ಕಾಲಿಟ್ಟಿದ್ದಾರೆ.
ಕರಾಳ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕತ್ವ ವಹಿಸಿದ್ದ ಸೌರವ್ ಗಂಗೂಲಿ ಇಡೀ ಭಾರತ ತಂಡವನ್ನು ಮತ್ತೆ ಮುರಿದು ಕಟ್ಟಿದ್ದರು. ಮಹಮ್ಮದ್ ಕೈಫ್, ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್, ಇರ್ಫಾನ್ ಪಠಾಣ್, ಮಹೇಂದ್ರ ಸಿಂಗ್ ಧೋನಿ, ಗೌತಮ್ ಗಂಭೀರ್, ವೀರೇಂದ್ರ ಶೆವ್ಹಾಗ್, ಸುರೇಶ್ ರೈನಾ, ಆಶಿಶ್ ನೆಹ್ರಾ ಸೇರಿದಂತೆ ಅನೇಕ ಯುವ ಆಟಗಾರರಿಗೆ ಮಣೆ ಹಾಕಿದ್ದರು. ಹೊಸ ಅನುಭವಿ ಮತ್ತು ಯುವ ತಂಡದ ಸಮ್ಮಿಳನದ ಜೊತೆಗೆ ಕಣಕ್ಕಿಳಿದಿದ್ದರು.
ಸೌರವ್ ಗಂಗೂಲಿ ನೇತೃತ್ವದ ಈ ತಂಡ ವಿದೇಶಿ ನೆಲದಲ್ಲೂ ಗೆಲ್ಲುವುದನ್ನು ಕಲಿತಿತ್ತು. 2003ರಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದು ಬೀಗಿತ್ತು. 2002 ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ಅಂಗಳದಲ್ಲಿ ಫೈನಲ್ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸಿ ಇಡೀ ಸರಣಿಯನ್ನು ವಶಪಡಿಸಿಕೊಂಡ ಸಂಭ್ರಮದಲ್ಲಿ ನಾಯಕ ಸೌರವ್ ಗಂಗೂಲಿ ಟೀ ಶರ್ಟ್ ಬಿಚ್ಚಿ ಮುಯ್ಯಿಗೆ ಮುಯ್ಯಿ ತೀರಿಸಿಕೊಂಡಿದ್ದನ್ನು ಭಾಗಶಃ ಯಾರೂ ಮರೆತಿರಲಿಕ್ಕೆ ಸಾಧ್ಯವಿಲ್ಲ. ಈ ಘಟನೆ ಕ್ರಿಕೆಟ್ ಇತಿಹಾಸದಲ್ಲಿ ಎಂದೂ ಅಜರಾಮರ.
ಈ ಟೂರ್ನಿಯ ಬೆನ್ನಿಗೆ ಭಾರತ ತಂಡ 2003 ರಲ್ಲಿ ದಕ್ಷಿಣಾ ಆಫ್ರಿಕಾದಲ್ಲಿ ನಡೆದ ವಿಶ್ವಕಪ್ನಲ್ಲೂ ಅದ್ಭುತ ನಿರ್ವಹಣೆ ತೋರಿತ್ತು. ಈ ಟೂರ್ನಿಯಲ್ಲಿ ಗಂಗೂಲಿ 3 ಶತಕ ಸಿಡಿಸಿದ್ದರು. ಸಚಿನ್ ತೆಂಡೂಲ್ಕರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಬಾಜನರಾಗಿದ್ದರು. ಆದರೂ, ಭಾರತ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಆದರೆ, ಈ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧದ ವಿರೋಚಿತ ಗೆಲುವು ಭಾರತೀಯರಿಗೆ ಕಪ್ ಗೆದ್ದದ್ದಕ್ಕಿಂತ ಹೆಚ್ಚಿನ ಸಂತೋಷ ನೋಡಿದ್ದು ಸುಳ್ಳಲ್ಲ.
1990 ರಲ್ಲಿ ನಡೆದ ಪಂದ್ಯಾವಳಿಯ ಫೈನಲ್ನಲ್ಲಿ ಗಂಗೂಲಿ ರಣಜಿಗೆ ಪಾದಾರ್ಪಣೆ ಮಾಡಿದ್ದರು. 1992 ರ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಗಂಗೂಲಿಯನ್ನು ಭಾರತೀಯ ತಂಡದಲ್ಲಿ ಆಯ್ಕೆ ಮಾಡಲಾಯಿತು. ಆದರೆ ಅವರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. ಪ್ರವಾಸದ ನಂತರ, ಅವರನ್ನು ಕಡೆಯಿಂದ ಕೈಬಿಡಲಾಯಿತು ಮತ್ತು ಮೈದಾನದಲ್ಲಿ ಭಾರತೀಯ ಜರ್ಸಿಯನ್ನು ಧರಿಸುವ ಅವಕಾಶವನ್ನು ಪಡೆಯುವ ಮೊದಲು 4 ವರ್ಷಗಳ ಕಾಲ ಕಾಯಬೇಕಾಯಿತು. ಆನಂತರ ಅವರು ಹಿಂದಿರುಗಿ ನೋಡಿದ್ದೆ ಇಲ್ಲ.
2005ರ ನಂತರ ಕೋಚ್ ಗ್ರೇಗ್ ಚಾಪೆಲ್ ಮತ್ತು ನಾಯಕ ಗಂಗೂಲಿ ನಡುವಿನ ವೈಮನಸ್ಯದಿಂದಾಗಿ ಕೊನೆಗೆ ಗಂಗೂಲಿ ತಂಡದಿಂದಲೇ ಹೊರಹಾಕಲ್ಪಟ್ಟಿದ್ದರು. ಈ ವೇಳೆ ದೇಶದಾದ್ಯಂತ ಅವರ ಅಭಿಮಾನಿಗಳು ದೊಡ್ಡ ಹೋರಾಟಕ್ಕೆ ಮುಂದಾಗಿದ್ದರು. ಆನಂತರ 2007ರಲ್ಲಿ ಮತ್ತೆ ತಂಡಕ್ಕೆ ಹಿಂದಿರುಗಿದ್ದ ದಾದಾ ಪಾಕಿಸ್ತಾನದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸುವ ಮೂಲಕ ಟೀಕಾಕಾರರ ಚಳಿ ಬಿಡಿಸಿದ್ದರು.