ಲೋಕಸಭಾ ಚುನಾವಣೆಗೂ ಮುನ್ನ ಮೋದಿ ಸರ್ಕಾರವು ರೈತರಿಗೆ ಭರ್ಜರಿ ಕೊಡುಗೆ ನೀಡುವ ನಿರೀಕ್ಷೆಯಿದೆ. ಮುಂಬರುವ ಚುನಾವಣೆಯಲ್ಲಿ ಕೃಷಿ ಕಾರ್ಮಿಕರ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ವಿಶೇಷ ಯೋಜನೆಯನ್ನು ರೂಪಿಸಿದ್ದು, ಶೀಘ್ರದಲ್ಲೇ ಇದನ್ನು ಘೋಷಿಸಿಕೊಳ್ಳಲಿದೆ ಎನ್ನಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ ಫೆಬ್ರವರಿ 1 ರ ಬಜೆಟ್ಗೂ ಮೊದಲೇ ಯೋಜನೆಯನ್ನು ಪರಿಚಯಿಸಲಿದ್ದು, ಇದರ ಸಂಪೂರ್ಣ ಕೊಡುಗೆಗಳ ಪ್ಯಾಕೇಜನ್ನು ಬಜೆಟ್ ವೇಳೆ ಮಂಡಿಸಲಾಗುತ್ತದೆ ಎನ್ನಲಾಗಿದೆ. ಕೇಂದ್ರ ಸರ್ಕಾರದ ಹೊಸ ಪ್ಯಾಕೇಜಿನ ವಿಶೇಷತೆಗಳೇನು?
ದೇಶದ ರೈತರ ಸ್ಥಿತಿಯನ್ನು ಸುಧಾರಿಸಲು ಈ ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರದ ಈ ಯೋಜನೆಗೆ ನೀತಿ ಆಯೋಗ, ಕೃಷಿ ಸಚಿವಾಲಯ ಮತ್ತು ಹಣಕಾಸು ಸಚಿವಾಲಯದಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈ ಪ್ಯಾಕೇಜ್ ಜಾರಿಯಾದರೆ ರೈತರಿಗೆ ಕೇಂದ್ರದಿಂದ 2 ಲಕ್ಷದವರೆಗೆ ನಿರ್ದಿಷ್ಟ ಪ್ರಮಾಣದ ಸಾಲ ಸಿಗಲಿದೆ. ಈ ಸಾಲದ ಹಣವನ್ನು ನೇರ ನಗದು ವರ್ಗಾವಣೆಯ ಅಡಿಯಲ್ಲಿ ರೈತರ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಒಡಿಸ್ಸಾ ಮತ್ತು ತೆಲಂಗಾಣದಲ್ಲಿ ಇಂತಹದೊಂದು ಸಾಲದ ಯೋಜನೆಯಿದ್ದು, ಇಲ್ಲಿ ಸರ್ಕಾರವೇ ನೇರವಾಗಿ ರೈತರ ಖಾತೆಗೆ ಸಾಲದ ಮೊತ್ತವನ್ನು ನೀಡುತ್ತದೆ. ಇದೇ ಮಾದರಿಯಲ್ಲಿ ಮೋದಿ ಸರ್ಕಾರ ಕೂಡ ಹೊಸ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹೇಳಲಾಗುತ್ತಿದೆ.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢ ವಿಧಾನಸಭಾ ಚುನಾವಣಾ ಸೋಲಿನಿಂದ ಬಿಜೆಪಿ ಪಕ್ಷ ಎಚ್ಚೆತ್ತುಕೊಂಡಿದ್ದು, ಹೀಗಾಗಿ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ರೈತರ ಪರ ಎಂದು ಬಿಂಬಿಸಿಕೊಳ್ಳುವ ಪ್ರಯತ್ನದಲ್ಲಿದೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಘೋಷಿಸಿದ್ದರು. ಇದರಿಂದಾಗಿ ಬಿಜೆಪಿ ನಾಯಕರಿಂದಲೂ ಕೇಂದ್ರ ಸರ್ಕಾರ ಮೇಲೆ ಒತ್ತಡ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.