ಬಿಹಾರದ ರಾಜ್ಯದ ಮೋತಿಹಾರಿ ಜಿಲ್ಲೆಯ ಲಕ್ಷ್ಮೀಪುರ ಗ್ರಾಮದಲ್ಲಿ ಈ ಸರಣಿ ಸಾವುಗಳು ಸಂಭವಿಸಿದ್ದು, ಇನ್ನೂ ಅನೇಕ ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಏಪ್ರಿಲ್ 2016ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಯ ಮೇಲೆ ಸಂಪೂರ್ಣ ನಿಷೇಧ ಹೇರಿತ್ತು. ಬಿಹಾರದಲ್ಲಿ ಮದ್ಯ ನಿಷೇಧದ ಹೊರತಾಗಿಯೂ ಕಾಳಸಂತೆಯಲ್ಲಿ ನಕಲಿ ಮದ್ಯ ಮಾರಾಟ ನಡೆಯುತ್ತಿದ್ದು, ಸ್ಥಳೀಯವಾಗಿ ತಯಾರಿಸಿದ ಮದ್ಯ ಸೇವಿಸಿ ಸಾವುಗಳು ಸಂಭವಿಸುತ್ತಲೇ ಇವೆ. ಈ ಮಧ್ಯೆ ಮತ್ತೊಮ್ಮೆ ವಿಷಪೂರಿತ ಮದ್ಯ ಪ್ರಕರಣ ಬಿಹಾರದಲ್ಲಿ ಮುನ್ನೆಲೆಗೆ ಬಂದಿದೆ. ಮೋತಿಹಾರಿ ಜಿಲ್ಲೆಯಲ್ಲಿ ನಕಲಿ ಮದ್ಯದ ಹಾವಳಿ ಮತ್ತೊಮ್ಮೆ ಕಂಡು ಬಂದಿದೆ. ನಕಲಿ ಮದ್ಯ ಸೇವಿಸಿ ಪೂರ್ವ ಚಂಪಾರಣ್ನಲ್ಲಿ 22 ಮಂದಿ ಅನುಮಾನಾಸ್ಪದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಇನ್ನು ಮದ್ಯ ಸೇವಿಸಿದ ನಂತರ ಜನರು ದೌರ್ಬಲ್ಯ ಮತ್ತು ದೃಷ್ಟಿ ದೋಷದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.