ದೇಹದ ಆರೋಗ್ಯ ಸಮಸ್ಥಿತಿಯಲ್ಲಿರಬೇಕಾದರೆ ಹಲವಾರು ಅಂಶಗಳು ಪೂರಕವಾಗುತ್ತವೆ. ಈ ಹಲವಾರು ಅಂಶಗಳಲ್ಲಿ ಆಹಾರದ ಪಾತ್ರ ದೊಡ್ಡದು. ಸರಿಯಾದ, ಆರೋಗ್ಯಕರ ಆಹಾರ ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯ ಎರಡರ ಮೇಲೂ ಪ್ರಭಾವ ಬೀರುತ್ತದೆ. ಆಹಾರ ಅಂದರೆ ಅದನ್ನು ತಿನ್ನುವಲ್ಲಿ ಸುಮಾರು ಬಗೆಗಳಿವೆ. ಕೆಲವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು, ಇನ್ನೂ ಕೆಲವನ್ನು ಹಾಗೇ ತಿನ್ನಬಹುದು, ಇನ್ನೂ ಕೆಲ ಆಹಾರಗಳಿವೆ ಅವು ಎಲ್ಲಕ್ಕಿಂತ ವಿಶೇಷ. ಏಕೆಂದರೆ ಈ ಆಹಾರವನ್ನು ನಾವು ನೆನಸಿಟ್ಟೇ ತಿನ್ನಬೇಕು.
ಕೆಲವು ಆಹಾರಗಳನ್ನು ತಿನ್ನುವ ಮೊದಲು ನೀರಿನಲ್ಲಿ ನೆನೆಸಿಡುವುದು ತಲೆಮಾರುಗಳಿಂದ ಅನುಸರಿಸಿಕೊಂಡು ಬಂದಿರುವ ಸಾಮಾನ್ಯ ಅಭ್ಯಾಸವಾಗಿದೆ. ಇದಕ್ಕೆ ಕಾರಣ ಕೂಡ ಇದೆ. ಹಲವು ಆಹಾರ ಪದಾರ್ಥಗಳನ್ನು ಹಾಗೆಯೇ ತಿನ್ನುವುದಕ್ಕಿಂತ ನೆನೆಸಿ ತಿನ್ನುವುದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು. ರಾತ್ರಿಯಿಡೀ ನೆನೆಸಿಟ್ಟು ಈ ಆಹಾರವನ್ನು ಸೇವಿಸುವುದರಿಂದ ದೇಹವು ಸಾಕಷ್ಟು ಪೌಷ್ಟಿಕಾಂಶವನ್ನು ಪಡೆಯುತ್ತವೆ ಎನ್ನಲಾಗಿದೆ.
ನಟ್ಸ್: ಪೌಷ್ಟಿಕತಜ್ಞ ನ್ಮಾಮಿ ಅಗರ್ವಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಈ ಬಗ್ಗೆ ವಿವರಿಸಿದ್ದು, "ಹಸಿ ಬೀಜಗಳು ಹೆಚ್ಚಿನ ಮಟ್ಟದ ಫೈಟಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ಬಾಹ್ಯ ಅಂಶಗಳಿಂದ ರಕ್ಷಿಸಲು ಬೀಜಗಳ ಹೊರ ಪದರವಾಗಿ ಕಾರ್ಯನಿರ್ವಹಿಸುತ್ತದೆ. ನಾವು ನೇರವಾಗಿ ಬೀಜಗಳನ್ನು ತಿಂದಾಗ ಪೋಷಕಾಂಶಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.ಹೀಗಾಗಿ ಬೀಜಗಳಲ್ಲಿರುವ ಸಂಪೂರ್ಣ ಫೋಷಕಾಂಶವನ್ನು ಪಡೆಯಲು ನೀರಿನಲ್ಲಿ ನೆನೆಸಿಡುವುದು ಉತ್ತಮ ಎನ್ನುತ್ತಾರೆ.
ದ್ವಿದಳ ಧಾನ್ಯಗಳು: ಕಡಲೆಬೇಳೆ, ಹೆಸರುಕಾಳು, ರಾಜ್ಮಾ ಇವುಗಳನ್ನು ಬೇಯಿಸುವ ಮೊದಲು ಗಟ್ಟಿಯಾಗಿರುವ ಕಾರಣ ನೆನೆಸಿಡುತ್ತೇವೆ. ಇದು ನಿಜಕ್ಕೂ ಉತ್ತಮ ವಿಧಾನ, ಏಕೆಂದರೆ ದ್ವಿದಳ ಧಾನ್ಯಗಳು ಹೆಚ್ಚಿನ ಫೈಟಿಕ್ ಆಮ್ಲ ಮತ್ತು ಲೆಕ್ಟಿನ್ಗಳನ್ನು ಸಹ ಹೊಂದಿರುತ್ತವೆ. ಅಡುಗೆ ಅಥವಾ ತಿನ್ನುವ ಮೊದಲು ನೀರಿನಲ್ಲಿ ನೆನೆಸುವುದರಿಂದ ಈ ಅಂಶಗಳ ಮಟ್ಟವನ್ನು ಕಡಿಮೆ ಮಾಡಬಹುದು. ಇದರಿಂದ ಜೀರ್ಣಕ್ರಿಯೆ ಕೂಡ ಸುಲಭವಾಗುತ್ತದೆ. ಅಷ್ಟೇ ಅಲ್ಲ ನೆನೆಸಿಡುವುದು ಬೇಯುವಿಕೆಯ ಸಮಯವನ್ನು ಸಹ ಕಡಿಮೆ ಮಾಡುತ್ತದೆ.
ಡ್ರೈ ಫ್ರೂರ್ಟ್ಸ್: ಖರ್ಜೂರ, ಅಂಜೂರದ ಹಣ್ಣುಗಳು ಮತ್ತು ಒಣದ್ರಾಕ್ಷಿಗಳಂತಹ ಡ್ರೈ ಫ್ರೂರ್ಟ್ಸ್ ಅನ್ನು ಕಡ್ಡಾಯವಾಗಿ ನೆನೆಸಿಯೇ ತಿನ್ನಬೇಕು. ಇವುಗಳಲ್ಲಿ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿರುವುದರ ಜೊತೆ ಅವು ಸಲ್ಫೈಟ್ಗಳಲ್ಲಿ ಸಮೃದ್ಧವಾಗಿವೆ. ಈ ಅಂಶ ಅಲರ್ಜಿಯಂತಹ ಸ್ಥಿತಿಗೆ ಕಾರಣವಾಗಬಹುದು. ಹೀಗಾಗಿ ಒಣಗಿದ ಹಣ್ಣುಗಳನ್ನು ನೀರಿನಲ್ಲಿ ನೆನೆಸುವುದರಿಂದ ಸಲ್ಫೈಟ್ಗಳ ಪ್ರಮಾಣವನ್ನು ಕಡಿಮೆ ಮಾಡಬಹುದು ಮತ್ತು ಈ ಆಹಾರಗಳನ್ನು ತಿನ್ನಲು ಸುರಕ್ಷಿತವಾಗಿಸಬಹುದು.