ಚಿತ್ರದುರ್ಗ ಕರ್ನಾಟಕದ ಪ್ರಸಿದ್ಧವಾದ ಐತಿಹಾಸಿಕ ತಾಣವಾಗಿದೆ. ಕಲ್ಲಿನ ಕೋಟೆ ಎಂದೇ ಕರೆಯಲಾಗುವ ಚಿತ್ರದುರ್ಗವು ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದೆ. ಕೋಟೆಯ ವಿಸ್ತಾರವಾದ ಅವಶೇಷಗಳು, ಅದ್ಭುತವಾದ ವಾಸ್ತುಶಿಲ್ಪ ಮತ್ತು ನೋಟವು ಇತಿಹಾಸಕಾರರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಚಿತ್ರದುರ್ಗದ ಕೋಟೆಯಲ್ಲಿಯೇ ಅನೇಕ ಆಕರ್ಷಣೆಗಳg ತುಂಬಿದೆ. ಅವುಗಳಲ್ಲಿ ದೇವಾಲಯಗಳು, ಒನಕೆ ಓಬವ್ವನ ಕಿಂಡಿ ಇನ್ನು ಅನೇಕ ಸ್ಥಳಗಳಿವೆ. (ಚಿತ್ರಕೃಪೆ: Internet)
ಹಂಪಿಯು ಕರ್ನಾಟಕದ ಐತಿಹಾಸಿಕತೆಯನ್ನು ನೆನಪಿಸುವ ಸುಂದರವಾದ ತಾಣ. ಒಂದು ಕಾಲದಲ್ಲಿ ಭವ್ಯ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಹಂಪಿ ಕರ್ನಾಟಕದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಇಲ್ಲಿ ವಿಜಯನಗರ ಸಾಮ್ರಾಜ್ಯದ ಕುತೂಹಲಕಾರಿ ಅವಶೇಷಗಳನ್ನು ನೀವು ಕಾಣಬಹುದು. ಇತಿಹಾಸ ಪ್ರೇಮಿಗಳು ನೀವಾಗಿದ್ದರೆ ಕುಟುಂಬದವರೊಂದಿಗೆ ಹಂಪಿಗೆ ಪ್ರವಾಸ ಕೈಗೊಳ್ಳಿ. ಏಕೆಂದರೆ ಇಲ್ಲಿ ಅದ್ಭುತವಾದ ದೇವಾಲಯಗಳು, ಆಕರ್ಷಕ ಐತಿಹಾಸ ಸೌಂದರ್ಯವನ್ನು ತನ್ನಲ್ಲಿ ಭದ್ರವಾಗಿ ಅಡಗಿಸಿಕೊಂಡಿದೆ. ಹಂಪಿಯ ಪ್ರವಾಸ ಕೈಗೊಂಡಾಗ ವಿಜಯ ವಿಠಲ ದೇವಾಲಯದಲ್ಲಿನ ಸಂಗೀತ ಸ್ತಂಭದ ದರ್ಶನವನ್ನು ತಪ್ಪಿಸಿಕೊಳ್ಳಬೇಡಿ. (ಚಿತ್ರಕೃಪೆ: Internet)
ಕೊಡಗು ಶ್ರೀಮಂತ ಪ್ರಾಕೃತಿಕ ನೋಟಗಳನ್ನು ಅನಾವರಣಗೊಳಿಸುವ ಸುಂದರವಾದ ತಾಣಗಳನ್ನು ಹೊಂದಿದೆ. ಮನಮೋಹಕವಾದ ಕಾಫಿ ಮತ್ತು ಸಾಂಬಾರು ಪದಾರ್ಥಗಳ ತೋಟಗಳು ಆಹ್ಲಾದಕರವಾದ ವಾತಾವರಣವನ್ನು ಸೃಷ್ಟಿಸುತ್ತದೆ. ಇಲ್ಲಿ ನಯನ ಮನೋಹರವಾದ ಪ್ರಾಕೃತಿಕ ನೋಟ, ಸುಂದರವಾದ ಜಲಪಾತಗಳು, ಮಂಜಿನ ಭೂದೃಶ್ಯಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದೇ ಕಾರಣದಿಂದಲೇ ಕೂರ್ಗ್ ಅನ್ನು ‘ಭಾರತದ ಸ್ಕಾಟೆಂಡ್’ ಎಂದು ಕರೆಯಲಾಗುತ್ತದೆ. ಕೂರ್ಗ್ನಲ್ಲಿ ಅಬ್ಬೆ ಜಲಪಾತ, ಮಡಿಕೇರಿ ಕೋಟೆ, ಬೌದ್ಧ ಮಠಗಳು, ತಲಕಾವೇರಿ, ರಾಜ ಸೀಟ್ನಂಹ ಸುಂದರ ಪ್ರೇಕ್ಷಣೀಯ ಸ್ಥಳಗಳನ್ನು ನೀವು ಅನ್ವೇಷಿಸಬಹುದು. (ಚಿತ್ರಕೃಪೆ: Internet)
ಉತ್ತರ ಕನ್ನಡದ ಕುಮಟಾ ತಾಲೂಕಿನ ಗೋಕರ್ಣ ಒಂದು ಪ್ರವಾಸಿ ಹಾಗೂ ಧಾರ್ಮಿಕ ಕ್ಷೇತ್ರ. ಇಲ್ಲಿನ ಓಂ ಬೀಚ್ ಕರ್ನಾಟಕದ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.ಮಹಾಶಿವನು ಗೋಕರ್ಣದಲ್ಲಿ ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಸ್ವಾಮಿಯನ್ನು ದರ್ಶನ ಮಾಡಿಕೊಳ್ಳಲು ದೇಶದ ಮೂಲೆ ಮೂಲೆಗಳಿಂದ ಹಿಂದೂ ಭಕ್ತರು ಗೋಕರ್ಣಕ್ಕೆ ಭೇಟಿ ನೀಡುತ್ತಾರೆ. ಗೋಕರ್ಣ ಸುಂದರವಾದ ಕಡಲತೀರಗಳಿಗೆ, ದೇವಾಲಯಗಳಿಗೆ ಹೆಸರುವಾಸಿಯಾಗಿದೆ. (ಚಿತ್ರಕೃಪೆ: Internet)
ಸಕಲೇಶಪುರವು ಬಹಳಷ್ಟು ಜನರ ನೆಚ್ಚಿನ ಪ್ರವಾಸಿತಾಣವಾಗಿದೆ. ಹಚ್ಚಹಸಿರಿನ ಪಶ್ಚಿಮ ಘಟ್ಟಗಳ ತಪ್ಪಲಲ್ಲಿ ನೆಲೆನಿಂತಿರುವ ಇದೊಂದು ಆಕರ್ಷಕ ತಾಣವಾಗಿದೆ. ಸಕಲೇಶಪುರವು ಹಾಸನ ಜಿಲ್ಲೆಯ ಒಂದು ಗಿರಿಧಾಮ ಪಟ್ಟಣ ಮತ್ತು ಜಿಲ್ಲೆಯ ತಾಲ್ಲೂಕು ಕೇಂದ್ರವಾಗಿದೆ. ಪಶ್ಚಿಮ ಘಟ್ಟಗಳ ತಪ್ಪಲಲ್ಲಿದ್ದು ಮಲೆನಾಡ ಪ್ರದೇಶದಲ್ಲಿದೆ. ಮಲೆನಾಡಿನ ಮಡಿಲಲ್ಲಿ ಹೇಮಾವತಿ ನದಿಯ ದಡದಲ್ಲಿರುವುದೇ ಈ ಸಕಲೇಶಪುರ. ಇಲ್ಲಿನ ಮಂಜರಾಬಾದ್ ಪೋರ್ಟ್ ನಕ್ಷತ್ರದ ಆಕಾರದಲ್ಲಿದೆ. (ಚಿತ್ರಕೃಪೆ: Internet)
ಉಡುಪಿಯು ಶ್ರೀ ಕೃಷ್ಣನ ದೇವಾಲಯ, ಆಹ್ಲಾದಕರವಾದ ಕಡಲತೀರಗಳಿಂದ ನಿಮ್ಮನ್ನು ಆಕರ್ಷಿಸುತ್ತವಲೆ. ಕರಾವಳಿ ಭಕ್ಷ್ಯಗಳನ್ನು ನೀವು ಇಲ್ಲಿ ಸವಿಯಬಹುದು. ಉಡುಪಿಯ ಪ್ರವಾಸವು ಮಂತ್ರಮುಗ್ಧರನ್ನಾಗಿಸುವುದಂತು ಸತ್ಯ. ಉಡುಪಿಯಲ್ಲಿ ಪ್ರಸಿದ್ಧ ಮಲ್ಪೆ ಬೀಚ್, ಮರವಂತೆ ಬೀಚ್, ಕಾಪು ಬೀಚ್, ಸೆಂಟ್ ಮ್ಯಾರಿಸ್ ದ್ವೀಪ, ಕೊಲ್ಲೂರು ಮೂಕಾಂಬಿಕಾ ದೇವಾಲಯ, ಮಹಿಷ ಮರ್ದಿನಿ ದೇವಾಲಯ ಸೇರಿದಂತೆ ಅನೇಕ ಪ್ರವಾಸಿ ಸ್ಥಳಗಳನ್ನು ಕಣ್ತುಂಬಿಕೊಳ್ಳಬಹುದು. . (ಚಿತ್ರಕೃಪೆ: Internet)