'ದೇವರ ಸ್ವಂತ ನಾಡು' ಎಂದೇ ಪ್ರಸಿದ್ಧಿಯಾಗಿರುವ ಕೇರಳದಲ್ಲಿ ಅಲೆಪ್ಪಿ ಪ್ರವಾಸಿಗರ ಆಕರ್ಷಕ ತಾಣವಾಗಿದೆ. ಹಿನ್ನೀರು ಪ್ರವಾಸೋದ್ಯಮಕ್ಕೆ ಅಲೆಪ್ಪಿ ಹೆಸರುವಾಸಿಯಾಗಿದೆ. ಮಾನ್ಸೂನ್ ಸಮಯದಲ್ಲಿ ಇಲ್ಲಿಗೆ ದೇಶದ ಮೂಲೆ-ಮೂಲೆಗಳಿಂದ ಮಾತ್ರವಲ್ಲದೇ, ವಿದೇಶಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲೆಪ್ಪಿಯನ್ನು 'ಪೂರ್ವದ ವೆನಿಸ್ ನಗರ' ಎಂದೂ ಸಹ ಕರೆಯಲಾಗುತ್ತದೆ. ಈ ಮಾನ್ಸೂನ್ ವೇಳೆ ವೀಕೆಂಡ್ನಲ್ಲಿ ಪ್ರವಾಸ ಹೋಗುವ ಪ್ಲಾನ್ ಇದ್ದರೆ ಈ ತಾಣಕ್ಕೆ ತೆರಳಬಹುದು. ಬೆಂಗಳೂರಿನಿಂದ ಅಲೆಪ್ಪಿಗೆ ನೇರವಾಗಿ ರೈಲು ಸಂಚಾರವಿದೆ.
ಮಾನ್ಸೂನ್ ಸಂದರ್ಭದಲ್ಲಿ ಭೇಟಿ ನೀಡಲೇಬೇಕಾದ ತಾಣವೆಂದರೆ ಅದು ರಾಜಸ್ಥಾನದ ಉದಯಪುರ. ಹೌದು. ಸರೋವರಗಳ ನಗರ, ರಾಜಸ್ಥಾನದ ಕಾಶ್ಮೀರ ಎಂದೇ ಕರೆಯಲಾಗುವ ಉದಯಪುರ ಪ್ರವಾಸಿಗರ ಪ್ರಮುಖ ಆಕರ್ಷಣೀಯ ಸ್ಥಳವಾಗಿದೆ. ಉದಯಪುರ ಹಸಿರಿನ ಅರಾವಳಿ ಪರ್ವತಗಳಿಂದ ಸುತ್ತುವರೆದಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ನಿಮ್ಮನ್ನು ನಿಬ್ಬೆರಗನ್ನಾಗಿಸುತ್ತದೆ. ಶ್ರೀಮಂತ ಸಂಸ್ಕೃತಿ, ಸರೋವರ ಮಧ್ಯದಲ್ಲಿ ಕಲಾತ್ಮಕ ಹಾಗೂ ಸುಂದರ ಭವನಗಳು, ಉದ್ಯಾನಗಳು ನಿಮ್ಮ ಕಣ್ಮನ ಸೆಳೆಯುತ್ತವೆ. ಇಲ್ಲಿನ ದೋಣಿ ವಿಹಾರ ಮನಸಿಗೆ ಮುದ ನೀಡುತ್ತದೆ. ಇಲ್ಲಿನ ಜಲಮಹಲ್, ಲೇಕ್ ಪ್ಯಾಲೇಸ್ ಸುಂದರ ತಾಣಗಳಾಗಿವೆ. ಇಲ್ಲಿ ಫತೇಹ್ ಸಾಗರ ಸರೋವರವನ್ನು ಸುಂದರ ಸರೋವರವೆಂದೇ ಕರೆಯಲಾಗುತ್ತದೆ.
ಜಲಪಾತಗಳ ತವರೂರು ಚಿರಾಪುಂಜಿ. ಮಾನ್ಸೂನ್ನಲ್ಲಿ ಚಿರಾಪುಂಜಿಯ ಪ್ರವಾಸ ಮಾಡಿ ಪ್ರಕೃತಿ ಸವಿಯನ್ನು ಸವಿಯುವುದೇ ಚೆಂದ. ಹೆಚ್ಚು ಮಳೆಯಾಗುವ ಇಲ್ಲಿ ಜಲಪಾತಗಳು ಸದಾ ಮೈದುಂಬಿ ಹರಿಯುತ್ತವೆ. ಚಿರಾಪುಂಜಿ ಭೂಮಿಯ ಮೇಲೆ ಅತಿ ಒದ್ದೆಯಾದ ಸ್ಥಳಗಳಲ್ಲೊಂದಾಗಿದೆ. ಚಿರಾಪುಂಜಿಯನ್ನು 'ಕಿತ್ತಳೆಗಳ ನಾಡು' ಎಂದೂ ಕರೆಯಲಾಗುತ್ತದೆ. ಇದು ಸಮುದ್ರ ಮಟ್ಟದಿಂದ 4500 ಅಡಿ ಎತ್ತರದಲ್ಲಿದೆ. 'ಮೇಘಗಳ ಬೀಡು', 'ಪೌರಸ್ತ್ಯ ಸ್ಕಾಟ್ಲೆಂಡ್' ಎಂದೇ ಚಿರಾಪುಂಜಿ ಖ್ಯಾತವಾಗಿದೆ. ಭಾರತದ ಈಶಾನ್ಯ ದಿಕ್ಕಿನಲ್ಲಿ ಬಾಂಗ್ಲಾದೇಶದ ಗಡಿಯ ಹತ್ತಿರ ಇರುವ ಮೇಘಾಲಯ ರಾಜ್ಯದ ಒಂದು ನಗರ. ರಾಜಧಾನಿ ಬೆಂಗಳೂರಿನಿಂದ ಚಿರಾಪುಂಜಿಗೆ 3085 ಕಿ.ಮೀ.ಗಳಾಗುತ್ತದೆ.
ಕೇರಳದಲ್ಲಿ ಪ್ರವಾಸಿಗರ ಮನಸೂರೆಗೊಂಡಿರುವ ಮತ್ತೊಂದು ತಾಣವೆಂದರೆ ಅದು ಮನ್ನಾರ್. ಅದರಲ್ಲೂ ಈ ಮಾನ್ಸೂನ್ ಸಂದರ್ಭದಲ್ಲಿ ಮನ್ನಾರ್ಗೆ ಭೇಟಿ ನೀಡಿದರೆ ಅದ್ಭುತ ಅನುಭವ ಸಿಗುತ್ತದೆ. ಕೇರಳದ ಗಿರಿಧಾಮಗಳಲ್ಲಿ ಮನ್ನಾರ್ ಅತ್ಯಂತ ಜನಪ್ರಿಯವಾಗಿದೆ. ಭವ್ಯವಾದ ಬಂಗಲೆಗಳು, ಸುತ್ತಲೂ ಹಚ್ಚ ಹಸಿರಿನ ಹೊದಿಕೆ, ಶುದ್ಧ ಹಾಗೂ ತಂಪಾದ ಗಾಳಿ ಮನಸಿಗೆ ಆಹ್ಲಾದ ಉಂಟುಮಾಡುತ್ತವೆ. ಇಲ್ಲಿ ಹೆಚ್ಚಾಗಿ ಚಹಾ ಎಸ್ಟೇಟ್ಗಳಿವೆ. ಇಲ್ಲಿಗೆ ಹೊಸದಾಗಿ ಮದುವೆಯಾಗಿರುವ ದಂಪತಿಗಳು ಹೆಚ್ಚಾಗಿ ಭೇಟಿ ನೀಡುತ್ತಾರೆ.
ಮಹಾಬಲೇಶ್ವರ ಮಹಾರಾಷ್ಟ್ರದಲ್ಲಿರುವ ಒಂದು ಸುಂದರ ಗಿರಿಧಾಮ. ಇಲ್ಲಿ ವರ್ಷಪೂರ್ತಿ ಪ್ರವಾಸಿಗರು ಭೇಟಿ ನೀಡುತ್ತಲೇ ಇರುತ್ತಾರೆ. ಇಲ್ಲಿನ ಪ್ರಕೃತಿ ಸೌಂದರ್ಯ, ಮನಸಿಗೆ ಮುದ ನೀಡುವಂತಹ ಹಿತವಾದ ವಾತಾವರಣ ಹಾಗೂ ಮುಖ್ಯವಾಗಿ ಮಹಾಬಲೇಶ್ವರ ದೇವಸ್ಥಾನ ಪ್ರವಾಸಿಗರನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಮಳೆಗಾಲದಲ್ಲಿ ಮಹಾಬಲೇಶ್ವರದ ಸೌಂದರ್ಯ ಎರಡು ಪಟ್ಟು ಜಾಸ್ತಿಯಾಗುತ್ತದೆ. ಸುತ್ತಲೂ ಹಸಿರು ಹೊದಿಕೆ, ದಟ್ಟ ಮಂಜು, ನಯನಮನೋಹರ ಜಲಪಾತಗಳು ನೋಡುಗರ ಕಣ್ಮನ ಸೆಳೆಯುತ್ತವೆ.
ಬೆಟ್ಟ ಗುಡ್ಡಗಳನ್ನು ಕಡಿದು ನಿರ್ಮಿಸಿರುವ ರಾಜಸ್ಥಾನದ ಏಕೈಕ ಗಿರಿಧಾಮ ಮೌಂಟ್ ಅಬು. ಮರುಭೂಮಿಯಿಂದ ಕೂಡಿರುವ ರಾಜಸ್ಥಾನದಲ್ಲಿ ಓಯಸಿಸ್ನಂತಿರುವ ಮೌಂಟ್ ಅಬು ಪ್ರವಾಸಿಗರನ್ನು ಸೂರೆಗೊಳಿಸುತ್ತದೆ. ಅಲ್ಲಿನ ರಮಣೀಯತೆ, ನಿಸರ್ಗ ಸೌಂದರ್ಯ, ಎತ್ತ ನೋಡಿದರೂ ಹಚ್ಚ ಹಸಿರನ್ನು ಹೊದ್ದಂತೆ ಕಾಣುವ ಮೌಂಟ್ ಅಬು ಮನೋಹರವಾಗಿ ಕಾಣುತ್ತದೆ. ಇಲ್ಲಿನ ನಕ್ಕಿ ಸರೋವರ ಪ್ರವಾಸಿಗರು ನೋಡಲೇಬೇಕಾದ ಸುಂದರ ತಾಣವಾಗಿದೆ.
ಪ್ರವಾಸಿಗರ ಸ್ವರ್ಗ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಲೊನವಾಲಾ ಗಿರಿಧಾಮ. ಇಲ್ಲಿ ಖಂಡಾಲಾ ಎಂಬ ಗಿರಿಧಾಮವೂ ಇದ್ದು, ಅವು ಅವಳಿ ಗಿರಿಧಾಮಗಳಾಗಿವೆ. ಪ್ರಕೃತಿ ಪ್ರಿಯರಿಗೆ ಈ ತಾಣ ಫೇವರಿಟ್. ಸುತ್ತಲೂ ಟ್ರೆಕ್ಕಿಂಗ್ ಕೈಗೊಳ್ಳಬಹುದಾದ ಅನೇಕ ತಾಣಗಳಿವೆ. ಲೊನವಾಲಾ ಆಕರ್ಷಣೀಯ ಸ್ಥಳವಾಗಿದೆ. ಇದು ಮುಂಬೈ ಹಾಗೂ ಪುಣೆಗೆ ಸಮೀಪದಲ್ಲಿದೆ. ಖಂಡಾಲವೂ ಸಹ ಅದ್ಭುತವಾಗಿದ್ದು, ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ.
ಉತ್ತರಾಖಂಡದಲ್ಲಿನ ವ್ಯಾಲಿ ಆಫ್ ಫ್ಲವರ್ ಸುಂದರ ಕಣಿವೆ. ಮಳೆಗಾಲದಲ್ಲಿ ಅರಳಿ ಮುಗುಳ್ನಗುವ ಹೂಗಳ ಸಾಲುಗಳ ಜೊತೆಗೆ ವೈವಿಧ್ಯಮಯ ಪ್ರಾಣಿ, ಪಶು-ಪಕ್ಷಿಗಳಿಂದಲೂ ಕೂಡಿದೆ. ಈ ಕಣಿವೆಯಲ್ಲಿ ಸುಮಾರು 650 ಬಗೆಯ ಹೂವುಗಳಿದ್ದು ಅವೆಲ್ಲ ಅರಳುವುದು ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ. ಆದ್ದರಿಂದ ಆ ವೇಳೆಗೆ ಹೋದರೆ ಹೂ ರಾಶಿಯನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಆಗಸ್ಟ್ ತಿಂಗಳ ಕೊನೆಯಲ್ಲಿ ಕಣಿವೆ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾಗುತ್ತದೆ
ಕರುನಾಡಿನ ಕೊಡಗು ಜಿಲ್ಲೆ ಭಾರತದ ಸ್ಕಾಟ್ಲ್ಯಾಂಡ್ ಹಾಗೂ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದಿಯಾಗಿದೆ. ಇದು ದೇಶದಾದ್ಯಂತದ ಚಾರಣ ಉತ್ಸಾಹಿಗಳನ್ನು ಆಕರ್ಷಿಸುವ ದೊಡ್ಡ ಪರ್ವತ ಶಿಖರಗಳಿಗೆ ನೆಲೆಯಾಗಿದೆ. ಇಲ್ಲಿನ ನೈಸರ್ಗಿಕ ಸಿರಿಯಾಗಲಿ ಅಥವಾ ಸುಂದರ ಕಾಫಿ ತೋಟಗಳಾಗಲಿ ಎಲ್ಲವೂ ಆಕರ್ಷಣೀಯವಾಗಿದೆ. ಪ್ರವಾಸಿಗರ ಸ್ವರ್ಗವಾಗಿರುವ ಕೊಡಗಿನಲ್ಲಿ ಭಾಗಮಂಡಲ, ಟಿಬೆಟಿಯನ್ ಗೋಲ್ಡನ್ ಟೆಂಪಲ್, ಓಂಕಾರೇಶ್ವರ ದೇವಸ್ಥಾನ ಮತ್ತು ತಲಕಾವೇರಿ, ಚೆಲವಾರ ಜಲಪಾತ, ಹಾರಂಗಿ ಡ್ಯಾಮ್, ಕಾವೇರಿ ನಿಸರ್ಗಧಾಮ, ದುಬಾರೆ ಆನೆ ಕ್ಯಾಂಪ್ ಇದೆ. ಕೊಡಗಿನ ಪ್ರಮುಖ ಆಕರ್ಷಣೆಯೆಂದರೆ ಅಬ್ಬಿ ಜಲಪಾತ, ಇರ್ಪು ಜಲಪಾತ, ಮಳ್ಳಳ್ಳಿ ಜಲಪಾತ, ಮಡಿಕೇರಿ ಕೋಟೆ, ರಾಜಾ ಸೀಟ್, ನಾಲ್ಕ್ನಾಡ್ ಅರಮನೆ ಮತ್ತು ಗದ್ದಿಗೆ.