ಸುರೇಶ್ ರೈನಾ: ಈಗಾಗಲೇ ರೈನಾ ಚೆನ್ನೈ ಸೂಪರ್ ಕಿಂಗ್ಸ್ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿದ್ದಾರೆ. ಹೀಗಾಗಿ ಮುಂದಿನ ಬಿಡ್ಡಿಂಗ್ನಲ್ಲಿ ಎಲ್ಲಾ ಫ್ರಾಂಚೈಸಿಗಳು ಎಡಗೈ ದಾಂಡಿಗನನ್ನು ಖರೀದಿಸಲು ಪೈಪೋಟಿ ನಡೆಸಲಿದೆ. ಹಾಗೆಯೇ ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಸುರೇಶ್ ರೈನಾ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆರ್ಸಿಬಿ ಯೋಚಿಸಿದೆ. ಹೀಗಾಗಿ ರೈನಾ ಅವರನ್ನು ಖರೀದಿಸಲು ಬೆಂಗಳೂರು ಫ್ರಾಂಚೈಸಿ ಹೆಚ್ಚಿನ ಒಲವು ತೋರಲಿದೆ. ಇದರ ಹೊರತಾಗಿ ಐಪಿಎಲ್ನಲ್ಲಿ 9ನೇ ಟೀಮ್ ಕೂಡ ಇರಲಿದ್ದು, ಹೊಸ ಫ್ರಾಂಚೈಸಿ ರೈನಾ ಅವರನ್ನು ನಾಯಕರನ್ನಾಗಿಸುವ ಯೋಜನೆಯಲ್ಲಿದೆ. ಹೀಗಾಗಿ ಆರ್ಸಿಬಿ ಪಾಲಿಗೆ ಸುರೇಶ್ ರೈನಾ ಸಿಗಲಿದ್ದಾರಾ ಎಂಬುದೇ ಯಕ್ಷ ಪ್ರಶ್ನೆ.
ಕ್ರಿಸ್ ಲಿನ್: ಕೊಲ್ಕತ್ತಾ ನೈಟ್ ರೈಡರ್ಸ್ ಪರ ಸಿಡಿಲಬ್ಬರ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದ ಕ್ರಿಸ್ ಲಿನ್ ಈ ಬಾರಿ ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಕ್ವಿಂಟನ್ ಡಿ ಕಾಕ್ ಅವರ ಅದ್ಭುತ ಪ್ರದರ್ಶನದಿಂದ ಒಂದೇ ಒಂದು ಪಂದ್ಯದಲ್ಲೂ ಆರಂಭಿಕರಾಗಿ ಕಣಕ್ಕಿಳಿಯಲಾಗಿರಲಿಲ್ಲ. ಹೀಗಾಗಿ ಮುಂದಿನ ಸೀಸನ್ನಲ್ಲಿ ಮುಂಬೈ ಕ್ರಿಸ್ ಲಿನ್ ಅವರನ್ನು ಬಿಡುಗಡೆ ಮಾಡುವುದು ಬಹುತೇಕ ಖಚಿತ. ಇತ್ತ ಸ್ಪೋಟಕ ಆರಂಭಿಕನ ಹುಡುಕಾಟದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಆಯ್ಕೆ ಕ್ರಿಸ್ ಲಿನ್ ಆಗಿರಲಿದೆ.
ಮನೀಶ್ ಪಾಂಡೆ: ಮಾಜಿ ಆರ್ಸಿಬಿ ಆಟಗಾರ ಮನೀಶ್ ಪಾಂಡೆ ಸದ್ಯ ಸನ್ರೈಸರ್ಸ್ ಹೈದರಾಬಾದ್ ತಂಡದ ಆಟಗಾರ. ಮುಂದಿನ ಸೀಸನ್ನಲ್ಲಿ ಡೇವಿಡ್ ವಾರ್ನರ್, ಕೇನ್ ವಿಲಿಯಮ್ಸನ್ ಹಾಗೂ ರಶೀದ್ ಖಾನ್ರನ್ನು ಸನ್ರೈಸರ್ಸ್ ಬಿಟ್ಟು ಕೊಡುವುದು ಬಹುತೇಕ ಅನುಮಾನ. ಅಲ್ಲದೆ ಬೌಲರ್ಗಳಾಗಿ ಸಂದೀಪ್ ಶರ್ಮಾ ಹಾಗೂ ಭುವನೇಶ್ವರ್ ಕುಮಾರ್ ಅವರನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ ಹರಾಜಿನಲ್ಲಿ ಪಾಂಡೆ ಲಭ್ಯವಾಗಲಿದ್ದಾರೆ ಎಂಬುದು ಫ್ರಾಂಚೈಸಿಗಳ ಲೆಕ್ಕಚಾರ. ಹೀಗಾಗಿ ಆರ್ಸಿಬಿ ತಂಡದ ಮಧ್ಯಮ ಕ್ರಮಾಂಕವನ್ನು ಬಲಪಡಿಸಲು ಮನೀಶ್ ಪಾಂಡೆಯ ಖರೀದಿಗೆ ಬೆಂಗಳೂರು ತಂಡದ ಮಾಲೀಕರು ಹೆಚ್ಚಿನ ಒಲವು ಹೊಂದಿದ್ದಾರೆ.
ಮಿಚೆಲ್ ಸ್ಟಾರ್ಕ್: ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದ ಮಿಚೆಲ್ ಸ್ಟಾರ್ಕ್ ಮುಂದಿನ ಸೀಸನ್ನಲ್ಲಿ ಐಪಿಎಲ್ ಆಡುವ ಸಾಧ್ಯತೆಯಿದೆ. 2020ರ ಹರಾಜಿನಲ್ಲೇ ಸ್ಟಾರ್ಕ್ ಖರೀದಿಗೆ ಆರ್ಸಿಬಿ ಬಿಗ್ ಪ್ಲ್ಯಾನ್ ಹಾಕಿಕೊಂಡಿತ್ತು. ಆದರೆ ಆಸೀಸ್ ವೇಗಿ ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದೀಗ ಮತ್ತೆ ಆಸ್ಟ್ರೇಲಿಯಾ ಹಾಗೂ ಬಿಗ್ ಬ್ಯಾಷ್ ಲೀಗ್ಗೆ ಸ್ಟಾರ್ಕ್ ಮರಳಿದ್ದಾರೆ. ಹೀಗಾಗಿ ಮುಂದಿನ ಐಪಿಎಲ್ನಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ. ಇತ್ತ ಆರ್ಸಿಬಿ ಡೇಲ್ ಸ್ಟೇನ್ ಅವರನ್ನು ಕೈ ಬಿಡಲಿರುವುದು ಕನ್ಫರ್ಮ್. ಹೀಗಾಗಿ ತಂಡದ ಪ್ರಮುಖ ವೇಗಿಯಾಗಿ ಮಿಚೆಲ್ ಸ್ಟಾರ್ಕ್ರನ್ನು ಖರೀದಿಸಲು ಆರ್ಸಿಬಿ ಹೆಚ್ಚಿನ ಹಣ ವ್ಯಯಿಸುವ ಸಾಧ್ಯತೆಯಿದೆ.
ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್ ತಂಡದ ಪಾಕೆಟ್ ಡೈನಾಮೋ ಇಶಾನ್ ಕಿಶನ್ ಅವರು ಕೂಡ ಹರಾಜಿಗೆ ಲಭ್ಯರಾಗಲಿದ್ದಾರೆ. ಏಕೆಂದರೆ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಪೊಲಾರ್ಡ್, ಸೂರ್ಯಕುಮಾರ್ ಯಾದವ್ ಹಾಗೂ ಹಾರ್ದಿಕ್ ಪಾಂಡ್ಯರನ್ನು ಮುಂಬೈ ಉಳಿಸಿಕೊಳ್ಳಲಿದೆ. ಹೀಗಾಗಿ ಪಾಕೆಟ್ ಡೈನಾಮೋವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆರ್ಸಿಬಿ ಆಸಕ್ತಿ ಹೊಂದಿದೆ. ಇದರಿಂದ ಡೆತ್ ಓವರ್ ಸ್ಪೆಷಲಿಸ್ಟ್ ಅಥವಾ ಆರಂಭಿಕರಾಗಿ ಇಶಾನ್ ಕಿಶನ್ ಅವರನ್ನು ಬಳಸಿಕೊಳ್ಳಬಹುದು ಎಂಬುದು ಆರ್ಸಿಬಿಯ ಲೆಕ್ಕಚಾರ. ಒಟ್ಟಿನಲ್ಲಿ 2021ರಲ್ಲಿ ಕಪ್ ತನ್ನದಾಗಿಸಿಕೊಳ್ಳಲು ಆರ್ಸಿಬಿ ಫ್ರಾಂಚೈಸಿ ಈಗಾಗಲೇ ಸಕಲ ಸಿದ್ಧತೆಯಲ್ಲಿದ್ದು, ಅಂತಿಮವಾಗಿ ಯಾರು ತಂಡದಿಂದ ಹೊರಬೀಳಲಿದ್ದಾರೆ. ಯಾರು ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.