ನವದೆಹಲಿ: ಅಯನ್ ಮುಖರ್ಜಿ ನಿರ್ದೇಶನದ, ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ಬ್ರಹ್ಮಾಸ್ತ್ರ-1 ಸಿನಿಮಾದ ಕಳೆದ ವರ್ಷ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಿ ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿತ್ತು. ಚಿತ್ರದಲ್ಲಿ ರಣಬೀರ್, ಆಲಿಯಾ, ಅಮಿತಾಬ್ ಬಚ್ಚನ್, ಮೌನಿ ರಾಯ್ ಮತ್ತು ನಾಗಾರ್ಜುನ ನಿರ್ವಹಿಸಿದ ಪಾತ್ರಗಳು ಜನರ ಮನಗೆದ್ದಿತ್ತು. ಅದೇ ಯಶಸ್ಸಿನ ಖುಷಿಯಲ್ಲಿರೋವಾಗ ಬ್ರಹ್ಮಾಸ್ತ್ರ-2 ಸಿನಿಮಾ ಮಾಡೋದರ ಕುರಿತು ಸಿನಿಮಾ ತಂಡ ಮಾತುಕತೆ ನಡೆಸಿತ್ತು.
ಬ್ರಹ್ಮಾಸ್ತ್ರ ಮೊದಲ ಭಾಗದಲ್ಲಿ ‘ಶಿವ’ನ ಪಾತ್ರದಲ್ಲಿ ರಣಬೀರ್ ಕಪೂರ್ ಮಿಂಚಿದ್ರೆ, ಸಿನಿಮಾದ ಎರಡನೇ ಪಾರ್ಟ್ನಲ್ಲಿ ‘ದೇವ್’ ಕಥೆಯನ್ನು ಹೈಲೈಟ್ ಮಾಡಲಾಗುತ್ತೆ ಎಂದು ಸಿನಿಮಾ ತಂಡ ಈಗಾಗಲೇ ಹಿಂಟ್ ಕೊಟ್ಟಿದೆ.. ಹೀಗಾಗಿ ಸಹಜವಾಗಿಯೇ ಪಾರ್ಟ್ 2 ರಲ್ಲಿ ದೇವ್ ಪಾತ್ರಕ್ಕೆ ಬಣ್ಣ ಹಚ್ಚೋರು ಯಾರು ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ನ್ಯೂಸ್ 18 ವಿಶೇಷ ಸಂವಾದದಲ್ಲಿ ಅಯಾನ್ ಅವರು ಉತ್ತರಿಸಲು ಪ್ರಯತ್ನ ಪಟ್ಟಿದ್ದಾರೆ.
ಇತ್ತೀಚೆಗೆ ನ್ಯೂಸ್ 18 ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಬ್ರಹ್ಮಾಸ್ತ್ರ-1 ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿತ್ತು. ಉತ್ತಮ ನಿರ್ದೇಶನ ವಿಭಾಗದಲ್ಲಿ ಬ್ರಹ್ಮಾಸ್ತ್ರ-1 ರ ನಿರ್ದೇಶಕ ಅಯನ್ ಪ್ರಶಸ್ತಿ ಪಡೆದುಕೊಂಡಿದ್ದರು. ಈ ವೇಳೆ ಮಾತನಾಡಿದ್ದ ಅವರು, ನನಗೆ ಈ ಪ್ರಶಸ್ತಿ ತುಂಬಾ ಮೌಲ್ಯಯುತವಾಗಿದೆ. ಇದುವರೆಗೂ ನಾನು ಪ್ರಶಸ್ತಿ ಪಡೆದಿಲ್ಲ. ಪ್ರಶಸ್ತಿಗಳು ಯಾವಾಗಲೂ ನಿಮಗೆ ಒಳ್ಳೆಯದನ್ನು ನೀಡುತ್ತದೆ. ನಿಮ್ಮ ಕೆಲಸಕ್ಕಾಗಿ ಇತರರಿಂದ ಮೆಚ್ಚುಗೆ ಪಡೆಯುವುದು ಒಳ್ಳೆಯದು ಎಂದು ಹೇಳಿದ್ದರು.
ಮುಂದುವರಿದು ಮಾತನಾಡಿದ್ದ ಅಯನ್, ಏಳು ವರ್ಷಗಳಿಂದ ಸಕ್ರಿಯವಾಗಿ ಸಿನಿಮಾ ಮಾಡುತ್ತಿದ್ದೇನೆ. ಜೊತೆಗೆ ಬರವಣಿಗೆಗಾಗಿ ಕೆಲವು ವರ್ಷಗಳನ್ನು ಕಳೆದಿದ್ದೇನೆ. ಪ್ರತಿಯೊಬ್ಬ ಚಿತ್ರನಿರ್ಮಾಪಕ ಕೂಡ ತನ್ನ ಸಿನಿಮಾದಿಂದ ತನ್ನ ಜೀವನವನ್ನು ಅಳೆಯುತ್ತಾನೆ. 2013ರಲ್ಲಿ ‘ಯೇ ಜವಾನಿ ಹೈ ದೀವಾನಿ’ ಸಿನಿಮಾ ಬಂದಾಗ ನನಗೆ 29 . ಬ್ರಹ್ಮಾಸ್ತ್ರ ಬಿಡುಗಡೆಯಾದಾಗ ನನಗೆ 39 ವರ್ಷ ಆಗಿದೆ. ಹಾಗಾಗಿ ಇಂದೊದು ಸುದೀರ್ಘವಾದ ಪಯಣ ಎಂದು ಹೇಳಿದ್ದಾರೆ.
ನ್ಯೂಸ್ 18 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ಅನಿಲ್ ಕಪೂರ್ ಅವರಿಂದ ಪ್ರಶಸ್ತಿ ಸ್ವೀಕರಿಸುವ ವೇಳೆ ಬ್ರಹ್ಮಾಸ್ತ್ರ ಭಾಗ 2 ದೊಡ್ಡ ಮಟ್ಟದಲ್ಲಿ ತಯಾರಾಗುತ್ತದೆ ಎಂದು ಪ್ರೇಕ್ಷಕರಿಗೆ ಭರವಸೆ ನೀಡಿದ್ದರು. ಬಹಳ ಪ್ರೀತಿಯಿಂದ ಸಿನಿಮಾ ನಿರ್ಮಾಣ ಮಾಡುತ್ತಿದ್ದೇವೆ. ಬ್ರಹ್ಮಾಸ್ತ್ರ 2 ಸಿನಿಮಾದಲ್ಲಿ ಇದಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಮನರಂಜಿಸಲು ಪ್ಲಾನ್ ರೂಪಿಸುತ್ತಿದ್ದೇವೆ. ಅದನ್ನು ಮಾಡ್ತೀವಿ ಎಂದು ಹೇಳಿದ್ದರು.