ಸಾಮಾನ್ಯವಾಗಿ ಈ ರಸ್ತೆ ಅಗಲೀಕರಣ, ಕಟ್ಟಡಗಳು ಅನಧಿಕೃತವಾಗಿದ್ದರೆ ಮಹಾ ನಗರಕ್ಕೆ ಸಂಬಂಧಪಟ್ಟ ಮಹಾನಗರ ಪಾಲಿಕೆಯವರು ಅಂತಹ ಕಟ್ಟಡಗಳನ್ನು ನೆಲಸಮಗೊಳಿಸುವುದನ್ನು ನಾವೆಲ್ಲಾ ನೋಡಿರುತ್ತೇವೆ. ಆದರೆ ಕೆಲವೊಂದು ಮಹಾನಗರ ಪಾಲಿಕೆಯ ಕೆಲಸಗಳಲ್ಲಿ ಈ ಕಟ್ಟಡಗಳನ್ನು ನೆಲಸಮಗೊಳಿಸಿದ್ದರೆ, ಸಂಬಂಧಪಟ್ಟ ಅಧಿಕಾರಿಗಳು ಮೊದಲಿಗೆ ಬಂದು ಆ ನೆಲಸಮಗೊಳ್ಳುತ್ತಿರುವ ಕಟ್ಟಡಕ್ಕೆ ಎಷ್ಟು ಹಣವನ್ನು ಪರಿಹಾರವಾಗಿ ಆ ಬಿಲ್ಡಿಂಗ್ ಮಾಲೀಕರಿಗೆ ನೀಡಬೇಕು ಅಂತ ಲೆಕ್ಕ ಹಾಕುತ್ತಾರೆ.
ಇದರ ಬಗ್ಗೆ ಈಗೇಕೆ ಮಾತನಾಡುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು. ವಿಷಯ ಏನೆಂದರೆ ಇಲ್ಲಿ ಒಬ್ಬ ನಟಿಯ ಬಿಲ್ಡಿಂಗ್ ಅನ್ನು ಮುಂಬೈಯಲ್ಲಿ ಮಹಾನಗರ ಪಾಲಿಕೆಯವರು ನೆಲಸಮಗೊಳಿಸಿದ್ದರಂತೆ. ಆಗ ನಟಿ ಆ ಬಿಲ್ಡಿಂಗ್ ನೆಲಸಮಗೊಳಿಸಿದ್ದಕ್ಕೆ ಸುಮಾರು 2 ಕೋಟಿ ರೂಪಾಯಿ ಪರಿಹಾರವನ್ನು ಸಹ ಕೇಳಿದ್ದರಂತೆ. ಆದರೆ ಇಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಈ ನಟಿ ಈಗ ತನಗೆ ಆ ಪರಿಹಾರದ ಹಣ ಬೇಡ ಅಂತ ಹೇಳುತ್ತಿದ್ದಾರೆ ನೋಡಿ.
ನಟಿ ಕಂಗನಾ ರಣಾವತ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮುಂಬೈನಲ್ಲಿ ನೆಲಸಮಗೊಳಿಸಿದ ಅವರ ಆಸ್ತಿಗೆ ಯಾವುದೇ ಪರಿಹಾರವನ್ನು ಪಡೆದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಸೆಪ್ಟೆಂಬರ್ 2020 ರಲ್ಲಿ, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಬಾಂದ್ರಾದ ಪಾಲಿ ಹಿಲ್ ನಲ್ಲಿರುವ ಅವರ ಒಂದು ಕಟ್ಟಡವನ್ನು (ಆಸ್ತಿಯನ್ನು) ಭಾಗಶಃ ನೆಲಸಮಗೊಳಿಸಿತು. ಅನಧಿಕೃತ ನಿರ್ಮಾಣದ ಆಧಾರದ ಮೇಲೆ ಈ ನೆಲಸಮಗೊಳಿಸುವ ಕೆಲಸ ನಡೆದಿತ್ತು.
ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಂಗನಾ "ನನಗೆ ಇಲ್ಲಿಯವರೆಗೆ ಯಾವುದೇ ಪರಿಹಾರ ಸಿಕ್ಕಿಲ್ಲ, ಅವರು ಮೌಲ್ಯಮಾಪಕರನ್ನು ಕಳುಹಿಸಬೇಕಾಗಿತ್ತು. ಆದ್ದರಿಂದ, ನಾನು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ್ ಸಂಭಾಜಿ ಶಿಂಧೆ ಅವರನ್ನು ಭೇಟಿಯಾದೆ. ಆದರೆ ತೆರಿಗೆದಾರರ ಹಣವನ್ನು ದುರುಪಯೋಗಪಡಿಸಿಕೊಂಡ ಯಾವ ಪರಿಹಾರವನ್ನೂ ನಾನು ಬಯಸುವುದಿಲ್ಲ. ನನಗೆ ಹೆಚ್ಚಿನ ಪರಿಹಾರ ಬೇಕಾಗಿಲ್ಲ” ಅಂತ ಕಂಗನಾ ಈಗ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ.