ಕೆಲ ತಿಂಗಳ ಹಿಂದಷ್ಟೇ ರಕ್ಷಿತಾ ರೆಡ್ಡಿ ಅವರೊಂದಿಗೆ ನಟ ಶರ್ವಾನಂದ್ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಟಾಲಿವುಡ್ ಚಿತ್ರರಂಗದ ವಿವಿಧ ಗಣ್ಯರು ಭಾಗಿಯಾಗಿದ್ದರು. ಹೈದರಾಬಾದ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ರಾಮ್ ಚರಣ್, ಅದಿತಿ ರಾವ್ ಮತ್ತು ಅಖಿಲ್ ಅಕ್ಕಿನೇನಿ ಸೇರಿದಂತೆ ಹಲವು ಗಣ್ಯರು ಹಾಜರಾಗಿದ್ದರು. ಆದರೆ ನಿಶ್ಚಿತಾರ್ಥ ನಡೆದು ಐದು ತಿಂಗಳು ಕಳೆದರೂ ಇನ್ನೂ ಮದುವೆ ಆಗದಿರುವ ಕಾರಣಕ್ಕೆ ಹಲವು ಸುದ್ದಿಗಳು ಹರಿದಾಡಲು ಆರಂಭವಾಗಿದೆ.
ಶರ್ವಾನಂದ್ ಮತ್ತು ರಕ್ಷಿತಾ ರೆಡ್ಡಿ ಮದುವೆ ಕ್ಯಾನ್ಸಲ್ ಆಗಿದ್ದು, ನಿಶ್ಚಿತಾರ್ಥ ಮುರಿದು ಬಿದ್ದಿದೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಶರ್ವಾನಂದ್ ಮತ್ತು ರಕ್ಷಿತಾ ಬ್ರೇಕ್ ಅಪ್ ಆಗಿದೆ ಎಂಬ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಸದ್ಯ ಶರ್ವಾನಂದ್ ಟೀಂ ಸ್ಪಷ್ಟನೆ ನೀಡಿದೆ. ಶರ್ವಾನಂದ್ ಮದುವೆಗೂ ಮುನ್ನ ಕಮಿಟ್ ಆಗಿದ್ದ ಎಲ್ಲಾ ಸಿನಿಮಾಗಳನ್ನು ಪೂರ್ಣಗೊಳಿಸುವ ಯೋಚನೆಯಲ್ಲಿದ್ದಾರೆ ಎಂದು ಅವರ ಟೀಂ ತಿಳಿಸಿದೆ.
ಇನ್ನು, ಶರ್ವಾನಂದ್ ಮದುವೆಯಾಗಲಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ. ಅಲ್ಲದೆ, ಆಕೆ ಸಾಫ್ಟ್ವೇರ್ ಇಂಜಿನಿಯರ್ ಎಂದು ಶರ್ವಾನಂದ್ ಅವರ ಆಪ್ತ ಮೂಲಗಳು ತಿಳಿಸಿವೆ. ಶರ್ವಾನಂದ್ ಮದುವೆಯಾಗಲಿರುವ ರಕ್ಷಿತಾ ರೆಡ್ಡಿ ತೆಲಂಗಾಣ ಹೈಕೋರ್ಟ್ ವಕೀಲ ಮಧುಸೂದನ್ ರೆಡ್ಡಿ ಅವರ ಪುತ್ರಿ ಎನ್ನಲಾಗಿದೆ. ಇದಲ್ಲದೆ, ಅವರು ಮಾಜಿ ಸಚಿವ ಬೊಜ್ಜಲ ಗೋಪಾಲಕೃಷ್ಣ ರೆಡ್ಡಿ ಅವರ ಮೊಮ್ಮಗಳು ಎಂಬ ಮಾಹಿತಿ ಲಭ್ಯವಾಗಿದೆ.
ಶರ್ವಾನಂದ್ 2003ರಲ್ಲಿ ತೆರೆಕಂಡ ‘ಐದೋ ತಾರೀಖು’ ಚಿತ್ರದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ್ದರು. ಬಳಿಕ ಹಲವು ಸಿನಿಮಾಗಳಲ್ಲಿ ಪೋಷಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಅವರೊಂದಿಗೆ ಥಮ್ಸ್ ಅಪ್ ಜಾಹೀರಾತಿನಲ್ಲಿ ನಟಿಸಿದ್ದರು, ಅಲ್ಲದೆ ‘ಶಂಕರ್ ದಾದಾ ಎಂಬಿಬಿಎಸ್’ ಚಿತ್ರದಲ್ಲಿಯೂ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು.
ನಂತರ ವಿಕ್ಟರಿ ವೆಂಕಟೇಶ್ ಅವರು ನಟಿಸಿದ್ದ ಸೂಪರ್ ಹಿಟ್ ಸಿನಿಮಾಗಳಾದ ‘ಸಂಕ್ರಾಂತಿ’, ‘ಲಕ್ಷ್ಮಿ’ ಚಿತ್ರಗಳಲ್ಲಿ ಹೀರೋ ಸಹೋದರನ ಪಾತ್ರದಲ್ಲಿ ನಟಿಸಿದ್ದರು. ಆ ಬಳಿಕ ಗಮ್ಯಂ ಸಿನಿಮಾ ಮೂಲಕ ತೆಲುಗು ಮತ್ತು ತಮಿಳಿನಲ್ಲಿ ಉತ್ತಮ ಯಶಸ್ಸು ಗಳಿಸಿದ್ದರು. ನಂತರ ಹೀರೋ ಆಗಿ ಹಲವು ಸಿನಿಮಾಗಳಲ್ಲಿ ನಟಿಸಿ ಪ್ಲಾಪ್ಗಳನ್ನು ಪಡೆದುಕೊಂಡಿದ್ದರು. ಆದರೆ ಅವರಿಗೆ ಗಮ್ಯಂ, ಪ್ರಸ್ಥಾನಂ, ಶತಮಾನಂ ಭವತಿ ಸಿನಿಮಾಗಳ ನಟನೆಗಾಗಿ ವಿಶ್ಲೇಷಕರು, ಸಿನಿಮಾ ಅಭಿಮಾನಗಳ ಮನಗೆದಿದ್ದರು.