ವಿಜಯಪುರ: ಒಂದು ಕಡೆ ಬಾಳೆಹಣ್ಣು, ಅನ್ನ ಹಾಗೂ ಇನ್ನಿತರ ತಿಂಡಿಗಳು. ಇನ್ನೊಂದೆಡೆ ತಟ್ಟೆ, ಟವೆಲ್ ಹಿಡಿದು ನೆಲದಲ್ಲಿ ಕೂತಿರೋ ಮಹಿಳೆಯರು. ಹೌದು, ನೆತ್ತಿ ಮೇಲೆ ಸುಡುವ ಬಿಸಿಲಿದ್ದರೂ ಇದ್ಯಾವುದೂ ಇವರಿಗೆ ಲೆಕ್ಕಕ್ಕೆ ಬಾರದು. ಅಷ್ಟಕ್ಕೂ ಏನಿದು ಆಚರಣೆ (Yalagureshwara Temple Jatra) ಅಂತೀರಾ? ಎಲ್ಲವನ್ನೂ ಹೇಳ್ತೀವಿ ನೋಡಿ.
ಹರಿಶಾವಿಗೆ ಸಂಪ್ರದಾಯ
ಯೆಸ್, ಇಂತಹ ದೃಶ್ಯ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಶ್ರೀ ಯಲಗೂರು ಆಂಜನೇಯನ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ. ಪ್ರತಿ ವರ್ಷ ಈ ಯಲಗೂರೇಶ್ವರನಿಗೆ ಜರುಗುವ ಜಾತ್ರೆ ಮತ್ತು ಕಾರ್ತಿಕೋತ್ಸವ ಸಂದರ್ಭಗಳಲ್ಲಿ ಹರಿಶಾವಿಗೆ ಪ್ರಸಾದ ನಡೆಯುತ್ತದೆ. ಈ ಹರಿಶಾವಿಗೆ ಪದ್ಧತಿ ತಲೆ ತಲಾಂತರದಿಂದ ನಡೆದುಕೊಂಡು ಬಂದಿದ್ದು, ನೈವೇದ್ಯವನ್ನ ಯಲಗೂರೇಶ್ವರನಿಗೆ ಅರ್ಪಿಸಿ, ಬಳಿಯ ಯಾವುದೇ ಜಾತಿ ಧರ್ಮ ಎನ್ನದೇ ಎಲ್ಲರೂ ಒಟ್ಟಿಗೆ ಕುಳಿತು ಸ್ವೀಕರಿಸುತ್ತಾರೆ.
ಸುಡು ಬಿಸಿಲಲ್ಲಿ ಕಾಯುವ ಭಕ್ತರು
ಹರಿಶಾವಿಗೆ ಪ್ರಸಾದ ಸ್ವೀಕರಿಸೋಕೆ ಭಕ್ತರು ಸುಡು ಬಿಸಿಲನ್ನೂ ಲೆಕ್ಕಿಸದೇ ಪ್ರಸಾದಕ್ಕಾಗಿ ನೆಲದಲ್ಲಿಯೇ ಕೂತು ಕಾಯುತ್ತಾರೆ. ದೇವರಿಗೆ ನೇವೇದ್ಯ ಅರ್ಪಿಸಿದ ಬಳಿಕ ಭಕ್ತರಿಗೂ ಹಂಚಲಾಗುತ್ತದೆ.
ಐದು ದಿನಗಳ ಉಪವಾಸ ವೃತ
ಯಲಗೂರೇಶ್ವರನು ಏಳೂರು ಒಡೆಯನಾಗಿದ್ದರಿಂದ ಏಳು ಗ್ರಾಮಗಳ ಅನೇಕರು ಐದು ದಿನಗಳಿಂದ ಮನೆಯಲ್ಲಿ ಊಟ ಮಾಡದೇ ಕೇವಲ ಫಲಾಹಾರ ಸ್ವೀಕರಿಸಿರುತ್ತಾರೆ. ಹಾಗಾಗಿ ದೇಗುಲದಲ್ಲಿ ಸ್ವೀಕರಿಸುವ ಪ್ರಸಾದ ಸೇವಿಸಿ ಉಪವಾಸ ತೊರೆದು ಊಟೋಪಚಾರ ಮುಗಿಸುತ್ತಾರೆ. ಸುತ್ತಲಿನ ಏಳು ಗ್ರಾಮಗಳ ಜನತೆ ತಮ್ಮ ಮನೆಯಿಂದ ದೇವರ ನೈವೇದ್ಯಕ್ಕೆ ಪ್ರಸಾದ ತಯಾರಿಸಿಕೊಂಡು ಬಂದಿರುತ್ತಾರೆ. ಅದನ್ನು ಇಲ್ಲಿ ಬಾಬುದಾರರಿಗೆ ಮತ್ತು ನಾನಾ ಜಾತಿಯ ಸೇವಾಕರ್ತರಿಗೆ ವಿತರಿಸಲಾಗುತ್ತದೆ.
ಇದನ್ನೂ ಓದಿ: Babaladi Sadashiv Mutya: ದೇವರಿಗೆ ಹೂ, ಹಣ್ಣಿನ ಬದಲು ಎಣ್ಣೆ ನೈವೇದ್ಯ! ಇಲ್ಲಿ ಮದ್ಯವೇ ತೀರ್ಥ!
ಒಂದು ತಾಸು ಪ್ರಸಾದ ಸೇವೆ
ಭಕ್ತರು ಮನೆಯಿಂದ ವಿಶೇಷವಾಗಿ ಹೋಳಿಗೆ, ಕಡಬು ತಯಾರಿಸಿಕೊಂಡು ಬಂದಿರುತ್ತಾರೆ. ಇಲ್ಲಿಗೆ ಬರೋ ಭಕ್ತರಿಗೆ ಗೋಪಾಳ ಮತ್ತು ಪತ್ರೋಳಿ ಎಲೆಯನ್ನ ನೀಡಿದ ನಂತರ ಸರಿ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ಪ್ರಸಾದವನ್ನ ಬಡಿಸುತ್ತಾರೆ. ಭಕ್ತರು ದೇವರಿಗೆ ಮಡಿಯಿಂದ ತಯಾರಿಸಿದ ಭಕ್ಷ್ಯ ಭೋಜನವನ್ನ ತಂದಿರುತ್ತಾರೆ. ಅದನ್ನೇ ಪ್ರಸಾದದ ರೀತಿಯಲ್ಲಿ ಬಡಿಸುತ್ತಾರೆ.
ಇದನ್ನೂ ಓದಿ: Pink Auto: ಮಹಿಳೆಯರೇ ಗಮನಿಸಿ, ಪಿಂಕ್ ಆಟೋ ಚಾಲಕರಾಗಲು ಹೀಗೆ ಅರ್ಜಿ ಹಾಕಿ
ಗೋವಿಂದ.. ಗೋವಿಂದ..
ಅಂತಿಮವಾಗಿ ಇದೆಲ್ಲ ಮುಗಿದು ಭಕ್ತರು ದೇವಸ್ಥಾನದ ಮುಂದೆ ನಿಂತು ಕೈ ಎತ್ತಿ "ಗೋವಿಂದ ಗೋವಿಂದಾ" ಎಂದು ಉದ್ಘೋಷಿಸುತ್ತಾರೆ. ಇಲ್ಲಿಗೆ ಹರಿಶಾವಿಗೆ ಪ್ರಸಾದ ಸಂಪ್ರದಾಯ ಮುಕ್ತಾಯವಾಗುತ್ತೆ. ಒಟ್ಟಿನಲ್ಲಿ ಇದೊಂದು ಸರ್ವಧರ್ಮ ನೈವೇದ್ಯ, ಅದನ್ನು ಭಿಕ್ಷೆ ರೀತಿಯಲ್ಲಿ ಭಕ್ತರು ಸ್ವೀಕರಿಸುವುದು ಸಂಪ್ರದಾಯ ಹಾಗೂ ಭಕ್ತಿಯ ಪರಾಕಾಷ್ಠೆಯೂ ಆಗಿದೆ.
ವರದಿ: ಪ್ರಶಾಂತ್ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ