ವಿಜಯಪುರ: ನದಿ ತೀರದ ತುಂಬ ಪಲ್ಲಕ್ಕಿಗಳ ಸಾಲು. ಡೊಳ್ಳು, ಹಲಗೆ ಸದ್ದಿನ ನಡುವೆ ಭಕ್ತರ (Ugadi 2023) ಸಂಭ್ರಮ. ಅಷ್ಟಕ್ಕೂ ರಾಶಿ ರಾಶಿ ಪಲ್ಲಕ್ಕಿಗಳನ್ನ (Palanquin) ನದಿ ತೀರಕ್ಕೆ ತಂದಿದ್ದಾದ್ರೂ ಯಾಕೆ ಗೊತ್ತಾ? ಈ ಸ್ಟೋರಿ ನೋಡಿ ನಿಮ್ಗೇ ಗೊತ್ತಾಗುತ್ತೆ.
ಯೆಸ್, ಯುಗಾದಿ ಹಬ್ಬದ ದಿನ ವಿಜಯಪುರದ ಕೃಷ್ಣಾ ನದಿ ತೀರದಲ್ಲಿ ಇಂತಹ ಸಂಭ್ರಮ ಕಂಡುಬರುತ್ತೆ. ಈ ದಿನದಂದು ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ನೂರಾರು ದೇವರ ಪಲ್ಲಕ್ಕಿ, ಉತ್ಸವ ಮೂರ್ತಿ ಹಾಗೂ ದೇವರ ಪರಿಕರಗಳನ್ನ ನದಿ ತೀರಕ್ಕೆ ತಂದು ಅದನ್ನ ಶುದ್ಧೀಕರಣ ಮಾಡುವ ಸಂಪ್ರದಾಯವಿದೆ. ಹೀಗಾಗಿ ಈ ಅವಳಿ ಜಿಲ್ಲೆಗಳ ನೂರಾರು ದೇವಸ್ಥಾನಗಳ ಪಲ್ಲಕ್ಕಿ, ಉತ್ಸವ ಮೂರ್ತಿಗಳನ್ನ ಇಲ್ಲಿಗೆ ಕರೆತರಲಾಗುತ್ತೆ.
ವಿವಿಧ ಗ್ರಾಮದಿಂದ ಪಲ್ಲಕ್ಕಿಗಳ ಆಗಮನ
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ, ಬಸವನ ಬಾಗೇವಾಡಿ, ಕೊಲ್ಹಾರ, ಬಾಗಲಕೋಟೆ ಜಿಲ್ಲೆಯ ರಾಂಪೂರ, ಸೀತಿಮನಿ, ಬೇವೂರ, ಹೊಸೂರು ಸೇರಿದಂತೆ ನಾನಾ ಗ್ರಾಮಗಳ ಭಕ್ತರು ಪಲ್ಲಕ್ಕಿಗಳನ್ನು ಹೊತ್ತುಕೊಂಡು, ಕೆಲವರು ಟಂಟಂ , ಟ್ರಾಕ್ಟರ್, ಎತ್ತಿನ ಬಂಡಿಯ ಮೂಲಕ ಕರೆತರುತ್ತಾರೆ. ಆಲಮಟ್ಟಿ ಆಣೆಕಟ್ಟೆ, ಚಂದ್ರಗಿರಿ ಕೃಷ್ಣಾ ನದಿ ತೀರ, ಯಲಗೂರು ನದಿ ತೀರ ಜಲಾಶಯದ ಬಲಭಾಗದಲ್ಲಿ ಆಗಮಿಸಿದ್ದರು.
ಸಂಭ್ರಮದ ಉತ್ಸವ
ನದಿಯ ಎರಡು ಭಾಗದಲ್ಲೂ ಜನ ದೇವರ ಮೂರ್ತಿಗಳನ್ನ ಸ್ನಾನ ಮಾಡಿಸಿದರೆ, ಪಲ್ಲಕ್ಕಿಗಳನ್ನ, ಪರಿಕರಗಳನ್ನು ಕೂಡಾ ಶುದ್ಧೀಕರಿಸಲಾಯಿತು. ಈ ಸಂದರ್ಭ ಛತ್ರ- ಚಾಮರ, ಪಲ್ಲಕ್ಕಿಗಳ ಸಂಭ್ರಮ ಮನೆ ಮಾಡಿತ್ತು. ಕಳಶಗಳ ಮೆರವಣಿಗೆ, ಡೊಳ್ಳು ಕುಣಿತ, ಹಲಗೆ ವಾದನ, ಕೊಂಬು ಊದುವುದು ಸೇರಿದಂತೆ ನಾನಾ ಬಗೆಯ ಸದ್ದುಗಳು ಮಾರ್ದನಿಸಿದವು. ಭಕ್ತಿಯ ಭಾವುಕತೆಯಲ್ಲಿ ತೇಲಿಸಿದವು.
ಇದನ್ನೂ ಓದಿ: Vijayapura: ಯಾವ ಜಾನುವಾರಿಗೆ ಎಷ್ಟು ರೇಟ್? ಕೃಷಿಕರಿಂದ ನಡೆಯಿತು ನೋಡಿ ಭರ್ಜರಿ ಬ್ಯುಸಿನೆಸ್
ವಿಶೇಷ ನೈವೇದ್ಯ ಅರ್ಪಣೆ
ಭಕ್ತರೆಲ್ಲರೂ ಅಮವಾಸ್ಯೆ ದಿನ ರಾತ್ರಿ ಒಂದು ದಿನ ವಸತಿ ಇದ್ದು, ಕೃಷ್ಣೆಯಲ್ಲಿ ಯುಗಾದಿ ಅಮವಾಸ್ಯೆ ಇಲ್ಲವೇ ಯುಗಾದಿ ಪಾಡ್ಯ ದಿನದಂದು ಮೂರ್ತಿಗಳಿಗೆ ಸ್ನಾನ ಮಾಡಿಸಿ, ತಾವೂ ಸ್ನಾನ ಮಾಡಿ ಮರಳಿ ಹೋಗುತ್ತಾರೆ. ಹೀಗೆ ನೂರಾರು ಪಲ್ಲಕ್ಕಿಗಳು, ಉತ್ಸವ ಮೂರ್ತಿಗಳು ಶುದ್ಧೀಕರಣ ಆದ ನಂತರ ಅವುಗಳನ್ನು ಭಕ್ತರು ಹೂವಿನಿಂದ ಅಲಂಕರಿಸುತ್ತಾರೆ. ಬಳಿಕ ದೇವರಿಗೆ ನೈವೇದ್ಯ ಅರ್ಪಿಸುವ ಮೂಲಕ ನಮಿಸುತ್ತಾರೆ.
ಇದನ್ನೂ ಓದಿ: Ugadi 2023 Jatra: ಮುಳುಗಡೆ ಸಂತ್ರಸ್ತರ ಅದ್ದೂರಿ ಜಾತ್ರೆ, ಯುಗಾದಿಗೂ ಮುನ್ನ ಹೆಚ್ಚಾಯ್ತು ಸಂಭ್ರಮ
ಒಟ್ಟಿನಲ್ಲಿ ಯುಗಾದಿ ಹಬ್ಬದ ಹಿನ್ನೆಲೆ ಹೊಸ ಸಂವತ್ಸರಕ್ಕೆ ಕಾಲಿಡುತ್ತಿದ್ದಂತೆ ನೂರಾರು ದೇವರುಗಳ ಸಂಗಮ, ಅದರ ಶುದ್ಧೀಕರಣ ಮನಮೋಹಕವೆನಿಸುತ್ತವೆ.
ವರದಿ: ಪ್ರಶಾಂತ ಹೂಗಾರ್, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ