ವಿಜಯಪುರ: ಬರದ ನಾಡಿನಲ್ಲಿ ಹಚ್ಚ ಹಸಿರ ಗಿಡಗಳ ನಡುವೆ ಕಾಶ್ಮೀರದ ಘಮಲು. ಸೇಬು ಹಣ್ಣಿನ ಫಸಲು ಕಂಡು ಖುಷಿಯಾಗಿರೋ ಬೆಳೆಗಾರ. ಹಸಿರಿನಿಂದ ಕೆಂಬಣ್ಣಕ್ಕೆ ತಿರುಗುತ್ತಿರೋ ಕಾಶ್ಮೀರಿ ಸೇಬುಗಳು (Kashmiri Apple) ಬೆಳೆಗಾರನ ಶ್ರಮದ ಫಲ. ಹೌದು, ಮಂಜಿನ ಹನಿಯಲ್ಲಿ ಬೆಳೆಯುವ ಹಣ್ಣು ಬಿಸಿಲ ಪ್ರಖರತೆಗೂ ಬೆಳೆದು ನಿಂತಿದ್ದೇ ಕುತೂಹಲ.
ಯೆಸ್, ವಿಜಯಪುರ ಅಂದ್ರೇನೆ ದ್ರಾಕ್ಷಿ, ಲಿಂಬು ಕಣಜ ಅಂತಾನೇ ಫೇಮಸ್ ಆಗಿತ್ತು. ಇದೀಗ ಬರದ ನಾಡಿನಲ್ಲೂ ಸೇಬು ಬೆಳೆದು ರೈತನೋರ್ವ ಸೈ ಎನಿಸಿಕೊಂಡಿದ್ದಾನೆ. ಕೊಲ್ಹಾರದ ಪ್ರಗತಿಪರ ರೈತ ಸಿದ್ದಪ್ಪ ಬಾಲಗೊಂಡ ಅವರು ಕಪ್ಪು ನೆಲದಲ್ಲಿ ಸೇಬು ಬೆಳೆದಿದ್ದಾರೆ.
ಹುಬ್ಬೇರಿಸುವಂತೆ ಮಾಡಿದ ರೈತ!
ಸಮಶೀತೋಷ್ಣ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುವ ಈ ಸೇಬನ್ನು ಸಾಮಾನ್ಯವಾಗಿ ಹಿಮದಿಂದ ಕೂಡಿದ ಕಾಶ್ಮೀರದಲ್ಲಿ ಕಾಣುತ್ತೇವೆ. ಅಲ್ಲದೇ, ಸೇಬು ಬೆಳವಣಿಗೆಗೆ 4 ರಿಂದ 21 ಡಿಗ್ರಿ ಸೆಲ್ಸಿಯಸ್ನಷ್ಟು ಉಷ್ಣಾಂಶ ವಾರ್ಷಿಕವಾಗಿ 100 ರಿಂದ 124 ಸೆಂಟಿ ಮೀಟರ್ನಷ್ಟು ಮಳೆ ಬೇಕಾಗುತ್ತೆ. ಆದರೆ ಇದೆಲ್ಲಕ್ಕೂ ವ್ಯತಿರಿಕ್ತವಾಗಿರೋ ಬರಪೀಡಿತ ಜಿಲ್ಲೆಯಲ್ಲಿ. ಅದೂ ಕಪ್ಪು ಮಣ್ಣಿನಲ್ಲಿ ರೈತ ಸಿದ್ದಪ್ಪ ಬಾಲಗೊಂಡ ಸೇಬು ಬೆಳೆಯುವ ಇತರ ರೈತರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.
30 ಲಕ್ಷದ ಆದಾಯ ನಿರೀಕ್ಷೆ
ಸಿದ್ದಪ್ಪನವರು ಹಿಮಾಚಲ ಪ್ರದೇಶದಿಂದ ಸೇಬು ಬೆಳೆಯಲು ಮಾರ್ಗದರ್ಶನ ಪಡೆದು ಉತ್ಕೃಷ್ಟ ಸೇಬು ಬೆಳೆಯುತ್ತಿದ್ದಾರೆ. 9 ಎಕರೆ ಜಮೀನಿನಲ್ಲಿ 30 ತರಹೇವಾರಿ ವಿಧದ ಹಣ್ಣು ಬೆಳೆದು, ಪ್ರತಿ ತಿಂಗಳು ಆದಾಯ ಬರುವಂತೆ ಪ್ಲ್ಯಾನ್ ಮಾಡಿದ್ದಾರೆ. ಜೊತೆಗೆ ವಿಜಯಪುರ ಸೇರಿದಂತೆ ಸ್ಥಳೀಯ ಮಾರುಕಟ್ಟೆಗೆ ಕಳುಹಿಸ್ತಿದ್ದಾರೆ. ಸೇಬು, ಮಾವು ಹೀಗೆ ಸೀಸನ್ ವಾರು ಮಾರುಕಟ್ಟೆಗೆ ಹಣ್ಣು ಕಳುಹಿಸಿ, ಇದ್ರಿಂದ ವಾರ್ಷಿಕ 30ಲಕ್ಷ ಆದಾಯ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: Banashankari Temple History: ಬನಶಂಕರಿ ದೇವಿಯ ಹೆಸರಿನ ಹಿಂದಿದೆ ಈ ವಿಶೇಷ ಅರ್ಥ!
ಸೇಬು ಅಷ್ಟೇ ಅಲ್ಲ!
ಹನಿ ನೀರಾವರಿ ಪದ್ಧತಿಯಲ್ಲಿ ಸೇಬು ಅಷ್ಟೇ ಅಲ್ಲದೇ, ಜಾಮ್, ಡ್ರ್ಯಾಗನ್ ಫ್ರುಟ್, ಖರ್ಜೂರ, ಪೇರಲೆ, ನೇರಳೆ, ಹುಣಸೆ, ಹಲಸು, ವಾಟರ್ ಸೇಬು, ಸ್ಟಾರ್ ಫ್ರೂಟ್ಸ್, ದಾಳಿಂಬೆ, ಸ್ವೀಟ್ ಹುಣಸೆ, ಸೀತಾಫಲ, ಮೂಸಂಬಿ ಸೇರಿದಂತೆ 30 ತರಹದ ಹಣ್ಣು ಬೆಳೆಯುತ್ತಿದ್ದಾರೆ. ವಿಶೇಷವಾಗಿ ಇಲ್ಲಿ ಬೆಳೆಯೋ ಸೇಬು ಭಾರತದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಪಂಜಾಬ್ ಸೇರಿದಂತೆ ದಕ್ಷಿಣ ಭಾರತದ ತಮಿಳುನಾಡಿನ ನೀಲಗಿರಿ ಬೆಟ್ಟದಲ್ಲಿ ಮಾತ್ರ ಬೆಳೆಯುತ್ತಾರೆ. ಅದನ್ನೇ ಉತ್ತರ ಕರ್ನಾಟಕದ ಈ ಬಿರು ಬಿಸಿಲಿನ ಜಿಲ್ಲೆಯಲ್ಲೂ ಬೆಳೆದು ರೈತ ಸಿದ್ದಪ್ಪನವರು ಯಶಸ್ವಿಯಾಗಿದ್ದಾರೆ.
ಉತ್ತಮ ಸೇಬು ಫಸಲು
ಉತ್ತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಸಿದ್ದಪ್ಪ ಬಾಲಗೊಂಡ ಒಂದು ಎಕರೆ ಹೊಲದಲ್ಲಿ ಪ್ರಾಯೋಗಿಕವಾಗಿ ಸೇಬು ಬೆಳೆದು ಸ್ಥಳೀಯ ರೈತರಲ್ಲಿ ಹೊಸ ಆಶಾಭಾವ ಮೂಡಿಸಿದ್ದಾರೆ. ಒಂದು ಎಕರೆಯಲ್ಲಿ ಸುಮಾರು 300 ಸೇಬು ಗಿಡಗಳನ್ನು ಮೂರು ವರ್ಷದ ಹಿಂದೆಯೇ ನಾಟಿ ಮಾಡಿದ್ದು ಇದೀಗ ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದಾರೆ.
ಇದನ್ನೂ ಓದಿ: Vijayapura Success Story: 'ಆಗದು ಎಂದು ಕೈ ಕಟ್ಟಿ ಕುಳಿತರೆ..' ಅಣ್ಣಾವ್ರು ಹೇಳಿದಂತೆ ಸಕ್ಸಸ್ ಕಂಡ ಕೃಷಿಕ!
ಪ್ರತಿ ಗಿಡದಲ್ಲಿ 10 ರಿಂದ 30 ಕಾಯಿ ಹಿಡಿದಿದೆ. ಸೇಬು ಬೆಳೆಗೆ ಅಲ್ಪ ನೀರು ಬೇಕಾಗುತ್ತೆ. ರೋಗಬಾಧೆಯೂ ಕಡಿಮೆ. ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಗಳಿಸಬಹುದಾಗಿದೆ. ಇವ್ರ ಸೇಬು ಬೆಳೆ ನೋಡಲು ರೈತರು ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಬರ್ತಿದ್ದಾರೆ. ಹೀಗೆ ರೈತ ಸಿದ್ದಪ್ಪನವರು ಕಾಶ್ಮೀರದ ಘಮಲು ಅನ್ನ ರಾಜ್ಯದಲ್ಲೂ ಅರಳಿಸುವ ಮೂಲಕ ಮಾದರಿಯಾಗಿದ್ದಾರೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ