ವಿಜಯಪುರ: ಒಂದೆಡೆ ದೇವರ ಮುಂದೆ ಬಗೆ ಬಗೆಯ ಭಕ್ಷ್ಯ ಭೋಜನಗಳ ನೈವೇದ್ಯ. ಇನ್ನೊಂದೆಡೆ ಆಗಮಿಸಿದವರೆಲ್ಲರಿಗೂ ಭಾರೀ ಭೋಜನದ (Meals) ಏರ್ಪಾಡು. ಅಷ್ಟಕ್ಕೂ ಈವಾಗ ಇರೋ ಹಬ್ಬವಾದ್ರೂ (Farmers Festival) ಯಾವ್ದು ಅಂತೀರ? ನಿಜ ಈ ಎಲ್ಲ ಗೊಂದಲಕ್ಕೆ ಉತ್ತರ ಬೇಕಿದ್ರೆ ಈ ಸ್ಟೋರಿ ನೋಡಿ.
ವಿಜಯಪುರ ನಗರದ ಹೊರ ಭಾಗದಲ್ಲಿರುವ ರಂಭಾಪುರ ಗ್ರಾಮದಲ್ಲಿ ಯಾವುದೇ ಜಾತ್ರೆ ಇಲ್ಲದೆ ಇದ್ದರೂ ಹಬ್ಬದ ಸಡಗರ ಕಾಣಬಹುದು. ಉತ್ತಮ ಮಳೆ, ರೈತರಿಗೆ ಸಮೃದ್ಧ ಬೆಳೆ, ಗ್ರಾಮಸ್ಥರಿಗೆ ರೋಗ ರುಜಿನ ಬಾರದಿರಲೆಂದು ಹೀಗೆ ಯಾವುದಾದ್ರೂ ನೆಪಕ್ಕೆ ಇಂತಹ ಆಚರಣೆಗಳು ಕಂಡುಬರುತ್ತೆ.
ಹಿಂಗಾರು ಬೆಳೆ ಕಟಾವು ಸಂಭ್ರಮ
ಸದ್ಯ ನೀವು ಇಲ್ಲಿ ನೋಡ್ತಿರೋದು ಹಿಂಗಾರು ಬೆಳೆ ಕಟಾವು ಮಾಡಿದ ಸಂಭ್ರಮದ ಆಚರಣೆ. ಇಲ್ಲಿನ ಮೆಂಡೆಗಾರ ಮನೆತನದಲ್ಲಿ ಪ್ರತಿ ವರ್ಷ ಹಿಂಗಾರು ಬೆಳೆ ಕಟಾವು ಮಾಡಿ ದೇವರಿಗೆ ಅರ್ಪಿಸುವ ಸಂಪ್ರದಾಯವಿದೆ. ಹಿಂಗಾರು ಬೆಳೆಗಳ ಕಟಾವು ಮಾಡಿದ ಕೂಡಲೇ ಅದ್ಯಾವುದನ್ನೂ ಬಳಕೆ ಮಾಡದೇ, ಮಾರ್ಕೆಟ್ಗೂ ಕೊಂಡೊಯ್ಯದೇ ನೇರವಾಗಿ ತಂದು ದೇವರಿಗೆ ಅರ್ಪಣೆ ಮಾಡ್ತಾರೆ.
ಆಂಜನೇಯನಿಗೆ ನೈವೇದ್ಯ
ಹೀಗೆ ದೇವರಿಗೆ ಅರ್ಪಿಸೋ ಸಮಯದಲ್ಲಿ ಮೆಂಡೆಗಾರ ಮನೆಯಲ್ಲಿ ವಿವಿಧ ಬಗೆಯ ಅಡುಗೆ ಮತ್ತು ಅಂಬಲಿ ತಯಾರಿಸಿ ದೇವರಿಗೆ ಸಮರ್ಪಿಸಲಾಗುತ್ತೆ. ಹೋಳಿ ಹಬ್ಬದ ಬಳಿಕ ಈ ವಿಶಿಷ್ಟ ಸಂಪ್ರದಾಯ ಕಂಡು ಬರುತ್ತೆ. ಮೊದಲು ಧವಸ, ಧಾನ್ಯಗಳಿಂದ ಮಾಡಿದ ಆಹಾರ ಪದಾರ್ಥಗಳನ್ನ ಊರ ದೇವರು ಆಂಜನೇಯನಿಗೆ ನೈವೇದ್ಯ ರೂಪದಲ್ಲಿ ಅರ್ಪಿಸುತ್ತಾರೆ.
ಇದನ್ನೂ ಓದಿ: Vijayapura: ಇಡೀ ದೇಶದಲ್ಲೇ ಹಬ್ಬವಾದ್ರೂ ಈ ಊರಲ್ಲಿ ಸ್ಮಶಾನ ಮೌನ!
ಊರಿಗೆಲ್ಲ ಬಾಡೂಟ!
ಕುಟುಂಬಿಕರೆಲ್ಲರೂ ಸೇರಿ ತಾವು ಬೆಳೆದ ವಿವಿಧ ಧವಸ ಧಾನ್ಯ, ಬೆಳೆಗಳಿಂದ ಮನೆಯಲ್ಲಿ ತರಹೇವಾರಿ ಅಡುಗೆ ತಯಾರಿಸುತ್ತಾರೆ. ಜೋಳದ ಅಂಬಲಿ, ಖಡಕ್ ರೊಟ್ಟಿ, ಶೇಂಗಾ ಚಟ್ನಿ, ಸಜ್ಜಕ ಅಥವಾ ಪಾಯಸ, ಬದನೇಕಾಯಿ ಪಲ್ಯೆ, ಕಾಳುಗಳ ಪಲ್ಯೆ ಸೇರಿದಂತೆ ನಾನಾ ಥರಹದ ಅಡುಗೆಯನ್ನು ಮಣ್ಣಿನ ಗಡಿಗೆಯಲ್ಲೇ ತಯಾರಿಸಿ ಹನುಮಂತ ದೇವರಿಗೆ ಅರ್ಪಿಸುತ್ತಾರೆ. ಬಳಿಕ ಅದೇ ದೇವಸ್ಥಾನದ ಆವರಣದಲ್ಲಿ ಇಡೀ ಊರಿನ ಜನರಿಗೆಲ್ಲ ಬಡಿಸಿ, ತಾವೂ ಊಟದ ರುಚಿ ಸವಿಯುತ್ತಾರೆ.
ಇದನ್ನೂ ಓದಿ: Vijayapura: ಬೆಟ್ಟದ ಮೇಲಿನ ಗುಹೆಯಲ್ಲಿ ಸಿದ್ದರಾಮೇಶ್ವರನ ನೆಲೆ, ದರ್ಶನ ಪಡೆಯೋದೇ ಸೌಭಾಗ್ಯ!
ಜೋಳದ ಅಂಬಲಿ ವಿಶೇಷ
ಈ ಸಮಯದಲ್ಲಿ ವಿಶೇಷವೆಂದರೆ ಹೊಸದಾಗಿ ಖರೀದಿಸಿದ ಮಣ್ಣಿನ ಮಡಿಕೆಯಲ್ಲೇ ಮಜ್ಜಿಗೆ ಹುಳಿ ಹಾಕಿ ಜೋಳದಿಂದ ಅಂಬಲಿಯನ್ನು ತಯಾರಿಸಲಾಗುತ್ತೆ. ಊಟದ ವೇಳೆಯಲ್ಲಿ ಪ್ರತಿಯೊಬ್ಬರಿಗೂ ಈ ಅಂಬಲಿಯನ್ನು ಕುಡಿಯಲು ನೀಡಲಾಗುತ್ತದೆ. ಒಟ್ಟಿನಲ್ಲಿ ಮನೆತನ ವೊಂದರಿಂದ ಆಚರಿಸುವ ಹಿಂಗಾರು ಕಟಾವು ಬೆಳೆಯ ಸಂಭ್ರಮ ಇಡೀ ಊರಿನಲ್ಲಿ ಹಬ್ಬದಂತೆ ಸಂಭ್ರಮಿಸಲಾಗುತ್ತೆ.
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ