ವಿಜಯಪುರ: "ಅಲ್ಲಲ್ಲಿ ಮೂಲೆಗಳಲ್ಲಿ ಭೂಮಿ ಕುಪ್ಪಳಿಸಿತ್ತೋ ಮಕ್ಕಳಿರ್ಯಾ.. ಸಜ್ಜನರು ಕೂಡ ದುರ್ಜನರು ಆಗ್ತಾರೆ. ಹಿಂಗಾರಿ-ಮುಂಗಾರಿ ಮಳೆಗಳು ಉತ್ತಮವಾಗಿ ಆಗಲಿವೆ. ನಮ್ಮ ನಮ್ಮಲ್ಲಿ ಜಗಳ, ಹೊಡೆದಾಟ ನಡೆಯುತ್ತದೆ. ಮತ್ತೆ ಜಲಪ್ರಳಯವಾಗುವ ಸೂಚನೆ ತಿಳಿಯಿರಣ್ಣ. ಯಾವುದೋ ಒಂದು ದಿಕ್ಕಿಗೆ ಜಲಪ್ರಳಯವಾಗಲಿದೆ" ಎಂದು ಬಬಲಾದಿ ಸಿದ್ದು ಮುತ್ಯಾ ಭವಿಷ್ಯ (Babaladi Sadashiv Mutya) ನುಡಿದಿದ್ದಾರೆ.
ಅತ್ಯಂತ ಪ್ರಸಿದ್ಧ ಬಬಲಾದಿ ಮಠದ ಕಾಲಜ್ಞಾನವನ್ನು ನುಡಿಯಲಾಗಿದೆ. ಕಾಲಜ್ಞಾನದಲ್ಲಿ 2023ರ ಭವಿಷ್ಯವನ್ನು ಬಬಲಾದಿ ಮಠದ ಸಿದ್ದು ಮುತ್ಯಾ ನುಡಿದಿದ್ದಾರೆ. ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಮಠದಲ್ಲಿ ಶಿವರಾತ್ರಿಯ ಬಳಿಕ ನುಡಿಯಲಾಗುವ ಕಾಲಜ್ಞಾನ ಭವಿಷ್ಯಕ್ಕೆಂದೇ ಭಕ್ತರು ಕಾದು ಕೂರುತ್ತಾರೆ.
"ಮುಂಗಾರಿ ಮಳೆ 9 ಅಣೆ, ಹಿಂಗಾರಿ ಮಳೆ 10 ಅಣೆ"
"ಕೆಲವೊಂದು ಕಡೆ ಭೂಮಿ ಕುಪ್ಪಳಿಸಲಿದೆ. ಕೆಲವೆಡೆ ಮೂಲೆ ಮೂಲೆಯಲ್ಲಿ ಭೂಮಿ ಕುಪ್ಪಳಿಸುವುದು ಮಕ್ಕಳಿರ್ಯಾ. ಮುಂಗಾರಿ ಮಳೆ 9 ಅಣೆ, ಹಿಂಗಾರಿ ಮಳೆ 10 ಅಣೆ. ಈ ಬಾರಿಯು ಭೂಕಂಪನದ ಆತಂಕವಿದೆ" ಎಂದು ಭವಿಷ್ಯ ನುಡಿಯಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ತಿರುವು
"ರಾಜ್ಯದಲ್ಲಿ ಕೊಲೆ, ಸುಲಿಗೆ, ದರೋಡೆ ಹೆಚ್ಚಲಿವೆ. ವೈಶಾಖ-ಜೇಷ್ಠ ಮಾಸದಲ್ಲಿ ಸುಖಶಾಂತಿ ಸಿಗಲಿದೆ. ರಾಜಕಾರಣದಲ್ಲಿ ಹೊಸ ತಿರುವು ಉಂಟಾದಿತು ಮಕ್ಕಳಿರ್ಯಾ…ರಾಜ್ಯ ರಾಜಕಾರಣದಲ್ಲಿ ಸ್ವಲ್ಪ ತಿರುವು ಉಂಟಾಗಲಿದೆ" ಎಂದ ಬಬಲಾದಿ ಕಾಲಜ್ಞಾನ ನುಡಿಯಲಾಗಿದೆ.
ಮಕ್ಕಳಿಗೆ ತಂದೆ-ತಾಯಿಗಳ ಮೇಲೆ ಹೆಚ್ಚಿನ ಪ್ರೀತಿ
"ಪ್ರಜೆಗಳಲ್ಲಿ ಏರುಪೇರು- ಆಳುವ ಪ್ರಭುಗಳಿಗೆ ಸುಭಿಕ್ಷೆ ಇದೆ. ಜಾತಿ-ಮತ, ಬೇಧ-ಭಾವಕ್ಕೆ ಹೆಚ್ಚಿನ ಒಲವಿದೆ. ಮಕ್ಕಳಿಗೆ ತಂದೆ-ತಾಯಿಗಳ ಮೇಲೆ ಹೆಚ್ಚಿನ ಪ್ರೀತಿ ಉಂಟಾಗಲಿದೆ ಇದರಿಂದ ವೃದ್ಧಾಶ್ರಮ ಕಡಿಮೆಯಾಗಲಿವೆ" ಎಂದು ಭವಿಷ್ಯ ಹೇಳಲಾಗಿದೆ.
ಇದನ್ನೂ ಓದಿ: Vijayapura Grapes: ಕಂಡು ಕೇಳರಿಯದ ಹಲವು ಬಗೆಯ ದ್ರಾಕ್ಷಿ, ಇಷ್ಟು ಕಡಿಮೆ ಬೆಲೆಗೆ ಸಿಕ್ಕಿತು ನೋಡಿ!
"ದನಕರುಗಳಿಗೆ ಬಂದ ರೋಗ ಕಡಿಮೆಯಾಗುವ ಕಾಲ ಸನಿಹ ಬಂದಿದೆ. ಗಡಿ ಕಾಯುವ ಯೋಧರಿಗೆ ಜಯ ಉಂಟಾಗುವುದು. ಇನ್ನೊಂದು ಸೂತಕದ ಛಾಯೆ ಐತಿ" ಎಂದು ಬಬಲಾದಿ ಕಾಲಜ್ಞಾನದಲ್ಲಿ ನುಡಿಯಲಾಗಿದೆ.
ಇದನ್ನೂ ಓದಿ: Babaladi Sadashiv Mutya: ದೇವರಿಗೆ ಹೂ, ಹಣ್ಣಿನ ಬದಲು ಎಣ್ಣೆ ನೈವೇದ್ಯ! ಇಲ್ಲಿ ಮದ್ಯವೇ ತೀರ್ಥ!
300 ವರ್ಷಗಳಿಂದ ಭವಿಷ್ಯ
ಹಿಂದೆ ಕಾಲಜ್ಞಾನಿ ಸದಾಶಿವ ಅಜ್ಜ ಹೇಳಿದ್ದು, ಚಿಕ್ಕಯ್ಯಪ್ಪ ಬರೆದಿಟ್ಟಿರುವ ಕಾಲಜ್ಞಾನವನ್ನು ಕಳೆದ 300 ವರ್ಷಗಳಿಂದ ನುಡಿಯಲಾಗುತ್ತಿದೆ. ಅಂದಿನಿಂದ ಇಂದಿನವರೆಗೂ ಇಲ್ಲಿ ನುಡಿದ ಭವಿಷ್ಯಗಳು ಸತ್ಯವಾಗುತ್ತ ಬಂದಿವೆ ಎಂದು ಭಕ್ತರು ನಂಬುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ