ವಿಜಯಪುರ: ಶಿವನೇ (Shiva) ಧರೆಗೆ ಬಂದು ಕೂತಂತೆ.. ಕೈಲಾಸವೇ (Kailasa) ಧರೆಗೆ (Earth) ಬಂದಂತೆ ಭಾಸವಾಗೋ ಶಿವನ ಆಲಯವಿದು. ಪರಮೇಶ್ವರ ಭಕ್ತರ ಪಾಲಿನ ಪುಣ್ಯ ತಾಣವಿದು. ಹೌದು, ಮಹಾಶಿವರಾತ್ರಿ (Shivaratri) ಹಿನ್ನೆಲೆ ವಿಜಯಪುರದ (Vijayapura) ಈ ಶಿವನ ಮೂರ್ತಿ ವಿಶೇಷ ಆಕರ್ಷಣೆ ಪಡೆದಿದೆ. ಈಶ್ವರನ ಆರಾಧಕರೆಲ್ಲರೂ ಪ್ರಸನ್ನವದನನಾಗಿ ತಪೋಭಂಗಿಯಲ್ಲಿ ಕೂತ ಶಿವನಿಗೆ ಹರ ಹರ ಮಹಾದೇವ ಎನ್ನುತ್ತಿದ್ದಾರೆ.
ಹಚ್ಚ ಹಸಿರ ಗಾರ್ಡನ್ ಮಧ್ಯೆ ಪರಶಿವ
ಯೆಸ್, ಎತ್ತರದ ಶಿವನ ಮೂರ್ತಿ ಹೊಂದಿರೋ ವಿಜಯಪುರದ ನಿಡಗುಂದಿ ಪಟ್ಟಣದಲ್ಲಂತೂ ಪರಮೇಶ್ವರನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಅಲ್ಲದೇ ಇಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಈಶ್ವರನಿಗೆ ನೆರವೇರಿ, ಭಕ್ತರೆಲ್ಲರೂ ಕೈ ಮುಗಿದು ತಮ್ಮ ಇಷ್ಟಾರ್ಥಗಳ ಈಡೇರಿಕೆಗೆ ದೇವರ ಮೊರೆ ಹೋದರು.
ಇನ್ನು ಇಲ್ಲಿ ಹಚ್ಚ ಹಸಿರ ಗಾರ್ಡನ್ ಇದ್ದರೂ ಪರಶಿವನು ತದೇಕಚಿತ್ತದಿಂದ ಭಕ್ತರನ್ನ ಹರಸುತ್ತಾ ಬಂದಿದ್ಧಾನೆ. ಹೀಗಾಗಿ ಸದಾ ಪಾಸಿಟಿವ್ ಎನರ್ಜಿ ತುಂಬೋ ಶಂಕರನಿಗೆ ಶಿವರಾತ್ರಿ ಹಿನ್ನೆಲೆ ಭಕ್ತರು ತಾವೇ ಖುದ್ದು ಪೂಜೆ ಸಲ್ಲಿಸಿ ಪುನೀತರಾದರು. ಇನ್ನು ಹಲವಾರು ಭಕ್ತರು ಉಪವಾಸ ಆಚರಿಸಿ, ತಮ್ಮ ಶಿವ ಭಕ್ತಿಯನ್ನ ತೋರಿದರು.
ವಿಶೇಷ ಪೂಜೆ ಪುನಸ್ಕಾರ
ಇಲ್ಲಿರೋ ಬೃಹದಾದ ಶಿವನ ಮೂರ್ತಿ ಕೆಳಗಡೆ ಇರೋ ಶಿವಲಿಂಗಕ್ಕೆ ಪುಷ್ಪಾರ್ಚನೆ ನಡೆಸಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ಭಕ್ತಿಯಿಂದ ಕೈ ಮುಗಿದು ಇಷ್ಟಾರ್ಥಗಳ ಬೇಡಿಕೆ ಈಡೇರಿಕೆಗೆ ದೇವರಲ್ಲಿ ಪ್ರಾರ್ಥಿಸಿದರು. ದೇವರ ಮುಂದೆ ನಿಂತು ಭಕ್ತಿಯಿಂದ ಮಂತ್ರ ಘೋಷ ಮೊಳಗಿಸಿದರು. ಇನ್ನು ಇಲ್ಲಿರೋ ಬೃಹತ್ ಗಾತ್ರದ ಶಿವಲಿಂಗದ ಮುಂದಿರುವ ಶಿವನ ವಿಗ್ರಹಕ್ಕೆ ಬೆಳಗ್ಗೆ ವಿಶೇಷ ಪೂಜೆಯನ್ನ ಪುರೋಹಿತರಿಂದ ನಡೆಯಿತು. ಆ ಬಳಿಕ ಭಕ್ತರಿಗೆ ದರ್ಶನ ಪಡೆಯಲು ಅವಕಾಶವನ್ನ ಮಾಡಿಕೊಡಲಾಯಿತು.
ಶಿವನಾಮ ಸ್ಮರಣೆ
ವಿಶೇಷ ಪೂಜೆ, ಮಂಗಳಾರತಿ, ಭಕ್ತರ ಪ್ರಾರ್ಥನೆಗೆ ಈಶ್ವರನು ಇಲ್ಲಿ ಕಿವಿಯಾದನು. ಇನ್ನು ಆಗಮಿಸುವ ಭಕ್ತರಿಗೆ ನಿಡಗುಂದಿಯಲ್ಲಿ ‘‘ಓಂ ಶಾಂತಿ‘‘ ಸಿಬ್ಬಂದಿಗಳಿಂದ ಶಿವನ ನಾಮಸ್ಮರಣೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮವು ಜರುಗಿತು. ಒಟ್ಟಿನಲ್ಲಿ ಹಚ್ಚಹಸಿರ ನಡುವೆ ಕೈಲಾಸ ಪರ್ವತದಲ್ಲಿ ಕೂತಂತೆ ಕಾಣೋ ಈಶ್ವರನನ್ನ ಕಂಡು ಶಿವಭಕ್ತರು ಧನ್ಯರಾದರು.
ವರದಿ - ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ