ವಿಜಯಪುರ: ಮರದಲ್ಲಿರಲಿ, ಯಾವುದೋ ಕಸ ಕೊಂಪೆಯಲ್ಲಿರಲಿ, ಕಣ್ಣಿಗೆ ಕಂಡ ಹಾವನ್ನ (Snake Rescue) ರಕ್ಷಿಸದೇ ಬಿಡುವವರಲ್ಲ, ಜನರ ಮಧ್ಯೆ ಸಿಲುಕಿ ಒದ್ದಾಡ್ತಿದ್ರೆ ಅದಕ್ಕೆ ಬೇಕಾದ ಮಾರ್ಗ ತೋರಿಸದೇ ಇರಲ್ಲ. ಅದು ಎಂತಹಾ ಭಯಂಕರ ವಿಷ ಸರ್ಪವಾದ್ರೂ (Cobra) ಅದನ್ನು ನಯವಾಗಿ ಹಿಡಿದು ರಕ್ಷಿಸಬಲ್ಲರು. ಹೌದು, ಹೀಗೆ ಹಳ್ಳಿ ಹಳ್ಳಿಯಲ್ಲಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸುತ್ತಾರೆ ವಿಜಯಪುರದ (Snake Rescue In Vijayapura) ಈ ಹಾವು ರಕ್ಷಕ.
ಯೆಸ್, ಹೀಗೆ ಎಲ್ಲೆಂದೆರಲ್ಲಿ ಉರಗ ರಕ್ಷಣೆ ವಿಚಾರದಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳದ ಇವರು ವಿಜಯಪುರ ಜಿಲ್ಲೆಯ ಹಿಟ್ನಳ್ಳಿ ಗ್ರಾಮದ ಪದವೀಧರ ಯುವಕ ಉಮೇಶ ಗಂಗೆಗೋಳ ಅಂತ. ಇವರು ಕಳೆದೊಂದು ವರ್ಷದಿಂದ ಹಾವುಗಳನ್ನ ರಕ್ಷಣೆ ಮಾಡುವುದರೊಂದಿಗೆ ಹಳ್ಳಿ ಹಳ್ಳಿಯ ಜನರಲ್ಲಿ ಹಾವುಗಳ ಕುರಿತು ಜಾಗೃತಿ ಮೂಡಿಸ್ತಿದ್ದಾರೆ.
ಬಿ.ಎ ಪದವೀಧರ ಹಾವು ಹಿಡಿಯೋಕೆ ಏನು ಕಾರಣ?
ಹೇಳಿ ಕೇಳಿ ಉಮೇಶ್ ಬಿಎ ಪದವೀಧರ, ಆದರೆ ಜೀವನಕ್ಕಾಗಿ ಚಾಲಕ ವೃತ್ತಿಯನ್ನ ಆಯ್ದುಕೊಂಡಿದ್ದಾರೆ. ಈ ಕಡೆ ಪ್ರವೃತ್ತಿಯಾಗಿ ಹಾವು ರಕ್ಷಣೆಯ ಜವಾಬ್ದಾರಿಯನ್ನ ಸ್ವಇಚ್ಛೆಯಿಂದ ಹೊತ್ತುಕೊಂಡಿದ್ದಾರೆ. ಎಲ್ಲೇ ಹಾವು ಕಂಡರೂ ಮಾಹಿತಿ ಸಿಕ್ಕ ತಕ್ಷಣ ಅಲ್ಲಿಗೆ ತೆರಳಿ ಅದನ್ನ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಡ್ತಾರೆ. ಒಂದು ವೇಳೆ ತಾನು ಹೋಗದೇ ಇದ್ರೆ ಜನ ಉರಗವನ್ನ ಅನ್ಯಾಯವಾಗಿ ಕೊಂಡು ಹಾಕಿಯಾರು ಅನ್ನೋ ಆತಂಕ ಇವರನ್ನ ಸದಾ ಕಾಡೋದ್ರಿಂದ ಹಾವುಗಳ ರಕ್ಷಣೆಗೆ ಓಡೋಡಿ ಧಾವಿಸಿ ಬರುತ್ತಾರೆ.
ಸ್ನೇಕ್ ಉಮೇಶ ಹೆಸರು ಬಂದಿದ್ದೇಗೆ?
ಅದೊಂದು ದಿನ ಗ್ರಾಮದ ಮನೆಯೊಂದರಲ್ಲಿ ನಾಗರಹಾವು ಪ್ರತ್ಯಕ್ಷವಾಗಿತ್ತು. ಅದನ್ನ ಕಂಡ ಜನರು ಕಿರುಚಾಡಿದ್ದಾರೆ. ಕೆಲವರು ಕಟ್ಟಿಗೆಯಿಂದ ಹೊಡೆಯಲು ಮುಂದಾಗಿದ್ದಾರೆ. ಈ ದೃಶ್ಯವನ್ನ ಕಂಡ ಉಮೇಶ ಆ ಹಾವನ್ನ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಅಂದಿನಿಂದ ಇವರನ್ನ ಸ್ನೇಕ್ ಉಮೇಶ ಎಂದೇ ಜನ ಕರೆಯುತ್ತಾ ಬಂದಿದ್ದಾರೆ. ಹೀಗೆ ಉಮೇಶ್ ಅವರು ಇದುವರೆಗೆ 981 ಹಾವುಗಳನ್ನ ರಕ್ಷಿಸಿ ಮರಳಿ ಕಾಡಿಗೆ ಬಿಟ್ಟಿದ್ದಾರೆ.
ಎಲ್ಲಾ ಹಾವೂ ವಿಷಕಾರಿಯಲ್ಲ
ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಅಂದಾಜು 25 ರಿಂದ 30 ಜಾತಿಯ ಹಾವುಗಳು ಕಂಡು ಬರುತ್ತವೆ. ಆದರೆ ಅವುಗಳಲ್ಲಿ 3 ರಿಂದ 4 ಜಾತಿಯ ಹಾವುಗಳು ಮಾತ್ರ ವಿಷಕಾರಿಯಾಗಿವೆ. ಹೀಗಾಗಿ ಸಾರ್ವಜನಿಕರು ಎಲ್ಲ ಹಾವು ವಿಷಕಾರಿಯಂದು ಬಾವಿಸಿ ಕೊಲ್ಲಲು ಮುಂದಾಗುತ್ತಾರೆ ಎನ್ನುತ್ತಾರೆ ಉಮೇಶ.
ಇದನ್ನೂ ಓದಿ: Vijayapura Viral Video: ಬೇವಿನ ಮರದಲ್ಲಿ ಜಿನುಗುತ್ತಿದೆ ಹಾಲಿನಂತಹ ನೊರೆ!
ಉತ್ತರ ಕರ್ನಾಟಕದ ಬಯಲು ಪ್ರದೇಶ ಸೇರಿದಂತೆ ಹಲವಾರು ಭಾಗಗಳಲ್ಲಿ ಕರಿನಾಗರ, ಮಿಡಿನಾಗರ, ಗೋಧಿ ಬಣ್ಣದ ನಾಗರ ಹಾವುಗಳು ಹೆಚ್ಚಾಗಿ ಕಾಣಿಸುತ್ತವೆ. ಈ ಹಾವು ಭುಸುಗುಟ್ಟುವುದನ್ನ ಕಂಡರೆ ಎಂತವರಿಗೂ ನಡುಕ ಹುಟ್ಟದೇ ಇರದು. ಹೀಗಾಗಿ ಇಂತಹ ಸಮಯದಲ್ಲಿ ಜನ ಅದನ್ನ ಕೊಲ್ಲಲು ಮುಂದಾಗುವುದು ಸಹಜ. ಆದರೆ ಅಂತಹವರಿಗೆ ಹಾವಿನ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನೂ ಉಮೇಶ್ ಅವರು ಮಾಡುತ್ತಾ ಬಂದಿದ್ಧಾರೆ.
ಇದನ್ನೂ ಓದಿ: Viral Video: 5 ಲಕ್ಷಕ್ಕೆ ಖರೀದಿಸಿದ್ದ ಎತ್ತು 14 ಲಕ್ಷಕ್ಕೆ ಮಾರಾಟ!
ಅಷ್ಟೇ ಅಲ್ಲದೇ, ಹಾವು ಕಚ್ಚಿದರೆ ಮಾಡಬೇಕಾದ ಪ್ರಥಮ ಚಿಕಿತ್ಸೆ ಬಗ್ಗೆಯೂ ಮಾಹಿತಿ ನೀಡುತ್ತಾರೆ. ಒಟ್ಟಿನಲ್ಲಿ ಉಮೇಶ ಗಂಗೆಗೋಳ ಅವರ ಉರಗ ಪ್ರೇಮ, ಹಾವುಗಳ ಸಂತತಿ ಬೆಳೆಯಲು ನಿರ್ಭೀತ ವಾತಾವರಣವನ್ನ ಹುಟ್ಟು ಹಾಕುತ್ತಿರೋದು ಸುಳ್ಳಲ್ಲ.
ಸ್ನೇಕ್ ಉಮೇಶ್ ಅವರನ್ನ ಸಂಪರ್ಕಿಸಲು ಈ ಸಂಖ್ಯೆಗೆ ನೀವೂ ಕರೆಮಾಡಬಹುದು:9731882546
ವರದಿ: ಪ್ರಶಾಂತ ಹೂಗಾರ, ನ್ಯೂಸ್ 18 ಕನ್ನಡ ಡಿಜಿಟಲ್, ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ