ವಿಜಯಪುರ : ಮೀನುಗಾರಿಕೆ ಅಂದ್ರೆ ಕರಾವಳಿ ಜಿಲ್ಲೆಗಳು ನೆನಪಿಗೆ ಬರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಗುಮ್ಮಟ ನಗರಿ ವಿಜಯಪುರದಲ್ಲೂ (Vijayapura) ಮೀನು ಸಾಕಾಣಿಕೆ ನಡೆಸಿ ಸೈ ಎನಿಸಿಕೊಂಡಿದ್ದಾನೆ. ಜೀವನದಲ್ಲಿ ಹಲವು ಏಳು ಬೀಳುಗಳನ್ನು ಕಂಡಿದ್ದ ಯುವಕನಿಗೆ ಮೀನುಗಾರಿಕೆ (Fishery) ಕೈ ಹಿಡಿದಿದೆ. ಅಷ್ಟಕ್ಕೂ ಈ ಯುವಕ ಕಂಡುಕೊಂಡಿದ್ದು ಇಂಡೋನೇಷ್ಯಾ ಮಾದರಿಯ ಮೀನು ಕೃಷಿ. ಹೌದು, ಹೀಗೆ ಮೀನು ಸಾಕಾಣಿಕೆ ನಡೆಸುತ್ತಿರುವ ಇವರ ಹೆಸರು ರಾಜ್ ಅಹ್ಮದ ಹುಲ್ಲೂರ. ವಿಜಯಪುರ ನಗರದಿಂದ ಇಂಡಿಗೆ ಸಂಚರಿಸುವ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮೀನು ಸಾಕಾಣಿಕೆ ಕೇಂದ್ರವನ್ನ ಆರಂಭಿಸಿದ್ದು, ವಾರ್ಷಿಕ 7 ರಿಂದ 8 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇದಕ್ಕೆ ಸರಕಾರದಿಂದ ಸಿಕ್ಕ ಸಹಾಯಧನವೂ ಯುವಕನ ಸಂಪಾದನೆಗೆ ದಾರಿಯಾಗಿದೆ..
ಈ ಯುವಕ ಹೆಚ್ಚು ಶಿಕ್ಷಣವನ್ನ ಪಡೆಯದಿದ್ದರೂ ಕೈ ಹಿಡಿದದ್ದು ಈ ಮೀನು ಕೃಷಿ. ಹರ್ಯಾಣದ ವ್ಯಕ್ತಿಯೋರ್ವರಿಂದ ಮೀನು ಸಾಕಾಣಿಕೆ ಬಗ್ಗೆ ಮಾಹಿತಿ ಪಡೆದು ಅದನ್ನು ಅಳವಡಿಸಿಕೊಂಡಿದ್ದೇ ಇವರ ಸ್ವ ಉದ್ಯೋಗದ ಯಶಸ್ಸಿನ ಗುಟ್ಟು..
ಎಷ್ಟು ಬಂಡವಾಳ ಹೂಡಿಕೆ ಮಾಡಿದ್ರು?
ರಾಜ್ ಅಹ್ಮದ್ ಅಂದಾಜು ಎರಡರಿಂದ ಮೂರು ಲಕ್ಷ ರೂಪಾಯಿ ಹೂಡಿಕೆ ಮಾಡಿ ಮೀನು ಸಾಕಾಣಿಕೆಯನ್ನು ಆರಂಭಿಸಿದ್ದರು. 15 ಸಾವಿರ ಲೀಟರ್ ಸಾಮರ್ಥ್ಯದ 4 ಹೊಂಡಗಳನ್ನ ಸಿದ್ದಪಡಿಸಿ ಒಂದು ಹೊಂಡದಲ್ಲಿ 1200 ಮೀನು ಮರಿಗಳನ್ನ ಬಿಟ್ಟು ಅವುಗಳಿಗೆ ಆಹಾರ ನೀಡಿ ಬೆಳೆಸುತ್ತಾರೆ. ಬಳಿಕ ಮರಿಗಳು ದೊಡ್ಡದಾಗುತ್ತಿದ್ದಂತೆ ಅವುಗಳನ್ನು ಮಾರಿ ಆದಾಯವನ್ನು ಗಳಿಸುತ್ತಿದ್ದಾರೆ. ನೆರೆಯ ಮಹಾರಾಷ್ಟ್ರಗಳಲ್ಲೂ ಇವರ ಮೀನುಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.
ಇದನ್ನೂ ಓದಿ: Vijayapura: ಕೈಬೀಸಿ ಕರೆಯುವ ಪುಟ್ಟಪುಟ್ಟ ಜಲಪಾತಗಳು! ವೀಡಿಯೋ ನೋಡಿ
ಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಸಹಾಯ
ಲಾಭ ಹೆಚ್ಚಾದ ಹಿನ್ನೆಲೆ ಇವರು ಮತ್ತಷ್ಟು ಹೊಂಡಗಳನ್ನ ಸಿದ್ದಪಡಿಸಿ ಪಂಗಾಸ್, ರೂಪಚಂದ್, ತಲಾಸಿಯೋ, ಸ್ನೇಕಡ್, ಸೇರಿದಂತೆ ವಿವಿಧ ತಳಿಯ ಮೀನುಗಳನ್ನ ಸಾಕುತ್ತಿದ್ದಾರೆ. ಕೇವಲ 5 ಗುಂಟೆ ಜಾಗದಲ್ಲಿ 8 ಹೊಂಡಗಳನ್ನ ನಿರ್ಮಾಣ ಮಾಡಿಕೊಂಡು ಸಾಕಾಣಿಕೆ ನಡೆಸಿದ್ದಾರೆ. 40 ಸಾವಿರ ಲೀಟರ್ ಸಾಮರ್ಥ್ಯದ ಒಂದು ಹೊಂಡ ಸೇರಿ 8 ಹೊಂಡಗಳ ಮೀನು ಸದ್ಯ ಮಾರಾಟಕ್ಕೆ ಸಿದ್ದವಾಗಿವೆ. ಇದೆಲ್ಲವೂ ಸರಕಾರದ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಿಂದ ಸಾಧ್ಯವಾಗಿದ್ದು, ಮೀನುಗಾರಿಕೆ ಇಲಾಖಾ ಅಧಿಕಾರಿಗಳು ಕೂಡಾ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Belagavi: ಆಸ್ಪತ್ರೆ ಎಂದರೆ ಮಕ್ಕಳು ಖುಷ್! ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಏನಿದು ಜಾದೂ?
ಒಟ್ಟಿನಲ್ಲಿ ಗುಮ್ಮಟ ನಗರಿಯಲ್ಲಿ ಮೀನು ಸಾಕಾಣಿಕೆ ಮೂಲಕ ರಾಜಾ ಅಹ್ಮದ ಹುಲ್ಲೂರ ಉತ್ತಮ ಜೀವನ ನಡೆಸುತ್ತಿದ್ದಾರೆ. ಮಾತ್ರವಲ್ಲದೇ, ಮನಸ್ಸಿದ್ದರೆ ಮಾರ್ಗವಿದೆ ಅನ್ನೋದನ್ನ ಇಡೀ ವಿಜಯಪುರ ಜಿಲ್ಲೆಯ ಜನರಿಗೆ ಮಾದರಿಯಾಗಿ ತೋರಿಸಿದ್ದಾರೆ.
ವರದಿ: ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ