ಬಾಗಲಕೋಟೆ: ಅಬ್ಬಬ್ಬಾ ಜನವೋ ಜನ, ಜನಸಾಗರದ ನಡುವೆ ರಥೋತ್ಸವದ ಸಂಭ್ರಮ. ಬನದ ಹುಣ್ಣಿಮೆಯ ಅದ್ಧೂರಿಗೆ ಇಡೀ ಬನಶಂಕರಿ ಆಯ್ತು ನೋಡಿ ವೇದಿಕೆ. ಇಡೀ ದೇಗುಲ ಪ್ರಾಂಗಣ ‘‘ಶಂಭೋಕೋ‘‘ ಜಯಘೋಷಕ್ಕೆ ಸಾಕ್ಷಿಯಾಯಿತು. ಹೌದು ಬಾಗಲಕೋಟೆಯ ಶಕ್ತಿ ಕೇಂದ್ರಗಳಲ್ಲಿ ಒಂದಾದ ಬಾದಾಮಿ ಬನಶಂಕರಿ ದೇವಾಲಯ ಜಾತ್ರೆಯಲ್ಲಿ. ಬನದ ಹುಣ್ಣಿಮೆ ದಿನದಂದು ಅದ್ಧೂರಿಯಾಗಿ ನಡೆದ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನ ಭಕ್ತರು ಸಾಕ್ಷಿಯಾದರು.
ಅದ್ಧೂರಿ ರಥೋತ್ಸವ
ರಥೋತ್ಸವ ಸಮಯದಲ್ಲಂತೂ ಭಕ್ತರ ಸಂಭ್ರಮ ಇಮ್ಮಡಿಯಾಗಿತ್ತು. ಜೈಕಾರ ಕೂಗುತ್ತಾ ರಥ ಎಳೆದು ಸಂಭ್ರಮಿಸಿದರು. ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಲ್ಲಿ ಕಳೆಗುಂದಿದ್ದ ಸಂಭ್ರಮ ಈ ಬಾರಿ ಯಾವುದೇ ಅಡೆತಡೆಯಿಲ್ಲದೇ ಮುಗಿಲು ಮುಟ್ಟಿತ್ತು. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧಿ ಪಡೆದಿರುವ ಈ ಜಾತ್ರೆಗೆ ಹೊರ ಜಿಲ್ಲೆ, ರಾಜ್ಯಗಳು ಭಕ್ತರು ಆಗಮಿಸಿದರು. ಜನಸಾಗರದ ನಡುವೆ ರಥ ಎಳೆಯುವ ದೃಶ್ಯವಂತೂ ಕಣ್ಣಿಗೊಂಥರಾ ಸೋಜಿಗ ಅನ್ನೋ ರೀತಿ ಭಾಸವಾಗುತ್ತಿತ್ತು.
‘‘ಶಂಭೋಕೋ‘‘ ಜಯಘೋಷ!
ಜಾತ್ರೆಯ ಹಿನ್ನೆಲೆ ಒಂದು ವಾರ ಮುಂಚಿತವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳನ್ನ ನಡೆಸಲಾಗುತ್ತದೆ. ಪ್ರತಿ ದಿನ ದೇವಿಗೆ ಮೂರು ದಿನಗಳ ಕಾಲ ಅರ್ಚಕರಿಂದ ಪೂಜೆ, ಪುನಸ್ಕಾರ ನಡೆಸಲಾಗುತ್ತದೆ. ದೇವಸ್ಥಾನದ ಪ್ರಾಂಗಣಕ್ಕೆ ಬರುವ ಭಕ್ತರು "ಶಂಭೋಕೋ" ಎಂದು ಜಯ ಘೋಷಣೆ ಕೂಗುತ್ತಾ, ದೇವಿಯ ದರ್ಶನ ಪಡೆದುಕೊಂಡು ರಥೋತ್ಸವದಲ್ಲಿ ಭಾಗಿಯಾದರು. ಜಾತ್ರೆಯ ಹಿನ್ನೆಲೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿಯ ದರ್ಶನ ಪಡೆದುಕೊಂಡು, ವಿಶೇಷ ಪೂಜೆಯನ್ನ ಸಲ್ಲಿಸಿದರು.
ಒಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿಯೇ ಹೆಚ್ಚು ಭಕ್ತರನ್ನ ಹೊಂದಿರುವ ಏಕೈಕ ದೇವಸ್ಥಾನದಲ್ಲಿ ಒಂದು ತಿಂಗಳ ಕಾಲ ಅದ್ದೂರಿ ಜಾತ್ರೆ ನಡೆಯುತ್ತಿದ್ದು ಬಾಗಲಕೋಟೆಗೆ ತೆರಳುವ ಪ್ರವಾಸಿಗರು ಬನಶಂಕರಿ ತಾಯಿಯ ವೈಭವವನ್ನು ಕಣ್ತುಂಬಿಕೊಳ್ಳಬಹುದು.
ವರದಿ - ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ