ಬಾಗಲಕೋಟೆ: ಬಸ್ ತಂಗುದಾಣದಲ್ಲಿ (Bus Stand) ಮಲಗಿ (Sleep) ನರಳಾಡುತ್ತಿರುವ ವ್ಯಕ್ತಿ, ವ್ಯಕ್ತಿಯನ್ನ ಉಪಚರಿಸುತ್ತಿರೋ ಯುವಕರು. ಹೀಗೆ ಮನೆಯಲ್ಲಿ ಕುಟುಂಬ (Family) ಕಲಹದಿಂದ ಹೊರಬಂದ ಮನುಷ್ಯನಿಗೆ ಸಿಕ್ತು ನೋಡಿ ಆಶ್ರಯ, ಬೀದಿ ಪಾಲಾದ ವ್ಯಕ್ತಿ ಮರಳಿ ಸೇರಿದ್ದಾನೆ ತನ್ನ ಸ್ವಂತ ಮನೆಗೆ. ಹಾಗಿದ್ರೆ ಈ ಘಟನೆ ಎಲ್ಲಿ ನಡೆದಿದೆ ಅಂತೀರಾ ಹೇಳ್ತೀವಿ ನೋಡಿ..
ಹತ್ತು ವರ್ಷದ ಹಿಂದೆ ಮನೆ ತೊರೆದಿದ್ದರು..
ಯೆಸ್, ಬಸ್ ಸ್ಟ್ಯಾಂಡ್ ಬಳಿ ಅನಾಥನಾಗಿದ್ದ ವ್ಯಕ್ತಿಗೆ ಯುವಕರ ತಂಡವೊಂದು ಮಾನವೀಯತೆ ತೋರಿಸಿದ್ರಿಂದ ಬೀದಿಪಾಲಾಗಿದ್ದ ಮತ್ತೆ ತನ್ನ ಸ್ವಂತ ಮನೆ ಸೇರುವಂತಾಗಿದೆ. ಅಷ್ಟಕ್ಕೂ ಈ ವ್ಯಕ್ತಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ರಮೇಶ. ಕಳೆದ 2012ರಲ್ಲಿ ತಮ್ಮ ತಾಯಿಯ ನಿಧನದಿಂದ ಮತ್ತು ಕುಟುಂಬ ಕಲಹದಿಂದ ನೊಂದು ಮನೆ ತೊರೆದಿದ್ದರು.
ಅಗ್ನಿಶಾಮಕ ಸಿಬ್ಬಂದಿಯ ಮಾನವೀಯತೆ
ಕಳೆದ ಎಂಟು ವರ್ಷದಿಂದ ರಾಜ್ಯದ ಹಲವೆಡೆ ತಿರುಗಾಡಿ ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ 3 ತಿಂಗಳ ಹಿಂದೆ ಆಗಮಿಸಿ ಬಸ್ ತಂಗುದಾಣದಲ್ಲಿ ನೆಲೆಸಿದ್ದರು. ಊಟ, ನಿದ್ರೆ ಇಲ್ಲದೇ ಮತ್ತು ಹವಾಮಾನ ಬದಲಾವಣೆಯಿಂದ ಆರೋಗ್ಯ ಸಮಸ್ಯೆ ಹದಗೆಟ್ಟು ಹೋಗಿ ನರಳಾಡುತ್ತಿದ್ದರು. ನಿತ್ಯ ಈ ವ್ಯಕ್ತಿಯನ್ನ ಗಮನಿಸುತ್ತಿದ್ದ ಬೀಳಗಿ ಅಗ್ನಿ ಶಾಮಕ ಠಾಣೆಯ ಸಿಬ್ಬಂದಿ ಫಾರುಕ್ ಹುಡೇದ ಎಂಬುವರು ಎರಡು ದಿನಗಳ ಕಾಲ ಇವರನ್ನ ಉಪಚರಿಸಿದ್ದಾರೆ.
ಆರೈಕೆ ಮಾಡಿದ ಯುವಕರು
ಆರೋಗ್ಯ ಸುಧಾರಣೆಯಾದ ಬಳಿಕ ರಮೇಶ್ ಅವರನ್ನು ಸ್ಥಳೀಯ ಯುವಕರಾದ ವಸೀಮ್ ಜಮಾದಾರ, ಭೀಮಸಿ ಕಣವಿ, ಸಂದೀಪ ಕೋಳುರಗಿ, ರಂಗಪ್ಪ ಹಡಪದ ಮತ್ತು ವಿನಯ ಎಂಬುವರು ಸೇರಿಕೊಂಡು ಈ ವ್ಯಕ್ತಿಯನ್ನ ಕರೆದೊಯ್ದು ಸ್ವತಃ ಇವರೇ ಹೇರ್ ಕಟ್ ಮಾಡಿ, ಸ್ನಾನ ಮಾಡಿಸಿ, ಹೊಸ ಬಟ್ಟೆ, ಚಪ್ಪಲಿಯನ್ನ ನೀಡಿ ಮತ್ತೆ ಮರಳಿ ಈ ಹಿಂದಿನ ಸ್ಥಿತಿಗೆ ತಂದಿದ್ದಾರೆ.
ಹಳೆಯ ರಮೇಶ್ ಆಗಿ ಬದಲಾವಣೆ
ಅದುವರೆಗೂ ಬಸ್ ಸ್ಟ್ಯಾಂಡೇ ತನ್ನ ಮನೆ ಅನ್ನೋ ಹಾಗಿದ್ದ ರಮೇಶ್ ಬದಲಾಗಿದ್ದು, ಬಳಿಕ ಇದೇ ತಂಡ ಅವರಿಗೆ ಧೈರ್ಯ ತುಂಬಿ ಮತ್ತೆ ಕುಟುಂಬವನ್ನ ಸೇರುವಂತೆ ಮಾಡಿದ್ದಾರೆ. ಹೀಗೆ ಯುವಕರ ತಂಡ ತೋರಿದ ಮಾನವೀಯತೆಯಿಂದ ಬೀದಿಪಾಲಾಗಿ ಹೋಗಿದ್ದ ವ್ಯಕ್ತಿಯ ಮುಖದಲ್ಲಿ ಮತ್ತೆ ಹಳೆ ನೆನಪುಗಳು ಮರುಕಳಿಸುವಂತೆ ಮಾಡಿದ್ದಾರೆ.
ವರದಿ – ಪ್ರಶಾಂತ ಹೂಗಾರ ನ್ಯೂಸ್ 18 ಕನ್ನಡ ವಿಜಯಪುರ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ