ಉತ್ತರ ಕನ್ನಡ: ಪುಟ್ಟ ಬಾಲಕಿಯ ಹೆಸರನ್ನು ಹೊಸದಾಗಿ ಪತ್ತೆಯಾದ ಪುಟ್ಟ ಏಡಿಗೆ ಇಟ್ಟಿರುವ ಅಚ್ಚರಿಯ ವಿದ್ಯಮಾನವೊಂದು ನಡೆದಿದೆ. ಪಶ್ಚಿಮ ಘಟ್ಟದ ಉತ್ತರ ಕನ್ನಡ ಜಿಲ್ಲೆಯ (Uttara Kannada News) ಯಲ್ಲಾಪುರದ (Yellapur) ದಟ್ಟ ಕಾಡಿನ ನಡುವಿನ ಅಡಿಕೆ ತೋಟದಲ್ಲಿ ಹೊಸ ಪ್ರಬೇಧದ ಏಡಿಯೊಂದು ಪತ್ತೆಯಾಗಿದೆ. ಈ ಏಡಿಗೆ ಇಟ್ಟ ಹೆಸರೇ ಈಗ ಪರಿಸರಾಸಕ್ತರ ಕುತೂಹಲಕ್ಕೆ ಕಾರಣವಾಗಿರೋದು!
ಯಲ್ಲಾಪುರದ ಕೃಷಿಕ, ಪರಿಸರಾಸಕ್ತ ಗೋಪಾಲಕೃಷ್ಣ ಹೆಗಡೆ ಮತ್ತು ಅರಣ್ಯ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿ ಅವರ ಜೋಡಿ ಸಮೀರ್ ಕುಮಾರ್ ಪತಿ ಅವರ ಜೊತೆಗೂಡಿ ಸಿಹಿನೀರಿನ ವಿಶಿಷ್ಟ ಏಡಿಯ ಗುರುತು ಪತ್ತೆಹಚ್ಚಿದ್ದಾರೆ. ಅಂದಹಾಗೆ ಈ ಏಡಿಗೆ ಪುಟ್ಟ ಬಾಲಕಿಯ ಹೆಸರು ಇಟ್ಟಿರೋದು ಇನ್ನೊಂದು ವಿಶೇಷ!
ಏಡಿಯ ಹೆಸರೇನು?
ಈ ಹೊಸ ಡಿಯ ಹೆಸರು “ವೇಲ ಬಾಂಧವ್ಯ”. ವೇಲ ಅಂದರೆ ಈ ಏಡಿಯ ತಳಿಯ ಹೆಸರು. ಏಡಿಯನ್ನು ಪತ್ತೆಹಚ್ಚಿದ ಗೋಪಾಲಕೃಷ್ಣ ಹೆಗಡೆಯವರ 5ನೇ ತರಗತಿಯಲ್ಲಿ ಓದುತ್ತಿರುವ ಮಗಳ ಹೆಸರು ಬಾಂಧವ್ಯ. ಈ ಏಡಿ ಕೃಷಿಕರಿಗೆ ಚಿರಪರಿಚಿತ. ಬುಡಕಟ್ಟು ಜನಾಂಗದವರು, ಕೃಷಿಕರ ಒಡನಾಡಿ ಸಂಬಂಧಿಯಂತೆ ಮಳೆಗಾಲದ ಆರಂಭದಲ್ಲಿ ತೋಟಗಳಲ್ಲಿ ಕಂಡುಬರುತ್ತೆ. ಈ ಸಂಬಂಧದ ಸೂಚಕವಾಗಿ "ಬಾಂಧವ್ಯ" ಎಂಬ ಹೆಸರಿಡಲಾಗಿದೆ.
ಇದನ್ನೂ ಓದಿ: HDK ಹಾರದ ಹಿಂದಿನ ಕೈ! ಬೃಹತ್ ಅಡಿಕೆ ಮಾಲೆ ತಯಾರಿಸಿದ ಕಲಾವಿದ ಇವರೇ!
ಅರಣ್ಯ ಸಿಬ್ಬಂದಿ ಪರಶುರಾಮ ಪ್ರಭು ಭಜಂತ್ರಿ ಮತ್ತು ಗೋಪಾಲಕೃಷ್ಣ ಹೆಗಡೆ
ಈ ಏಡಿಯ ವಿಶೇಷತೆಗಳೇನು?
ಹೊಸ ಏಡಿ ಪ್ರಬೇಧದ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಪರಿಸರ ಸಂಶೋಧಕ ಗೋಪಾಕೃಷ್ಣ ಹೆಗಡೆ, “ಮಳೆಗಾಲ ಶುರುವಾದ 10-15 ದಿನಗಳ ಕಾಲ ಮಾತ್ರ ಈ ಏಡಿ ಕಂಡುಬರುತ್ತೆ, ನೆಲದಲ್ಲಿ ಚಿಕ್ಕ ರಂಧ್ರ ಮಾಡಿ ಅದರಲ್ಲಿ ವಾಸವಿರುವ ಏಡಿಯಿದು. ಜೊತೆಗೆ ಈ ಏಡಿಯನ್ನು ಸ್ಥಳೀಯ ಬುಡಕಟ್ಟು ಜನಾಂಗಗಳು ಆಹಾರವಾಗಿ ಬಳಸುತ್ತಾರೆ. ಈ ಏಡಿಗೆ ಸ್ಥಳೀಯರು “ಹೋಟೆಕುರ್ಲಿ” ಎಂದು ಕರೆಯುತ್ತಾರೆ” ಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: Ghatiana Dwivarna: ಬಿಳಿ ಮೈ, ಕಾಲು ಚಾಕ್ಲೇಟ್ ಬಣ್ಣ! ಅಪರೂಪದ ಘಾಟಿಯಾನ ದ್ವಿವರ್ಣ ಏಡಿಯ ವಿಡಿಯೋ ನೋಡಿ
ಹಳದಿ ಮಿಶ್ರಿತ ಕೇಸರಿ ಬಣ್ಣದ ಈ ಏಡಿಯ ತಲೆ ಭಾಗದಲ್ಲಿ ಕಪ್ಪು ಬಣ್ಣದಲ್ಲಿ ಕಂಗೊಳಿಸುತ್ತೆ. ಒಟ್ಟಾರೆ ಈ ಹೊಸ ಪ್ರಬೇಧದ ಏಡಿಯ ಜೊತೆಗೆ ಅದಕ್ಕೆ ಇಟ್ಟ ಹೆಸರೂ ಸಹ ಅಷ್ಟೇ ಗಮನಸೆಳೆಯುವಂತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ