ಉತ್ತರ ಕನ್ನಡ: ಹಸಿರ ಗಿಡಗಳ ತಲೆ ಮೇಲೊಂದು ಚೆಂದದ ಸೂರ್ಯಕಾಂತಿ. ಕಾಂತಿಯ ಬೀರುತ್ತಾ ನಸುನಗುತ್ತಿರೋ ಹೂವ ಕಂಡು ರೈತನ ಮೊಗದಲ್ಲೂ ಮಂದಹಾಸ. ಅಂದಹಾಗೆ ಇದ್ಯಾವುದೋ ಬಿಸಿಲನಾಡಿನ ರೈತನ ಖುಷಿ ಅಂದ್ಕೋಬೇಡ್ರಿ. ಇದು ಮಲೆನಾಡಿನಲ್ಲಿ (Malenad) ಬಿಸಿಲನಾಡಿನ ಚೆಲುವೆಯನ್ನ ಅರಳಿಸಿ ಸಕ್ಸಸ್ ಕಂಡ (Success Story) ರೈತನ ಸಖತ್ ಖುಷಿಯ ಕಥೆ.
ಬನವಾಸಿಯಲ್ಲಿ ಸೂರ್ಯʼಕ್ರಾಂತಿʼ
ಯೆಸ್, ಉತ್ತರ ಕನ್ನಡ ಜಿಲ್ಲೆ ತೆಂಗು, ಕಂಗು ಬೆಳೆಗೆ ಹೆಸರುವಾಸಿ ನಿಜ. ಆದ್ರಿಲ್ಲಿ ಬನವಾಸಿ ವ್ಯಾಪ್ತಿಯಲ್ಲಿ ರೈತರೋರ್ವರು ಸೂರ್ಯಕಾಂತಿ ಬೆಳೆದು ಕ್ರಾಂತಿ ಮಾಡಿದ್ದಾರೆ. ಅಸಲಿಗೆ ವರದಾ ತೀರದ ಬನವಾಸಿ ಅರೆಮಲೆನಾಡು ಪ್ರದೇಶವಾಗಿದ್ದು ಇಲ್ಲಿ ಪೈನಾಪಲ್, ಕಲ್ಲಂಗಡಿಯಂತಹ ಹಣ್ಣುಗಳಿಗೆ ಪ್ರಧಾನ ಆದ್ಯತೆ. ಆದರೆ ಮೆಕ್ಕೆಜೋಳದ ವ್ಯವಸಾಯ ಮಾಡುತ್ತಿದ್ದ ರಮೇಶ್ ಅವರು ಮಾತ್ರ ಹಾನಗಲ್ನಿಂದ ಓರ್ವ ಸಂಬಂಧಿಯ ಬಳಿ ಸೂರ್ಯಕಾಂತಿ ಬೆಳೆ ಬಗ್ಗೆ ಮಾಹಿತಿ ಪಡೆದು, ಒಂದು ಎಕರೆ ಹತ್ತು ಗುಂಟೆ ಜಾಗದಲ್ಲಿ ಎರಡು ಕೆಜಿ ಬೀಜದಿಂದ ಹಸನಾಗಿ ಸೂರ್ಯಕಾಂತಿ ಬೆಳೆದಿದ್ದಾರೆ.
ಲಕ್ಷ ಆದಾಯ ಗಳಿಕೆ
ರಮೇಶ್ ಅವರಿಗೆ ಬೀಜ, ಗೊಬ್ಬರ ನಿರ್ವಹಣೆ ಎಲ್ಲಾ ಸೇರಿದರೂ 15 ಸಾವಿರ ರೂಪಾಯಿಯಷ್ಟು ಖರ್ಚು ಬಂದಿದೆ. ಆದರೆ ತಮ್ಮ ಜಮೀನಿನಲ್ಲಿ ಬಂದ ಇಳುವರಿ ಪ್ರಕಾರ ಆದಾಯ 1 ಲಕ್ಷ ರೂಪಾಯಿಯನ್ನೂ ದಾಟುವ ನಿರೀಕ್ಷೆ ಹೊಂದಿದ್ದಾರೆ.
ಇದನ್ನೂ ಓದಿ: Uttara Kannada: ಈ ಹಳ್ಳಿ ಮಕ್ಕಳು ತಾವೇ ಡ್ರೋನ್ ಮಾಡಿ ಹಾರಿಸ್ತಿದ್ದಾರೆ ನೋಡಿ!
40 ದಿನಗಳಲ್ಲಿ ಫಸಲು
ಥೇಟ್ ಮೆಕ್ಕೆಜೋಳದ ಹಾಗೆ ಕುಣಿ ಹೊಡೆದುಕೊಂದು ಬರೋ ಈ ಸೂರ್ಯಕಾಂತಿಗೆ ಚೆನ್ನಾಗಿ ನೀರು ಹಾಯಿಸಿದರೆ ಸಾಕು, ನಲ್ವತ್ತು ದಿನಗಳಲ್ಲಿ ಸಂಪದ್ಭರಿತ ಬೆಳೆ ಸಿಗುತ್ತೆ. ಆದರೆ ಕೀಟಗಳ, ಪಕ್ಷಿಗಳ ಕಾಟ ಈ ಬೆಳೆಗೂ ಇದೆ. ಆದರೂ ಉತ್ತರ ಕನ್ನಡದ ಭಾಗದಲ್ಲೂ ಸೂರ್ಯಕಾಂತಿ ಬೆಳೆಯಲು ಸಾಧ್ಯ ಅನ್ನೋದನ್ನ ರಮೇಶ್ ಅವರು ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: House Lifting Technology: ಕಟ್ಟಿದ ಮನೆಯೇ ನೆಲದಿಂದ 6 ಅಡಿ ಎತ್ತರಕ್ಕೆ ಲಿಫ್ಟ್!
ಏಕಾಂಗಿ ಪ್ರಯತ್ನ
ಸರ್ಕಾರದ ಯಾವುದೇ ಸಹಾಯವಿಲ್ಲ ತಮ್ಮ ಪ್ರಯೋಗಕ್ಕೆ ತಾನೇ ಪಾಲುದಾರ ಎಂಬಂತೆ ತಾವೊಬ್ಬರೇ ಏಕಾಂಗಿಯಾಗಿ ಬೆಳೆ ಬೆಳೆದು ಸಾಧಿಸಿ ತೋರಿಸಿದ್ದಾರೆ. ಒಟ್ಟಿನಲ್ಲಿ ಬನವಾಸಿಯಂತಹ ಅರೆ ಮಲೆನಾಡು ಪ್ರದೇಶದಲ್ಲೂ ಸೂರ್ಯಕಾಂತಿ ಬೆಳೆದು ಹೊಸ ಕ್ರಾಂತಿಯನ್ನ ಮಾಡಿದ ರೈತ ರಮೇಶ್ ಅವರಿಗೆ ಸೆಲ್ಯೂಟ್ ಹೇಳಲೇಬೇಕು.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ