ಉತ್ತರ ಕನ್ನಡ: ಮನೆ ಹೊರ ಗೋಡೆಯಲ್ಲಿ ಚಿತ್ರಗಳ ಚಿತ್ತಾರ. ಬಣ್ಣಗಳಿಂದ ಮೂಡಿದ ವಿವಿಧ ಬಗೆಯ ಅಲಂಕಾರ. ಸಿದ್ಧಿ ಜನಾಂಗದ (Siddi Tribal Community) ಸಂಪ್ರದಾಯಕ್ಕೆ ಮತ್ತೆ ಬಂತು ಜೀವಕಳೆ. ಅಳಿವಿನಂಚಿನಲ್ಲಿದ್ದ ಆಚರಣೆಗೆ ಪರಿಸರಾಸಕ್ತ ತಂಡ ನೀಡಿತು ವಿಶೇಷ ಮೆರುಗು.
ಯೆಸ್, ಉತ್ತರ ಕನ್ನಡದ ಅಡವಿ ಜನರಾದ ಸಿದ್ದಿ ಜನಾಂಗದವರು ಹಿಂದೆ ತಮ್ಮ ಮನೆಗಳಿಗೆ ಶೇಡಿ ಬಣ್ಣದಿಂದ ಸಾಂಪ್ರದಾಯಿಕ ಚಿತ್ತಾರ ಬಿಡಿಸುತ್ತಿದ್ದರು. ಆ ಮೂಲಕ ಅವರ ಆಚರಣೆ, ದೈವಗಳು ಹಾಗೂ ಕಾಡಿನ ಅಪರೂಪದ ಪ್ರಾಣಿ ಪಕ್ಷಿಗಳಿಗೆ ಸ್ಥಾನವಿತ್ತು. ಈಗ ಕಾಲ ಬದಲಾಗಿದ್ದು, ಮಣ್ಣಿನ ಮನೆ ಜಾಗದಲ್ಲಿ ಕಾಂಕ್ರೀಟ್ ಕಟ್ಟಡಗಳು ತಲೆ ಎತ್ತಿವೆ. ಹಾಗಾಗಿ ಸಿದ್ಧಿ ಜನಾಂಗದ ಹೊಸ ತಲೆಮಾರು ಆ ಕಲೆಯನ್ನೇ ಮರೆತು ಬಿಟ್ಟಂತಿದೆ.
“ಸಪ್ತಾವರಣ”ದ ರಂಗು!
ಇಂತಹ ಅಳಿವಿನಂಚಿನ ಕಲೆಯ ಮುಂದುವರಿಕೆಯನ್ನು "ಸಪ್ತಾವರಣ"ದ ಹೆಸರಲ್ಲಿ ವನಚೇತನ ಎಂಬ ತಂಡವು ಮಾಡತೊಡಗಿದೆ. ಅದರ ಫಲಶೃತಿಗೆ ಖಾಲಿ ಸಿಮೆಂಟಿನ ಗೋಡೆಗಳಿಗೆ ರಂಗೇರಿ ಕಳೆಬಂದಿದೆ. ಸಿದ್ಧಿ ಸಂಸ್ಕೃತಿಯ ಶೇಡಿ ಕಲೆಗೆ ನೂತನ ಆಯಾಮ ಸಿಕ್ಕಿದೆ. ಉತ್ತರ ಕನ್ನಡದ ಅರಬೈಲ್ನ ಕಳಾಸೆಯಲ್ಲಿ ಇಂತದೊಂದು ಕಲಾಶಿಬಿರ ಆಯೋಜನೆಯಾಗಿತ್ತು.
ಇದನ್ನೂ ಓದಿ: Cashew Fruit Juice Recipe: ಈ ಬೇಸಿಗೆಯಲ್ಲಿ ಕುಡಿಯಿರಿ ಗೇರುಹಣ್ಣಿನ ಜ್ಯೂಸ್! ರೆಸಿಪಿ ಇಲ್ಲಿದೆ
ನಾಡಿನ ಮಕ್ಕಳ ಆಸಕ್ತಿ
ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಸರವಾದಿ ದಿನೇಶ್ ಹೊಳ್ಳ ಅವರ ನೇತೃತ್ವದಲ್ಲಿ ಬಣ್ಣ ಮಾಸಿದ ಸಿದ್ಧಿ ಜನರ ಮನೆಯಂಗಳಕ್ಕೆ ಪೇಂಟ್ ಮಾಡಿ ಹೊಸ ಹೊಳಪು ನೀಡಿದರು. ಸುಮಾರು 10 ಮನೆಗಳಿಗೆ ಹೀಗೆ ಚಿತ್ರಗಳ ಚಿತ್ತಾರ ಬಿಡಿಸಲಾಯಿತು.
ಕಳಾಸೆಯ ಸಿದ್ದಿ ಮಕ್ಕಳೂ ಕೂಡ ತಮ್ಮ ಸಂಪ್ರದಾಯದ ಭಾಗವಾಗಿದ್ದು ಈ ಚಿತ್ರ ರಚನೆಯ ಶಿಬಿರದಲ್ಲಿ ಸೇರಿಕೊಂಡರು. ಹೀಗೆ ನವಿಲು, ಕಾಡುಜನರ ಜೀವನ, ಶಿವ, ವೈರಾಗಿಣಿ ಎಲ್ಲವೂ ಗೋಡೆಯ ಮೇಲೆ ಹಚ್ಚೆಯಾಗಿದ್ದವು.
ಇದನ್ನೂ ಓದಿ: Success Story: ಹಳ್ಳಿಯಿಂದಲೇ ಲಕ್ಷ ಲಕ್ಷ ಸಂಪಾದಿಸೋ ಮಹಿಳೆ, ಇವ್ರನ್ನ ನೋಡಿ ಕಲಿಯಬೇಕು ಕಣ್ರೀ!
ಒಟ್ಟಿನಲ್ಲಿ ಕಾಡುಜನರ ಸಂಸ್ಕೃತಿಯ ಅಳಿವಿನ ಬಗ್ಗೆ ನಾಡಿನ ಜನರು ಸೇರಿಕೊಂಡು ಜಾಗೃತಿ ಮೂಡಿಸುತ್ತಾ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ