ಶಿವಮೊಗ್ಗ: ಸಾಲಾಗಿ ನಿಂತು ದರ್ಶನ ಪಡೆಯುತ್ತಿರೋ ಭಕ್ತರು, ಪುಷ್ಪಾಲಂಕಾರದಿಂದ ಅಲಂಕೃತಗೊಂಡ ದೇವರ ಮೂರ್ತಿ. ವಟುಗಳಿಂದ ನಿರಂತರ ಕೇಳಿ ಬರುತ್ತಿರುವ ಮಂತ್ರಘೋಷ. ಈ ಎಲ್ಲ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗದ ಸಾಗರ ತಾಲೂಕಿನ ವರದಳ್ಳಿಯಲ್ಲಿರುವ (Varadahalli) ಶ್ರೀಧರರ ಆರಾಧನಾ (Shreedhar Swami) ಮಹೋತ್ಸವದಲ್ಲಿ.
ಸುವರ್ಣ ಮಹೋತ್ಸವದ ಆರಾಧನೆ
19 ನೇ ಶತಮಾನದಲ್ಲಿ ಭಾರತದಲ್ಲಿ ಆಧ್ಯಾತ್ಮಿಕ ಕ್ರಾಂತಿಯನ್ನು ಮಾಡಿದ ಭಗವಾನ್ ಶ್ರೀಧರರ 50 ನೇ ವರ್ಷದ ಆರಾಧನಾ ಮಹೋತ್ಸವವು ಭಾರೀ ವಿಜೃಂಭಣೆಯಿಂದ ನಡೆಯುತ್ತಿದೆ. ಅಪಾರ ಸಂಖ್ಯೆಯ ಭಕ್ತರು ಶ್ರೀಧರರ ಸಾನಿಧ್ಯಕ್ಕೆ ಬರುತ್ತಿದ್ದು, ತಮ್ಮ ಇಷ್ಟಾರ್ಥ ಬೇಡಿಕೆ ಈಡೇರಿಕೆಗಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಯಾರು ಈ ಶ್ರೀಧರರು?
1908 ರಲ್ಲಿ ಕಲಬುರಗಿಯ ಚಿಂಚೋಳಿಯಲ್ಲಿ ಜನಿಸಿದ್ದ ಶ್ರೀಧರರು, 1942 ರಲ್ಲಿ ಸನ್ಯಾಸ ದೀಕ್ಷೆ ಪಡೆದರು. ತನ್ನ ಜೀವಿತಾವಧಿಯುದ್ದಕ್ಕೂ ದಕ್ಷಿಣ ಭಾರತದಲ್ಲಿ ಧರ್ಮ ಸಂಸ್ಥಾಪನೆ ಗೆ ಶ್ರಮಿಸಿದ ಮಹಾನ್ ಸಂತನಾಗಿ ಗುರುತಿಸಿಕೊಂಡವರು. 1973ರ ಎಪ್ರಿಲ್ ನಲ್ಲಿ ಶ್ರೀಧರರು ದೈವಾಧೀನರಾದರು. ಅವರ ಜೀವಿತದಲ್ಲಿ ಅವರು ನಡೆಸಿದ ಅಪಾರ ಧರ್ಮ ಕಾರ್ಯಗಳು ಅವರಿಗೆ ಭಕ್ತರನ್ನು ಹುಟ್ಟು ಹಾಕಿತ್ತು.
ಎಪ್ರಿಲ್ 8ರಂದು ಸಂಪನ್ನ
ಇದೀಗ ಶ್ರೀಧರರ ಆರಾಧನಾ ಮಹೋತ್ಸವವು ಶಿವಮೊಗ್ಗದ ವರದಳ್ಳಿಯಲ್ಲಿ ನಡೆಯುತ್ತಿದ್ದು, 50 ನೇ ವರ್ಷದ ಆರಾಧನಾ ಮಹೋತ್ಸವವು ಎಪ್ರಿಲ್ 8 ಭಾರೀ ವೈಭವದೊಂದಿಗೆ ಸಂಪನ್ನಗೊಳ್ಳಲಿದೆ. ಸದ್ಯ ಇಡೀ ಆಶ್ರಮವು ಭಕ್ತಗಣದಿಂದ ತುಂಬಿ ಹೋಗಿದೆ. ಕರ್ನಾಟಕ ಮಹಾರಾಷ್ಟ್ರ ಗೋವಾ ತಮಿಳುನಾಡು ಕೇರಳ ಆಂಧ್ರದಿಂದಲೂ ಭಕ್ತರು ಬರುತ್ತಿದ್ದಾರೆ.
ಇದನ್ನೂ ಓದಿ: Success Story: ಹಳ್ಳಿಯಿಂದಲೇ ಲಕ್ಷ ಲಕ್ಷ ಸಂಪಾದಿಸೋ ಮಹಿಳೆ, ಇವ್ರನ್ನ ನೋಡಿ ಕಲಿಯಬೇಕು ಕಣ್ರೀ!
ವಿಶೇಷ ಪೂಜೆ ಪುನಸ್ಕಾರ
ಇಷ್ಟಾರ್ಥ ಸಿದ್ಧಿಗಾಗಿ ಪಾದುಕಾ ಪೂಜೆ, ಏಕಾಂತ ಗುಹೆಗೆ ದಕ್ಷಿಣೆ, ಗರ್ಭಗುಡಿಯ ಹಿಂದೆ ನಾಣ್ಯದಿಂದ ಸಂಕಲ್ಪ ಎಲ್ಲವೂ ಅವ್ಯಾಹತವಾಗಿ ನಡೆಯುತ್ತಿವೆ. ಎಪ್ರಿಲ್ ಎಂಟನೇ ತಾರೀಕು ಆರಾಧನಾ ಮಹೋತ್ಸವದ ಕೊನೆಯ ದಿನವಾಗಿದ್ದೂ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: Bob Morley In Uttara Kannada: ಈ ಹಳ್ಳಿ ಮೂಲೆಯಲ್ಲೇ ಇದ್ದಾರೆ ನೋಡಿ ಪಾಪ್ ಗಾಯಕ ಬಾಬ್ ಮಾರ್ಲೆ!
ಜೊತೆಗೆ ಲಕ್ಷಾಂತರ ಜನರಿಗೆ ದಾಸೋಹ ಸೇವೆಯೂ ನಡೆಯುತ್ತಿದ್ದು ಜನ ಭಕ್ತಿಯಿಂದ ಸೇವೆ ಮಾಡುತ್ತಿದ್ದಾರೆ. ಸಾಗರದಿಂದ 7 ಕಿಲೋಮೀಟರ್ ದೂರದಲ್ಲಿರುವ ಹಚ್ಚ ಹಸಿರಿನ ಪ್ರಕೃತಿಯ ನಡುವೆ ಈ ಶ್ರೀಧರರ ಆಲಯವಿದೆ. ಇಷ್ಟಾರ್ಥ ಸಿದ್ಧಿಗಾಗಿ ಪ್ರಸಿದ್ಧಿ ಪಡೆದಿರುವ ಮಲೆನಾಡಿನ ಈ ದೇಗುಲವು ಇದೀಗ ಭಕ್ತರ ಭಕ್ತಿ ಪರಾಕಾಷ್ಠೆಗೆ ಸಾಕ್ಷಿಯಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ