ಕಾರವಾರ: ಮೈ ಕೊರೆಯುವ ಚಳಿ, ದಟ್ಟವಾದ ಬೆಟ್ಟ ಏರುತ್ತಿರೋ ನೂರಾರು ಜನರು. ಕಾಲಲ್ಲಿ ಚಪ್ಪಲಿಯೂ ಇಲ್ಲ, ಪಶ್ಚಿಮ ಘಟ್ಟದ (Western Ghats) ಸುಂದರ ದೃಶ್ಯ ವೀಕ್ಷಿಸುತ್ತಲೇ ಲಗುಬಗೆಯಲ್ಲಿ ನಡೆಯುತ್ತಿರೋ ಇವರೆಲ್ಲ ಸಿದ್ದರಾಮೇಶ್ವರ ದೇವರ (Siddarameshwara Jatre) ಭಕ್ತರು! ಸಮುದ್ರ ಮಟ್ಟದಿಂದ ಸುಮಾರು ಎರಡು ಸಾವಿರ ಅಡಿ ಎತ್ತರದಲ್ಲಿರುವ ಈ ಸ್ಥಳ ಚಾರಣಿಗರ ನೆಚ್ಚಿನ ತಾಣ. ಸಂಪ್ರದಾಯದಂತೆ ವರ್ಷಕ್ಕೊಮ್ಮೆ ಇಲ್ಲಿ ನಡೆಯುವ ಜಾತ್ರೆ ಸಾವಿರಾರು ಭಕ್ತರನ್ನ ಆಕರ್ಷಿಸಿ ಅದ್ಧೂರಿಯಾಗಿ ನೆರವೇರಿತು. ಮೈಕೊರೆಯುವ ಚಳಿಯ ನಡುವೆಯೂ ಭಕ್ತರು (Devotees) ದಿನಪೂರ್ತಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.
ಉತ್ತರ ಕನ್ನಡದ ಕಾರವಾರ ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿರ್ವೆ ಗುಡ್ಡದ ತಪ್ಪಲಿನಲ್ಲಿ ಶ್ರೀಸಿದ್ಧರಾಮೇಶ್ವರ ದೇವರ ಜಾತ್ರೆ ನೆರವೇರುತ್ತೆ. ಉಳವಿಯ ಬಳಿಕ ಶಿವಶರಣರು ಸಂಬಂಧ ಹೊಂದಿದ ಎರಡನೇ ಪುಣ್ಯ ಸ್ಥಳ ಇದಾಗಿದ್ದು, ಈ ದೇಗುಲಕ್ಕೆ ಮೂರ್ನಾಲ್ಕು ಕಿಲೋ ಮೀಟರ್ ಅರಣ್ಯ ಪ್ರದೇಶದಲ್ಲಿ ನಡೆದೇ ಸಾಗಬೇಕು.
ನಂದಿ ವಿಗ್ರಹಕ್ಕೆ ವಿಶೇಷ ಪೂಜೆ
ರಾತ್ರಿಯಿಡೀ ಇಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನ ನಡೆಸಿದ ಭಕ್ತರು ಮಾರನೇ ದಿನ ಬೆಳಿಗ್ಗೆ ಸುಮಾರು 3 ಗಂಟೆ ಹೊತ್ತಿಗೆ ಮತ್ತೆ ದೇವಸ್ಥಾನದಿಂದ ಸುಮಾರು ಎರಡು ಕಿಲೋಮೀಟರ್ ದೂರದ ಬೆಟ್ಟದ ತುತ್ತ ತುದಿಯಲ್ಲಿರುವ ನಂದಿ ವಿಗ್ರಹಕ್ಕೆ ತೆರಳಿ ದೀಪ ಹಚ್ಚಿ ವಿಶೇಷ ಪೂಜೆ ಸಲ್ಲಿಸಿದರು.
ಸೂರ್ಯೋದಯ-ಸೂರ್ಯಾಸ್ತವೂ ಸುಂದರ
ಶಿರ್ವೆಯ ಗುಡ್ಡವನ್ನು ಹತ್ತಿ ನಿಂತರೆ ಪಶ್ಚಿಮ ಘಟ್ಟದ ಏರಿಳಿತದ ಗುಡ್ಡದ ಸಾಲು ಸಾಲು ನೋಡಲು ಸುಂದರವಾಗಿ ಕಾಣುತ್ತೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯಗಳಂತೂ ಇನ್ನೂ ಮನಮೋಹಕವಾಗಿ ಕಾಣಸಿಗುತ್ತೆ. ಇಲ್ಲಿ ಒಂದು ಸಿಹಿ ನೀರಿನ ಬಾವಿಯೂ ಇದ್ದು ಪಾಂಡವರು ವನವಾಸದ ಸಂದರ್ಭದಲ್ಲಿ ಈ ಬಾವಿಯ ನೀರನ್ನು ಬಳಸಿದ್ದರು ಎಂಬುದು ಸ್ಥಳೀಯರ ನಂಬಿಕೆ. ಗುಡ್ಡದ ತುತ್ತ ತುದಿಯನ್ನು ಏರಿ ನಿಂತು ಸುತ್ತಲೂ ಕಾಣುವ ಸುಂದರ ಪರಿಸರ ಬೀಸುವ ಗಾಳಿ ಹಾಗೂ ಮೈ ಕೊರೆಯುವ ಚಳಿಯನ್ನು ಅನುಭವ ಮಾತ್ರ ರೋಮಾಂಚನಕಾರಿ.
ಸಾವಿರಾರು ಆಸ್ತಿಕರಿಗೆ ಇದು ದೈವಶಕ್ತಿಯ ನೆಲೆಯಾದರೆ, ಚಾರಣಿಗರಿಗೆ ಗುಡ್ಡ ಏರುವುದೇ ಒಂದು ಸವಾಲು. ಕಡಿದಾದ ಮಾರ್ಗದಲ್ಲಿ ಹಲವು ಏರು-ತಗ್ಗುಗಳ ನಡುವೆ ಸಾಗುವುದೇ ಒಂದು ವಿಶಿಷ್ಟ ಅನುಭವ ನೀಡುತ್ತೆ. ಅಲ್ಲದೆ ಹೀಗೆ ಬಂದವರು ದಿನವಿಡೀ ದೇವಸ್ಥಾನದ ತಪ್ಪಲಿನಲ್ಲಿ ಚಳಿಯನ್ನು ಲೆಕ್ಕಿಸದೆ ಪ್ರತಿ ವರ್ಷ ನೆಲೆಸುತ್ತಾರೆ. ಕೆಲವರು ಚಳಿಯಿಂದ ರಕ್ಷಣೆ ಪಡೆಯಲು ಅಲ್ಲಲ್ಲಿ ಬೆಂಕಿ ಹಾಕಿಕೊಂಡು ದಿನ ಕಳೆಯುವುದು ವಿಶೇಷ.
ಇದನ್ನೂ ಓದಿ: Uttara Kannada: ಶಿರಸಿಯ ಮನೆಯಲ್ಲಿ ಒಡಿಶಾದ ವಾಸ್ತುಶಿಲ್ಪ!
ಶಿರ್ವೆ ಗುಡ್ಡದ ಮೇಲೆ ಹಚ್ಚಲಾಗುತ್ತಿರುವ ದೀಪವು ಬ್ರಿಟಿಷರನ್ನು ಕೂಡ ಕಣ್ತೆರಿಸಿದ ಬಗ್ಗೆ ಕೂಡ ಹಿರಿಯರು ಹೇಳುತ್ತಾರೆ. ಬ್ರಿಟೀಷರು ಸಮುದ್ರದಲ್ಲಿ ಹಡಗಿನ ಮೂಲಕ ಸಂಚರಿಸುತ್ತಿದ್ದಾಗ ಭೂಮಿ ಕಾಣದೆ ಕಂಗಾಲಾಗಿದ್ದರಂತೆ.
ಇದನ್ನೂ ಓದಿ: Bedara Vesha: ಬೇಡರ ವೇಷ ಡಾನ್ಸ್ಗಿದೆ ರೋಚಕ ಇತಿಹಾಸ! ನೃತ್ಯ ನೋಡ್ತಿದ್ರೆ ಮೈಯೆಲ್ಲ ರೋಮಾಂಚನ
ಏನು ಮಾಡುವುದು ಎಂದು ಚಿಂತೆಯಲ್ಲಿರುವಾಗ ದೂರದಲ್ಲಿ ಎತ್ತರದ ಗುಡ್ಡಪ್ರದೇಶದಲ್ಲಿ ದೀಪವೊಂದು ಉರಿಯುವುದನ್ನು ಕಂಡು ಈ ದಿಕ್ಕಿನಲ್ಲಿ ಭೂಮಿ ಇದೆ ಎಂದು ತಿಳಿಯಿತು. ದೀಪದ ದಿಕ್ಕನ್ನು ಹಿಡಿದು ಬಂದಾಗ ಅವರಿಗೆ ನಿಜವಾಗಿಯೂ ಭೂ ಪ್ರದೇಶವನ್ನು ತಲುಪಿದರಂತೆ. ಅಂದಿನಿಂದ ವರ್ಷಂಪ್ರತಿ ಬ್ರಿಟಿಷರು ಇಲ್ಲಿ ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ದೀಪಹಚ್ಚಲೆಂದು ಒಂದು ಡಬ್ಬಿ ಎಳ್ಳೆಣ್ಣೆಯನ್ನು ನೀಡುತ್ತಿದ್ದರು ಎನ್ನುತ್ತಾರೆ ಸ್ಥಳೀಯರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ