ಉತ್ತರ ಕನ್ನಡ: ವಿಶಿಷ್ಟ ಆಕಾರದ ಕಲ್ಲಿನ ರಥ. ರಥದ ಒಳಗಡೆ ದೇವರ ಸಾನಿಧ್ಯ. ದೇಗುಲದ ಗೋಡೆಯಲ್ಲಿ ಕಾಣ ಸಿಗೋ ಹಲ್ಲಿಯ ಚಿತ್ರ. ಎಲ್ಲದಕ್ಕೂ ಇದೆ ವಿಶಿಷ್ಟ ಇತಿಹಾಸ. ಅಂದಹಾಗೆ ಕಲ್ಲಿನ ರಥ (Stone Chariot) ಇರೋದು ಹಂಪಿಯಲ್ಲ (Hampi Stone Chariot) ಮಾತ್ರ ಎಂದು ನೀವಂದ್ಕೊಂಡಿದ್ರೆ ಖಂಡಿತಾ ಅಲ್ಲ, ಮಲೆನಾಡಿನ ಈ ಭವ್ಯ ಕಲ್ಲಿನ ರಥದ ಬಗ್ಗೆ ಹೆಚ್ಚಿನವರಿಗೆ ತಿಳಿದೇ ಇಲ್ಲ.
ಉತ್ತರ ಕನ್ನಡದ ಶಿರಸಿಯ ಸೋಂದೆಯಲ್ಲಿ ಕಾಣಸಿಗೋ ಈ ಕಲ್ಲಿನ ರಥ ವಿಶಿಷ್ಟಪೂರ್ಣವೂ ಆಗಿದೆ. ಜೊತೆಗೆ ಸುದೀರ್ಘ ಇತಿಹಾಸವನ್ನೂ ಹೊಂದಿದೆ. ಇಂದಿಗೂ ಈ ಕಲ್ಲಿನ ರಥಕ್ಕೆ ಮೂರು ಗಾಲಿಗಳಷ್ಟೇ ಇದ್ದು, ಅದರಲ್ಲಿರೋ ದೇವರಿಗೆ ಸದಾ ಪೂಜೆ ನಡೆಯುತ್ತದೆ.
ದುಷ್ಟ ಸಂಹಾರಕ್ಕೆ ಚಕ್ರ ಬಳಕೆ
ವಾದಿರಾಜರ ಆಜ್ಞೆಯಂತೆ ಉತ್ತರ ಬದರಿಗೆ ಹೋದ ಅವರ ಶಿಷ್ಯ ಭೂತರಾಜರು ಇಡೀ ಕಲ್ಲಿನ ತೇರಿನ ಸಮೇತ ರಥಸ್ಥ ರಮಾ ತ್ರಿವಿಕ್ರಮ ದೇವರನ್ನು ಆಕಾಶ ಮಾರ್ಗದಿಂದ ತೆಗೆದುಕೊಂಡು ಬಂದರು. ಹೀಗೆ ಬರಬೇಕಾದ್ರೆ ಅವರ ಕಾರ್ಯಕ್ಕೆ ದೈತ್ಯನೊಬ್ಬ ಅಡ್ಡಿ ಉಂಟುಮಾಡಿದನು. ದುಷ್ಟನ ಸಂಹರಿಸಲು ಭೂತರಾಜರು ರಥದ ನಾಲ್ಕನೇ ಚಕ್ರವನ್ನೇ ಬಳಸಿಕೊಂಡರು.
ರಮಾ ತ್ರಿವಿಕ್ರಮರ ಪ್ರತಿಷ್ಠಾಪನೆ
ಅದಾಗಲೇ ಇಲ್ಲಿ ದೇವಸ್ಥಾನ ನಿರ್ಮಾಣವಾಗಿತ್ತು. ಆದ್ರೆ ಮೂರು ಚಕ್ರದ ತೇರು ಇದು ಭಗವತ್ಸಂಕಲ್ಪ ಎಂದು ಅರಿತ ಯತಿವರ್ಯರು ದೇವಾಲಯದಲ್ಲಿ ರಮಾತ್ರಿವಿಕ್ರಮರನ್ನು ಪ್ರತಿಷ್ಠಾಪಿಸಿ ಮುಂದೆ ರಥವನ್ನು ತೀರ್ಥಮಂಟಪದ ರೀತಿ ಜೋಡಿಸಲಿಕ್ಕೆ ತಿಳಿಸಿದರು. ಈಗಲೂ ಆ ರಥ ಹಾಗೆಯೇ ಇದೆ. ರಥಕ್ಕೆ ಮೂರೇ ಚಕ್ರಗಳಿವೆ. ರಥಕ್ಕೆ ಯಾವುದೇ ರೀತಿಯ ಮುಕುಟವಿಲ್ಲ, ಧ್ವಜವಿಲ್ಲ. ಚಪ್ಪಟೆಯಾಕಾರಾದ ಚತುರಾಶ್ರ ಗರ್ಭಗೃಹದ ಮಾದರಿಯಲ್ಲಿದೆ. ಈಗ ರಮಾದೇವಿಯನ್ನು ಅಲ್ಲಿಟ್ಟು ಪೂಜಿಸುತ್ತಿದ್ದಾರೆ.
ಹಲ್ಲಿ ಕೊಂದ ಪಾಪಕ್ಕೆ ಪರಿಹಾರ
ದೇವಾಲಯದ ಸುತ್ತಲೂ ವಿಜಯನಗರ ಕಾಲದ ಶಿಲ್ಪಕಲಾ ರಚನೆಯಿದ್ದು ಕಂಚಿ ವರದರಾಜ ಸ್ವಾಮಿ ದೇಗುಲದ ಹಾಗೆ ಇಲ್ಲಿಯೂ ಹಲ್ಲಿಯನ್ನು ಊರ್ಧ್ವವಾಗಿ ಕೆತ್ತಲಾಗಿದೆ. ಅದನ್ನು ಮುಟ್ಟಿದರೆ ಹಲ್ಲಿ ಕೊಂದ ಪಾಪಕ್ಕೆ ಪರಿಹಾರವಾಗುತ್ತದೆ ಅನ್ನೋ ನಂಬಿಕೆಯಿದೆ. ಎದುರುಗಡೆ ಸುಮಾರು 40 ಅಡಿ ಎತ್ತರದ ಗರುಡಗಂಭವಿದೆ.
ಇದನ್ನೂ ಓದಿ: Uttara Kannada: ಕಾರವಾರದಲ್ಲಿ ಕೊರಗಜ್ಜ, ದೈವದ ಜೀವನ ಚರಿತ್ರೆ ನೋಡಿ
ಪ್ರತಿದಿನ ಭೂತಬಲಿ
ದೇವಾಲಯದ ಸುತ್ತಲೂ ಕೂಡ ಪ್ರಾಣಿಗಳ, ದೇವರ, ಪರಿವಾರ ದೇವತೆಗಳ ಉಬ್ಬು ಶಿಲ್ಪವಿದೆ. ಹೊರಗಡೆ ಭೂತಬಲಿ ಕಟ್ಟೆ ಇದ್ದು ಅದು ಸೋಂದಾ ಕ್ಷೇತ್ರದ ಪರಿಪಾಲಕ ಶ್ರೀ ಭೂತರಾಜರಿಗೆ ಗೌರವ ಸಲ್ಲಿಸುವ ಸನ್ನಿಧಿಯಾಗಿದೆ. ಪ್ರತಿ ಸಂಜೆಯೂ ವೈಭವೋಪೇತ ಭೂತಬಲಿ ಕಾರ್ಯಕ್ರಮ ಇಲ್ಲಿ ಜರುಗುತ್ತದೆ.
ಇದನ್ನೂ ಓದಿ: Uttara Kannada: ಈ ಹಳ್ಳಿ ಸಂಸ್ಥೆ 6 ತಿಂಗಳಿಗೆ 15 ಲಕ್ಷ ವಹಿವಾಟು ನಡೆಸುತ್ತೆ!
ಈ ಕ್ಷೇತ್ರಕ್ಕೆ ಹೀಗೆ ಸಾಗಿ ಬನ್ನಿ
ಸೋಂದಾಕ್ಕೆ ಬರಬೇಕೆಂದರೆ ಶಿರಸಿಗೆ ಬಂದು ಸೋಂದಾ ಬಸ್ ಹತ್ತಿ ಕೇವಲ 20 ಕಿಲೋಮೀಟರ್ಗಳ ಪ್ರಯಾಣವಷ್ಟೇ. ಬೆಳಿಗ್ಗೆಯಿಂದ ಸಾಯಂಕಾಲರ ವರೆಗೆ ಬಸ್ಸಿನ ವ್ಯವಸ್ಥೆಯಿದೆ. ಹೀಗೆ ಬಂದರೆ ಸೋಂದಾದ ಈ ಮೂರು ಚಕ್ರದ ಕಲ್ಲಿನ ರಥವನ್ನ ಕಣ್ತುಂಬಿಕೊಳ್ಳಬಹುದಾಗಿದೆ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ, ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ