ಯಲ್ಲಾಪುರ: ನೀರಿನಿಂದ ತುಂಬಿರೋ ಸರೋವರ, ದಡದಲ್ಲಿ ಊರು ಕಾಯೋ ದುರ್ಗಾ ಮಾತೆ. ಪುರಾಣ ಪ್ರಸಿದ್ಧ ಕ್ಷೇತ್ರವೂ ಹೌದು, ಅಚ್ಚರಿಯ ನಿಸರ್ಗ ಸಿರಿ ಹೊಂದಿದ ಪುಣ್ಯ ಸ್ಥಳವೂ ಹೌದು. ಹಾಗಿದ್ರೆ ಯಾವುದಿದು ದೇಗುಲ? (Kavadikere Temple) ಏನೀ ಸರೋವರ ವಿಶೇಷತೆ ಅನ್ನೋದನ್ನ ನಾವ್ ಹೇಳ್ತೀವಿ ನೋಡಿ. ನೂರಾರು ಜೈವಿಕ ಚಟುವಟಿಕೆಗಳಿಗೆ ತಾಣವಾದ, ಪಶ್ಚಿಮ ಘಟ್ಟಗಳಿಂದ (Temple's In Western Ghats) ಆವೃತವಾದ ಹಾಗೂ ಭಕ್ತರ ಅಭೀಷ್ಟ ತೀರಿಸುವ ಈ ತಾಣದ ಹೆಸರು ಕವಡಿಕೆರೆ (Kavadikere).
ಇದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ವ್ಯಾಪ್ತಿಯ ಪುರಾಣ ಪ್ರಸಿದ್ಧ ತಾಣ. ಇಲ್ಲಿರೋ ದುರ್ಗಾಪರಮೇಶ್ವರಿ ದೇವಾಲಯವು ಅರಸಿ ಬರುವ ಭಕ್ತರ ಇಷ್ಟಾರ್ಥ ಈಡೇರಿಸುವ ತಾಯಿಯಾಗಿ ನೆಲೆ ನಿಂತಿದ್ದಾಳೆ. ಇಲ್ಲಿರೋ ಕೆರೆಯಿಂದಾಗಿ ಇಲ್ಲಿಗೆ ಕವಡಿಕೆರೆ ಅನ್ನೋ ಹೆಸರು ಬಂದಿದೆ ಅನ್ನೋ ನಂಬಿಕೆಯಿದೆ. 60 ಎಕರೆಯಲ್ಲಿರೋ ಈ ಕೆರೆಯನ್ನ ಭೀಮನು ನಿರ್ಮಿಸಿದ್ದಾಗಿ ಐತಿಹ್ಯವಿದೆ.
ನಂಬಿಕೆಯೇ ರೋಚಕ
ಪಾಂಡವರು ವನವಾಸದಲ್ಲಿದ್ದಾಗ ಭೀಮನು ತನ್ನ ಪರಿವಾರಕ್ಕೆ ಹಣ್ಣು-ಹಂಪಲನ್ನು ಹುಡುಕಲು ಈ ಜಾಗಕ್ಕೆ ಬರುತ್ತಾನೆ. ಆಗ ಭೀಮನಿಗೆ ನೀರಿನ ಸೆಲೆ ಇಲ್ಲದ ದಟ್ಟ ಕಾನನದಲ್ಲಿ ಇಂಪಾದ ಸಂಗೀತ ಕೇಳಿ ಬರುತ್ತಿತ್ತು. ಆಗ ಅದನ್ನು ಹಿಂಬಾಲಿಸಿ ಹೊರಟ ಭೀಮನಿಗೆ ಜಗಜ್ಜನನಿ ದುರ್ಗೆಯ ಮೂರ್ತಿ ಕಂಡುಬರುತ್ತದೆ. ಬಹುಕಾಲದಿಂದ ಅಭಿಷೇಕ ಇತ್ಯಾದಿಗಳು ಕಾಣದ ದೇವಿಯು ತನ್ನ ಭಕ್ತನಾದ ಭೀಮನಿಗೆ ಕವಡೆಯಲ್ಲಿ ಗಂಗೆಯನ್ನು ತಂದು ಪ್ರತಿಷ್ಠಾಪಿಸು ಎಂದಳಂತೆ.
ಕವಡೆ ನೀರಿನಿಂದ ತುಂಬಿದ ಕೆರೆ!
ಭೀಮ ಹೆಬ್ಬೆರಳಿನಿಂದ ಈ ಜಾಗ ಅಗೆದು ನಂತರ ಕವಡೆಯಲ್ಲಿ ಗಂಗಾಜಲ ತಂದು ಇಲ್ಲಿ ಹಾಕಿದ ತಕ್ಷಣ ಎಂದೂ ಬತ್ತದ ಈ ಕೆರೆ ನಿರ್ಮಾಣವಾಯಿತು. ಅದರಿಂದ ಭೀಮನು ದೇವಿಗೆ ಅಭಿಷೇಕ ಮಾಡಿದ ಎಂಬ ಪ್ರತೀತಿಯಿದೆ. ಜೊತೆಗೆ ಈ ಸರೋವರಕ್ಕೆ ಕವಡಿಕೆರೆ ಅನ್ನೋ ಹೆಸರು ಇಲ್ಲಿಗೆ ಬರಲು ಆ ಘಟನೆಯು ಸಾಕ್ಷಿಯಾಯಿತು ಎಂದು ನಂಬಲಾಗಿದೆ.
ಇದನ್ನೂ ಓದಿ: Uttara Kannada: ಇವರ ಮನೆಯಲ್ಲೇ ಪರಿವಾರ ಸಮೇತ ನೆಲೆಸಿದ್ದಾನೆ ಶ್ರೀರಾಮ!
ಇಲ್ಲಿ ಪ್ರತಿ ದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ವರೆಗೆ ಮತ್ತು ಸಂಜೆ 6 ರಿಂದ ರಾತ್ರಿ 9 ವರೆಗೆ ತ್ರಿಕಾಲ ಪೂಜೆ ಮಾಡಲಾಗುತ್ತದೆ. ಸುತ್ತಮುತ್ತಲಿನ ಎಲ್ಲಾ ಜನರೂ ಸೇರಿದಂತೆ ಇಡೀ ರಾಜ್ಯದ ಜನರು ಭಕ್ತಿಯಿಂದ ನಡೆದುಕೊಳ್ಳುವ ಶಾಕ್ತ ಕ್ಷೇತ್ರಗಳಲ್ಲಿ ಇದೂ ಒಂದು. ಇಲ್ಲಿ ದೇವಿಗೆ ಭಕ್ತಿಯಿಂದ ಕೈ ಮುಗಿದರೆ ಸಾಕು ಎಷ್ಟೋ ಕಷ್ಟಗಳಿಗೆ ಪರಿಹಾರ ಸಿಗುತ್ತದೆ.
ಇದನ್ನೂ ಓದಿ: Jodukere Hanuman: ಜೋಡುಕೆರೆಯ ಮಾರುತಿಯ ಜೋಪಾನ ಮಾಡುತ್ತಿರುವ ತಾಯಂದಿರು!
ದೇವಿಯ ದರ್ಶನಕ್ಕೆ ಹೀಗೆ ಬನ್ನಿ (ಚಿತ್ರಕೃಪೆ: ಗೂಗಲ್ ಮ್ಯಾಪ್ಸ್)
ಇಲ್ಲಿಗೆ ಬರಬೇಕಾದ್ರೆ, ಯಲ್ಲಾಪುರಕ್ಕೆ ಆಗಮಿಸಿ ಅಲ್ಲಿಂದ ಇಲ್ಲಿಗೆ ದಿನವೂ ಮೂರು ನಾಲ್ಕು ಬಸ್ಸುಗಳು ಓಡಾಡುತ್ತವೆ. ಶ್ರೀ ಕ್ಷೇತ್ರದ ಬಸ್ ಸ್ಟ್ಯಾಂಡ್ನಿಂದ ದೇವಾಲಯಕ್ಕೆ ಹೋಗಲು ಒಂದು ಕಿಲೋಮೀಟರ್ ನಡೆದು ಸಾಗಬೇಕಷ್ಟೇ. ಹಾಗಾಗಿ ಯಲ್ಲಾಪುರಕ್ಕೆ ಹೋದ್ರೆ ಈ ಕ್ಷೇತ್ರವನ್ನ ಮಿಸ್ ಮಾಡದಿರಿ.
ವರದಿ: ಎ.ಬಿ. ನಿಖಿಲ್, ಮುಂಡಗೋಡ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ