ಉತ್ತರ ಕನ್ನಡ: ಪ್ರಶಾಂತವಾದ ವಾತಾವರಣದಲ್ಲಿ ಕಂಡು ಬರೋ ಪುಟ್ಟದಾದ ಗಣಪತಿ ದೇಗುಲ. ಇನ್ನೊಂದೆಡೆ ಶಿವನೂ (Lord Shiva) ನೆಲೆಸಿರೋ ಅಪರೂಪದ ತಾಣ.. ಇಲ್ಲಿರೋ ವಿಘ್ನ ವಿನಾಯಕನೂ (Ganapati Temple) ವಿಶಿಷ್ಟ ಗುಣಭಾವವನ್ನ ಹೊಂದಿದ್ದಾನೆ. ಜೊತೆಗೆ ಇದು ಶಿವ, ಗಣಪನ ಸಂಯುಕ್ತ ಕ್ಷೇತ್ರವೂ ಆಗಿದ್ದು, ವಿನಾಯಕೇಶ್ವರ ದೇಗುಲವೆಂದೇ (Vinayakeshwara Temple) ಪ್ರಸಿದ್ಧಿ ಪಡೆದಿದೆ.
ಅಪರೂಪದ ವಿನಾಯಕ ಕ್ಷೇತ್ರ
ಯೆಸ್, ಇಂತಹ ಅಪರೂಪದ ದೇಗುಲ ಕಂಡು ಬರೋದು ಉತ್ತರ ಕನ್ನಡದ ಸಿದ್ದಾಪುರದ ಇಟಗಿಯ ಕಲಗದ್ದೆಯಲ್ಲಿ. ಇಲ್ಲಿರೋ ಗಣೇಶ ಮತ್ತೆಲ್ಲೂ ಕಾಣಸಿಗದು. ಹಾಗಾಗಿಯೇ ಇದನ್ನ ಅಪರೂಪದ ವಿನಾಯಕ ಕ್ಷೇತ್ರ ಎಂದೇ ಕರೆಯಲಾಗುತ್ತೆ. ಏಕೆಂದರೆ ಇಲ್ಲಿರೋ ಗಣಪ ಯಕ್ಷವೇಷ ಸಹಿತ ಷಡ್ಬಾಹು ಗಣೇಶ. ಇಂತಹ ವಿಶಿಷ್ಟ ರೂಪದ ಗಣೇಶ ಮತ್ತೆಲ್ಲೂ ನೋಡಲು ಸಿಗೋದಿಲ್ಲ. ಜೊತೆಗೆ ಶಿವನೂ ಇಲ್ಲಿ ನೆಲೆಸಿದ್ದು, ಶಿವ, ಗಣಪ ಭಕ್ತರ ಆರಾಧ್ಯ ಕ್ಷೇತ್ರವಾಗಿದೆ.
ನದಿಯಲ್ಲಿ ಸಿಕ್ಕ ಕಲ್ಲು
ಇಲ್ಲಿನ ವಿಶ್ವಸ್ಥರಾದ ವಿನಾಯಕ ಹೆಗಡೆಯವರಿಗೆ ಐದನೇ ವರ್ಷವಿದ್ದಾಗ ಮನೆಯ ಪಕ್ಕದ ಸೋಮನದಿಯಲ್ಲಿ ಅವರಿಗೆ ಒಂದು ಕಲ್ಲು ಸಿಕ್ಕಿತ್ತಂತೆ. ಅದನ್ನು ಬಾಲಪ್ರಜ್ಞೆಯಿಂದ ಅವರು ಪೂಜಿಸುತ್ತಾ ಬಂದಿದ್ದಾರೆ. ಕಾಲಾಂತರದಲ್ಲಿ ಅದಕ್ಕೆ ಸೊಂಡಿಲು ಮೂಡಿತಂತೆ! ಆಗ ದೈವಜ್ಞರ ಮೊರೆ ಹೋದಾಗ ಅದು ಗಣೇಶ ಎಂದೂ ಅದನ್ನು ನೀನೇ ಪೂಜಿಸಬೇಕೆಂದು ಹೇಳಿದರಂತೆ. ಆಗಿಂದ ಆರಂಭವಾದ ಪೂಜೆ ಯಾವತ್ತೂ ನಿಂತಿರಲಿಲ್ಲ.
ದೇವರ ಪ್ರತಿಷ್ಠಾಪನೆ ಆದೇಶ
ಯಕ್ಷಗಾನ ಕಲಿಯಲು ಗುಣವಂತೆಗೆ ಹೋದ ವಿನಾಯಕ ಅವರು ಒಂದು ದಿನ ನೆರೆ ಉಕ್ಕಿದಾಗ ಮನೆಗೆ ಬಂದರು, ನೋಡಿದಾಗ ಹಲವಾರು ವರ್ಷಗಳ ಮರ ಕೊಚ್ಚಿಕೊಂಡು ಹೋದರೂ ಆ ವಿಗ್ರಹ ಮಾತ್ರ ಹಾಗೇ ಇತ್ತಂತೆ. ಕೊನೆಗೆ ಅದರಿಂದ ಆಶ್ಚರ್ಯಗೊಂಡು ಪ್ರಶ್ನಾ ಚಿಂತನೆ ನಡೆಸಿದಾಗ ಗಣಪತಿಯನ್ನು ಪ್ರತಿಷ್ಠಾಪಿಸಿ ವಿನಾಯಕ ಹೆಗ್ಡೆಯವರು ಪೂಜಿಸಬೇಕೆಂಬ ಆದೇಶವಾಯಿತು.
ಷಡ್ಬಾಹು ಗಣಪ
ದೀವಗಿ ರಮಾನಂದ ಅವಧೂತರೊಂದಿಗೆ ಸತತ ಒಂದು ಮಂಡಲ ಅಂದರೆ ನಲವತ್ತೆಂಟು ದಿನ ಗಣಹೋಮ ನಡೆಸಿ ಪ್ರತಿಷ್ಠಾಪನೆ ಮಾಡುವಾಗ ಯಾಕೋ ಸರಿ ಹೋಗಲಿಲ್ಲ ಎಂದು ಅಷ್ಟಮಂಗಳವಿಟ್ಟರಂತೆ. ಆಗ ಅಪರೂಪದ ಘಟನೆಯೊಂದು ನಡೆಯಿತಂತೆ. ಗಣಪತಿಯನ್ನು ಆರು ಕೈಗಳೊಂದಿಗೆ ಪ್ರತಿಷ್ಠಾಪಿಸಲ್ಪಡಬೇಕೆಂದೂ, ಅದರ ಜೊತೆ ಶಿವರೂಪ ಮೂರ್ತಿ ಇರಬೇಕೆಂದು ತಿಳಿಸಲಾಯಿತು. ಅಲ್ಲಿಂದ ಷಡ್ಬಾಹು ಗಣೇಶನ ಪ್ರತಿಷ್ಠೆಯಾಯಿತು. ಅದಷ್ಟೇ ಅಲ್ಲ ಇಲ್ಲಿ ಪ್ರಶ್ನೆ ಇಟ್ಟರೆ ಹೂ ನೀಡುವ ಮೂಲಕ ಉತ್ತರಿಸುವ ಗಣೇಶನೀತ ಎಂಬ ನಂಬಿಕೆಯೂ ಭಕ್ತರದ್ದಾಗಿದೆ.
ಇದನ್ನೂ ಓದಿ: Shigehalli Ganapati Temple: ಭಕ್ತರ ಜೊತೆ ಮಾತನಾಡ್ತಾನಂತೆ ಬಯಲಲ್ಲೇ ನೆಲೆಸಿರುವ ಈ ಬಂಡೆ ಗಣಪ!
ಯಕ್ಷಗಾನದ ಪ್ರತಿಫಲ
ಸಂಕಷ್ಟಿ, ಮಂಗಳವಾರ, ವಿಶೇಷ ದಿನಗಳು , ಭಾದ್ರಪದ ಮಾಸದ ಚತುರ್ಥಿಯಂದು ರಥೋತ್ಸವ ಆಗುತ್ತದೆ. ಲಕ್ಷ, ಸಹಸ್ರ ನಾರಿಕೇಳ ಸಹಿತ ಗಣಹೋಮದ ಜೊತೆ ದಿನವೂ ಗಣ ಹವನ ನಡೆಸಲಾಗುತ್ತದೆ. ಇಲ್ಲಿ ಯಕ್ಷಗಾನ ನೋಡಿದರೆ, ಮಾಡಿದರೆ, ಮಾಡಿಸಿದರೆ ಕಷ್ಟ ಪರಿಹಾರ ಎಂಬ ಪ್ರತೀತಿ ಇದೆ.
ಇದನ್ನೂ ಓದಿ: Uttara Kannada: ಬಡವರಿಗೆ ಬಂಗಾರ ನೀಡುವ ಗ್ರಾಮ ದೇವತೆ ಈಕೆ! ವರ್ಷಕ್ಕೆ 3 ತಿಂಗಳಷ್ಟೇ ದರ್ಶನ ಭಾಗ್ಯ!
ಹೀಗೆ ಸಾಗಿ ಬನ್ನಿ
ದಿನವೂ ಜನಜಂಗುಳಿ ಇರುವ ದೇವಾಲಯವಿದು ಹಾಗಂತ ಇಲ್ಲಿ ಬರೋದು ಅಷ್ಟು ಸುಲಭ ಅಲ್ಲ. ಸಿದ್ದಾಪುರದ ಬಸ್ ನಿಲ್ದಾಣದಲ್ಲಿ ಆಲಳ್ಳಿ ಕ್ರಾಸಿಗೆ ಇಳಿದು ಎರಡು ಕಿಲೋಮೀಟರ್ ಭಕ್ತಿಯಿಂದ ನಡೆಯಬೇಕು. ಸ್ವಂತ ವಾಹನವಿದ್ದರೆ ತೊಂದರೆಯಿಲ್ಲ. ದಟ್ಟಾರಣ್ಯದಲ್ಲಿ ಹರಿಯುವ ನೀರಿನ ಬದಿ ರಾಜಾಸನದಲ್ಲಿ ಕುಳಿತಿರುವ ಮಹಾಗಣೇಶನನ್ನು ಕಣ್ತುಂಬಿಕೊಳ್ಳೋದೆ ಒಂದು ಚೆಂದ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್, ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ