ದಾಂಡೇಲಿ: ಎಲ್ಲಿ ನೋಡಿದ್ರಲ್ಲಿ ಎತ್ತುಗಳ ಜಂಗುಳಿ. ಇದೇನಪ್ಪ ಇಲ್ಲೇನಾದ್ರೂ ಎತ್ತುಗಳ ಓಟದ ಸ್ಪರ್ಧೆ ನಡೆಯುತ್ತಿದೆಯಾ? ಅಥವಾ ಎತ್ತುಗಳ ಜಾತ್ರೆ ನಡೀತಾ ಇದ್ಯಾ ಅಂತನಿಸೋ ವಾತಾವರಣ. ಆದ್ರೆ ಅಂತಹ ಯಾವುದೇ ಸ್ಪರ್ಧೆನೂ ಇಲ್ಲ, ಎತ್ತುಗಳ ಉತ್ಸವನೂ ಇಲ್ಲ. ಆದ್ರೆ ಈ ಎತ್ತುಗಳ (Bullock Cart) ಜಂಗುಳಿ ಕಂಡುಬಂದಿದ್ದು ಮಾತ್ರ ಚೆನ್ನಬಸವೇಶ್ವರ ಜಾತ್ರೆಯಲ್ಲಿ (Ulavi Jatre).
ಯೆಸ್, ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲೂಕಿನ ಉಳವಿ ಗ್ರಾಮದ ಚೆನ್ನಬಸವೇಶ್ವರ ಜಾತ್ರೆ ಅಂದ್ರೆ ಸಂಭ್ರಮವೋ ಸಂಭ್ರಮ. ಅದೆಷ್ಟೋ ದೂರ ದೂರಿನಿಂದ ಆಗಮಿಸುವ ಚೆನ್ನಬಸವೇಶ್ವರ ಭಕ್ತರು ಇಂದಿಗೂ ಎತ್ತಿನ ಗಾಡಿಯನ್ನೇ ಅವಲಂಬಿಸಿದ್ದಾರೆ.
ಚಕ್ಕಡಿಗಾಡಿನೇ ಒಂಥರಾ ಪ್ರತಿಷ್ಠೆ!
ಅದ್ರಲ್ಲೂ ಬಯಲುಸೀಮೆಯ ಮಂದಿಯಂತೂ ಈ ಚಕ್ಕಡಿಗಾಡಿಯಲ್ಲಿ ಬರೋದು ಫೋಸು ನೋಡಲೇಬೇಕು. ಈ ಜಾತ್ರೆಗೆ ಬರೋರಿಗೆ ಚಕ್ಕಡಿಗಾಡಿ ಅಂದ್ರೆ ಅದೇನೋ ಪ್ರತಿಷ್ಠೆ ಇದ್ದಂತೆ. ಈ ದೇಗುಲವು ಉತ್ತರ ಕನ್ನಡ ಹಾಗೂ ಬಯಲುಸೀಮೆಗೆ ಸಂಪರ್ಕ ಕೊಂಡಿಯಿದ್ದಂತೆ.
ನೂರಾರು ಕಿಲೋ ಮೀಟರ್ ದೂರದಿಂದ ಪಯಣ!
ಮಹಾನ್ ಮಾನವತಾವಾದಿ ಬಸವಣ್ಣನವರ ಅಳಿಯನಾಗಿರುವ ಚೆನ್ನಬಸವೇಶ್ವರರು ತಮ್ಮ ಬಹುಪಾಲು ಜೀವನ ಈ ಜೋಯಿಡಾದಲ್ಲಿ ಕಳೆದವರು. ಹಾಗಾಗಿ ಇಲ್ಲಿನ ಜಾತ್ರಾ ಸಂಭ್ರಮಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಸೊಲ್ಲಾಪುರ, ಮಹಾರಾಷ್ಟ್ರ, ಗೋವಾದ ಭಕ್ತರು ಆಗಮಿಸುವುದು ವಾಡಿಕೆ. ಹೀಗೆ 300-400 ಕಿಲೋಮೀಟರ್ ದೂರದಿಂದ ಚಕ್ಕಡಿ ಮೂಲಕ ಬಂದು ಅನ್ನ ದಾಸೋಹ ಮಾಡಿ ನಂತರ ದೇವರ ಸೇವೆ ನೀಡಿ ನಾಲ್ಕು ದಿನಗಳಲ್ಲಿ ತಮ್ಮೂರನ್ನು ತಲುಪುತ್ತಾರೆ.
ಇದನ್ನೂ ಓದಿ: Uttara Kannada: ಚೆಂದುಳ್ಳಿ ಚೆಲುವೆಯರ ಕ್ಯಾಟ್ ವಾಕ್! ಮಿಸ್ ಶಿರಸಿ ಆದ ಸುಂದರಿ ಇವ್ರೇ!
ಜೋಯಿಡಾದ ಈ ಕಾಡು ಹುಲಿ, ಕಾಡುಮಿಕ, ಆನೆ, ಚಿರತೆಗಳ ತಾಣ. ಆದ್ರೂ ಈ ಜನ ಹೆದರದೇ ರಸ್ತೆ ತುಂಬಾ ಹರಹರ ಮಹಾದೇವ ಎಂಬ ಉದ್ಘೋಷವನ್ನು ಮಾಡುತ್ತಾ ಸಾಗಿ ಬರುತ್ತಾರೆ. ಜಾತ್ರೆಯ ಮೊದಲು ಸ್ಥಳೀಯರು ಇವರಿಗೆ ನೀರು, ಪಾನಕ, ಮಜ್ಜಿಗೆ ಕೊಟ್ಟು ಸ್ವಾಗತಿಸುತ್ತಾರೆ.
ಇದನ್ನೂ ಓದಿ: Aghanashini Aarti: ಕಾಶಿಯ ಗಂಗಾರತಿಯಂತೆಯೇ ಕುಮಟಾದಲ್ಲಿ ನಡೆಯಿತು ಅಘನಾಶಿನಿ ಆರತಿ!
ಸಂಪ್ರದಾಯ ಪಾಲನೆ ಅಂದ್ರೆ ಇದು!
"ನಮ್ಮುವ ಗಟ್ಟುಳ್ಳ ಎತ್ರೀ ಈ ಚೆನ್ ಬಸಣ್ಣನ ಆಶೀರ್ವಾದ ಇದ್ರ್ ಸಾಕ್ ನಾವ್ ಎಂತಾ ಅಡವ್ಯಾಗಾದ್ರೂ ಬರ್ತೇವಿ‘‘ ಅನ್ನೋ ಇವರು ನಿಜಕ್ಕೂ ಧೈರ್ಯವಂತರು. ಆಧುನಿಕ ಕಾಲದಲ್ಲಿ ಎಂತೆಂತ ವಾಹನಗಳಿದ್ರೂ ಸಂಪ್ರದಾಯ ಪಾಲಿಸುವ ಇವರದ್ದು ಒಂಥರಾ ಖುಷಿಯ ಬದುಕು ಕೂಡಾ.
ವರದಿ: ಎ.ಬಿ.ನಿಖಿಲ್, ನ್ಯೂಸ್ 18 ಕನ್ನಡ ಡಿಜಿಟಲ್ ಉತ್ತರ ಕನ್ನಡ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ