ಉತ್ತರ ಕನ್ನಡ: ನೆಲವೇ ಕಾಣದಂತೆ ಹಾಸಿದ ನಿಗಿ ನಿಗಿ ಕೆಂಡ. ಕೆಂಡವನ್ನು ಹಾಯುತ್ತಾ ಭಕ್ತಿಯ ಪರಾಕಾಷ್ಠೆ ತಲುಪಿದ ಭಕ್ತರು. ಜನರೆಲ್ಲರ ಭಕ್ತಿಯ ಕೂಗಿನ ನಡುವೆ ದೈವ ಪರಿಚಾರಕರ ಮೇಲೆ ದೈವ ಆಹ್ವಾನ. ಹೀಗೆ ಅಹೋರಾತ್ರಿಯ ವೈಭೋಗ, ಆರಾಧನೆ ಉತ್ತರ ಕನ್ನಡದ (Uttara Kannada News) ಹೊನ್ನಾವರ (Honnavar Bandi Habba) ಗಡಿಭಾಗದಲ್ಲಿ ನಡೆದ ಬಂಡಿ ಹಬ್ಬದಲ್ಲಿ (What Is Bandi Habba) ಕಾಣಲು ಸಾಧ್ಯವಾಯಿತು.
ಯೆಸ್, ಚಂದಾವರ ಸೀಮೆಯ ಕೆಕ್ಕಾರಿನಲ್ಲಿ ನಡೆದ ಬಂಡಿ ಹಬ್ಬ ಭಾರೀ ಸಂಖ್ಯೆಯ ಜನರ ಆಗಮನಕ್ಕೆ ಸಾಕ್ಷಿಯಾಯಿತು. ಬಂಡಿ ಹಬ್ಬಕ್ಕೆ ನಿರ್ದಿಷ್ಟ ಹಿನ್ನೆಲೆ ಇಲ್ಲದಿದ್ದರೂ, ಊರಿನ ಜನರೆಲ್ಲಾ ಸೇರಿ ಊರಿನ ದೇವರಿಗೆ ಬಲಿ ಸೇರಿದಂತೆ ಅನೇಕ ದೇಹ ದಂಡನೆಯ ಸೇವೆಯನ್ನು ಸ್ವಇಚ್ಛೆಯಿಂದ ಮಾಡುತ್ತಾರೆ.
ಮಾಸ್ತಿ ಕೆಂಡ
ಅಹೋರಾತ್ರಿ ಉಪವಾಸ, ಹುಲಿಯಾಟ, ಎಣ್ಣೆಬೂಳ್ಯ, ಮಾಸ್ತಿಕೆಂಡ ಇವೆಲ್ಲಾ ದೈವಗಳಿಗೆ ಸಲ್ಲುವ ವಿಧಿಗಳಾದರೆ ಕೋಳಿ ಬಲಿಯ ಘಮಲು ಊರೆಲ್ಲ ಹಮ್ಮಿರುತ್ತದೆ. ಇನ್ನು ಮಾಸ್ತಿ ಕೆಂಡದ ದಿನವಂತೂ ನೆಲ ಕಾಣದ ಹಾಗೆ ಹಾಸಿದ ನಿಗಿನಿಗಿ ಕೆಂಡ ಸೇವೆಯನ್ನು ಹರಕೆ ಹೊತ್ತವರು, ದೈವ ಪರಿಚಾರಕರು ನೆರವೇರರಿಸುತ್ತಿದ್ರೆ ಮೈ ಜುಮ್ ಎನ್ನುವಂತಿತ್ತು.
ದೈವದ ಆವಾಹನೆ!
ಹೀಗೆ ಸುಮಾರು ಹೊತ್ತು ಮಾಸ್ತಿ ಕೆಂಡ ಹಾಯುವ ವಿಧಿವಿಧಾನಗಳು ನಡೆದವು. ಕೊನೆಗೆ ಕಳಸದೊಂದಿಗೆ ಗ್ರಾಮದೇವಿ ದುರ್ಗಾಳ ರೂಪವಾದ ಕಳಸ ದೈವವನ್ನು ಹೊತ್ತ ಪರಿಚಾರಕ ಗುನಗರು ಕೆಂಡ ಹಾಯ್ದರು. ಆಗ ಮೈ ಮೇಲೆ ದೈವದ ಆವಾಹನೆಯಾಗಿ ಆವೇಶದಿಂದ ಪರಿಚಾರಕರು ತಮ್ಮ ನಿಯಂತ್ರಣ ಕಳೆದುಕೊಂಡರು.
ಇದನ್ನೂ ಓದಿ: Gokarna: ಗೋಕರ್ಣದಲ್ಲಿ ಸಮರ್ಥ ರಾಮದಾಸರ ಪಾದುಕೆ, ಇವುಗಳ ಮಹತ್ವ ತಿಳಿದುಕೊಳ್ಳಿ
ಕಟ್ಟುನಿಟ್ಟಿನ ಹಬ್ಬ
ಬಂಡಿಹಬ್ಬವು ವರ್ಷಾವಧಿಯಲ್ಲಿ ತೆಗೆದ ದವಸ ಧಾನ್ಯಗಳ ಸುಗ್ಗಿಯ ನಂತರ, ಮುಂದಿನ ಕೃಷಿಕಾರ್ಯ ಸುಗಮವಾಗಲಿ ಎಂದು ಬಿತ್ತನೆಗೆ ಪೂರ್ವಭಾವಿಯಾಗಿ ನಡೆಯುವ ಕರಾವಳಿಯ ಅತಿದೊಡ್ಡ ಹಬ್ಬವಾಗಿದೆ.
ಮೊದಲು ಉಪವಾಸವಿದ್ದು ಕಟ್ಟು ನಿಟ್ಟಾದ ದೈವಸೇವೆಯೊಂದಿಗೆ ಶುರುವಾಗುವ ಹಬ್ಬವು ದೈವಕ್ಕೆ ಹರಕೆ ಕೋಳಿ ಅರ್ಪಿಸುವ ಮೂಲಕ ಕೊನೆಯಾಗುತ್ತದೆ. ಆ ದಿನ ಊರಿಡೀ ಕೋಳಿ ಪದಾರ್ಥದ ಘಮಲು ಕೊನೆಯ ದಿನ ಬಂದ ಬಂಧುಗಳಿಗೆ ಆತಿಥ್ಯ ನೀಡಿ ಹಬ್ಬ ಮುಗಿಸುತ್ತಾರೆ.
ಇದನ್ನೂ ಓದಿ: Vibhuti In River: ಈ ನದಿಯಲ್ಲಿ ಸಿಗುತ್ತಂತೆ ನೈಸರ್ಗಿಕ ವಿಭೂತಿ!
ಒಟ್ಟಿನಲ್ಲಿ ಬಂಡಿಹಬ್ಬವು ನಾಡಿನ ಜನರೆಲ್ಲರನ್ನು ಒಗ್ಗೂಡಿಸಿ ತಮ್ಮ ಗ್ರಾಮ ದೇವರಿಗೆ ಭಕ್ತಿ ಅರ್ಪಿಸುವ ಧಾರ್ಮಿಕ ಕಾರ್ಯವಾಗಿದ್ದು, ಜನರು ಇದನ್ನು ಭಕ್ತಿಯಿಂದ ನಡೆಸಿಕೊಂಡು ಬಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ