ಉತ್ತರ ಕನ್ನಡ: ಚಕ್ರದಂತೆ ತಿರುಗಾಡೋ ರಾಟೆ, ರಾಟೆಯಲ್ಲಿ ಕೂತ ದೈವಗಳಿಂದ ಭಕ್ತರಿಗೆ ಆಶೀರ್ವಾದ. ಸಂಭ್ರಮ, ಸಡಗರದ ನಡುವೆ ಭಾರೀ ವಿದ್ಯುತ್ ಅಲಂಕೃತಗೊಂಡ ಪ್ರಾಂಗಣದಲ್ಲಿ ನಡೆಯಿತು ಭಕ್ತಿ ಪರಾಕಾಷ್ಠೆಯ ಕಾರ್ಯಕ್ರಮ. ಇದೆಲ್ಲವೂ ಉತ್ತರ ಕನ್ನಡದ (Uttara Kannada Temples) ಕಾರವಾರದಲ್ಲಿ (Karwar) ನಡೆದ ಬಂಡಿ ಹಬ್ಬದ (Bandi Habba) ವೈಭವದ ಝಲಕ್.
ಯೆಸ್, ಬಂಡಿ ಹಬ್ಬ ಅನ್ನೋದು ಆಯಾಯ ಪ್ರದೇಶಕ್ಕನುಗುಣವಾಗಿ ನಡೆಯೋ ದೇವರ ಸೇವೆ. ಕೊಂಕಣ ಹಾಗೂ ಮಲೆನಾಡಿನ ಜನರು ತಮ್ಮ ತಮ್ಮ ದೈವ, ದೇವರು, ಕ್ಷೇತ್ರ ಪಾಲಕರಿಗೆ ನೀಡುವ ಅದ್ಧೂರಿಯ ಸೇವೆಯಾಗಿದೆ. ಅಂತಹದ್ದೇ ಒಂದು ಆಚರಣೆ ಕಾರವಾರದ ಬಾಡದ ಬಂಡಿ ಹಬ್ಬದಲ್ಲಿ ಕಂಡು ಬಂತು. ಇಲ್ಲಿ ಅಂತೂ ಭಾರೀ ವಿಜೃಂಭಣೆ ಹಾಗೂ ವಿಶಿಷ್ಟ ರೀತಿಯಲ್ಲಿ ಬಂಡಿ ಹಬ್ಬ ಆಚರಿಸಲಾಯಿತು.
ರಾಟೆಯಲ್ಲಿ ಕೂರುವ ದೈವಗಳು!
ಇಲ್ಲಿ ನಾಲ್ಕು ಪ್ರಧಾನ ದೈವ ದೇವರುಗಳು ಜನರ ನಡುವೆ ಬಂದು ರಾಟೆಯಲ್ಲಿ ಕೂತು ಜನರನ್ನು ಆಶೀರ್ವದಿಸುವ ಸಂಪ್ರದಾಯವಿದೆ. ಹರಹರ ಮಹಾದೇವ್ ಎಂಬ ಜೈಕಾರದಿಂದ ಉನ್ಮಾದಗೊಳ್ಳುವ ದೈವ ದೇವರುಗಳು ಗಂಭೀರವಾಗಿ ರಾಟೆಯ ಬಳಿ ಬಂದು ಕೂರುತ್ತವೆ. ನಾನಾ ಉಪಚಾರಗಳನ್ನು ಸ್ವೀಕರಿಸಿ ಮಹಾದೇವ, ಶೇಬಿ ದೇವರು, ಕಳಸ ದೇವರು ಹಾಗೂ ದೇವತಿ ದೈವಗಳ ರಾಟೆ ಏರಿ ಕೂರುವುದರ ಮೂಲಕ ವಿಜೃಂಭಣೆ ಇನ್ನಷ್ಟು ಜೋರಾಗುತ್ತೆ.
ಇದನ್ನೂ ಓದಿ: Idagunji Ganapati: ಮಹತೋಭಾರ ವಿನಾಯಕನ ಕ್ಷೇತ್ರ ದರ್ಶನ, ಇದು ಇಡಗುಂಜಿ ಗಣಪತಿಯ ಮಹಿಮೆ
ಬಂಡಿ ಹಬ್ಬದ ಉದ್ದೇಶ
ಬಂಡಿ ಹಬ್ಬ ಊರಿನ ಸಮೃದ್ಧತೆಯ ಸಂಕೇತ, ಊರು ಹಸನಾಗಲು ತಮ್ಮೂರಿನ ದೈವ-ದೇವರು-ಕ್ಷೇತ್ರಪಾಲರಿಗೆ ಕೊಂಕಣ-ಮಲೆನಾಡಿನ ಜನರು ನೀಡುವ ಸೇವೆ. ಮುಂದಿನ ಋತುವಿನಲ್ಲಿ ಉತ್ತಮ ಬೆಳೆ ಬರಲು ದೇವರನ್ನು ಬೇಡಿಕೊಳ್ಳುತ್ತಾರೆ. ಇಲ್ಲಂತೂ ಮೊದಲು ವಿಘ್ನ ವಿನಾಯಕ ಗಣಪತಿಯ ಸನ್ನಿಧಾನಕ್ಕೆ ಮಹಾದೇವ ಬರುತ್ತಾರೆ. ನಂತರ ಆ ಭೇಟಿಯೊಂದಿಗೆ ಕಳಸ ದೇವರು ಹಾಗೂ ಶೇಬಿ ದೇವರು ಹಾಗೂ ದೇವತಿ ದೇವರು ಹಿಂಬಾಲಕರಾಗಿ ಹೊರಡುತ್ತಾರೆ.
ರಾಟೆಯಲ್ಲಿ ಕೂತು ಆಶೀರ್ವಾದ
ರಾತ್ರಿ ಎಂಟು ಗಂಟೆಗೆ ರಾಟೆ ಕಟ್ಟೆಗೆ ಬಂದು ನಾಲ್ಕು ದೇವರುಗಳು ಆಯಾ ಪೀಠದಲ್ಲಿ ಕೂತು ಮೇಲಿಂದ ಕೆಳಗೆ, ಕೆಳಗಿಂದ ಮೇಲೆ ಬಂದು ಜನರಿಗೆ ಆಶೀರ್ವಾದ ಮಾಡುತ್ತವೆ. ಇದು ಕರ್ನಾಟಕದಲ್ಲಿಯೇ ವಿಶೇಷ ಸಂಪ್ರದಾಯವೂ ಆಗಿದೆ.
ಇದನ್ನೂ ಓದಿ: Inspiration: 300 ಕೆಜಿ ಭಾರ ಹೊತ್ತು ಸಾಗುತ್ತೆ ಈ ರೈತ ತಯಾರಿಸಿದ ಗಾಡಿ!
ಒಟ್ಟಿನಲ್ಲಿ ಬಾಡದ ಈ ಬಂಡಿ ಹಬ್ಬ ಕಣ್ತುಂಬಿಕೊಳ್ಳಲು ಸಾವಿರಾರು ಜನ ಭಕ್ತರು ಆಗಮಿಸುತ್ತಾರೆ. ದೇವರ ಆಶೀರ್ವಾದ ಪಡೆಯುತ್ತಲೇ ದೇವರಿಗೆ ಉಡಿ ತುಂಬುವ ಕಾರ್ಯ ನಡೆಯುತ್ತೆ. ಇದೆಲ್ಲವೂ ಮುಗಿದ ಮೇಲೆ ಭಕ್ತರು ತಮ್ಮ ತಮ್ಮ ಮನೆಗಳಿಗೆ ಸಂಭ್ರಮದಿಂದ ಮರಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ