news18-kannada Updated:January 27, 2021, 6:55 PM IST
ಉದ್ದವ್ ಠಾಕ್ರೆ.
ಮುಂಬೈ (ಜನವರಿ 27); ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಜೊತೆಗೆ ಆಗಿಂದಾಗ್ಗೆ ಖ್ಯಾತೆ ತೆಗೆಯುವ ಮಹಾರಾಷ್ಟ್ರ ಇದೀಗ ಮತ್ತೊಮ್ಮೆ ಖ್ಯಾತೆ ತೆಗೆದಿದೆ. ರಾಜಕೀಯ ನಾಯಕರ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಬೆಳಗಾವಿಯಲ್ಲಿ ಈಗಾಗಲೇ ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ಕೆಂಡದ ವಾತಾವರಣ ನಿರ್ಮಾಣವಾಗಿದೆ. ಈ ನಡುವೆ ಇಂದು ಮತ್ತೆ ಉದ್ಧಟ ತನದ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, "ಮರಾಠಿ ಭಾಷೆ ಹೆಚ್ಚಾಗಿ ಮಾತನಾಡುವ ಜನರಿರುವ ಗಡಿ ಭಾಗದ ಭೂ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶಗಳೆಂದು ಘೋಷಿಸಬೇಕು" ಎಂದು ಹೇಳಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸಕ್ಕೆ ಮುಂದಾಗಿದ್ದಾರೆ.
ಇಂದು ಮುಂಬೈನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುವ ಮೂಲಕ ಕರ್ನಾಟಕದ ಸ್ವಾಭಿಮಾನವನ್ನು ಕೆಣಕಿರುವ ಅವರು, "ಮರಾಠಿ ಮಾತನಾಡುವ ಜನರಿರುವ ಗಡಿ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವೆಂದು ಘೋಷಿಸಬೇಕು. ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ.
ಇದನ್ನೂ ಓದಿ: ಪ್ರತಿಭಟನೆಯ ನೇತೃತ್ವವನ್ನು ರೈತರು ವಹಿಸಿಲ್ಲ ಎಂಬುದಕ್ಕೆ ನಿನ್ನೆಯ ಘಟನೆಯೇ ಸಾಕ್ಷಿ; ಶೋಭಾ ಕರಂದ್ಲಾಜೆ
ಕರ್ನಾಟಕದ ವರ್ತನೆ ನ್ಯಾಯಾಂಗ ನಿಂದನೆಗೆ ಸಮ. ಬೆಳಗಾಂ ಹೆಸರನ್ನು ಬೆಳಗಾವಿ ಎಂದು ಬದಲಾಯಿಸಲಾಗಿದೆ. ಬೆಳಗಾವಿಯನ್ನು ಎರಡನೇ ರಾಜಧಾನಿಯನ್ನಾಗಿ ಮಾಡಿದೆ. ಅಲ್ಲಿ ವಿಧಾನಸೌಧ ನಿರ್ಮಿಸಿ ಅಧಿವೇಶನ ನಡೆಸಿದೆ. ಸುಪ್ರೀಂ ಕೋರ್ಟಿನಲ್ಲಿ ಗಡಿ ವಿವಾದ ಬಾಕಿ ಉಳಿದಿರುವಾಗ ಕರ್ನಾಟಕ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗುವುದು ಅಕ್ರಮ ನಡೆ" ಎಂದಿದ್ದಾರೆ. ಆದರೆ, ಅವರ ಈ ಹೇಳಿಕೆಗೆ ಸಾಮಾಜಿಕ ವಲಯದಲ್ಲಿ ಕನ್ನಡಿಗರಿಂದ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದೆ.
ಈ ಹಿಂದೆಯೂ ಸಹ ಉದ್ಧವ್ ಠಾಕ್ರೆ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುವ ಮಾತುಗಳನ್ನಾಡಿದ್ದರು. ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ ಎಂದು ಉದ್ಧಟತನ ಮೆರೆದಿದ್ದರು. ಆದರೆ, ಈ ವೇಳೆ ಕರ್ನಾಟಕದ ಎಲ್ಲಾ ರಾಜಕೀಯ ನೇತಾರರು ಒಟ್ಟಾಗಿ ಪಕ್ಷಭೇದ ಮರೆತು ಠಾಕ್ರೆ ಹೇಳಿಕೆಯನ್ನು ವಿರೋಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
Published by:
MAshok Kumar
First published:
January 27, 2021, 6:53 PM IST