news18-kannada Updated:February 23, 2021, 5:57 PM IST
ಬಿಸಿಲಲ್ಲಿ ಕುಳಿತಿರುವ ಸಿಬ್ಬಂದಿಗಳು.
ಕಲಬುರ್ಗಿ; ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರೋ ಕಲಬುರ್ಗಿ ಜಿಲ್ಲೆಯಲ್ಲಿಯೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ಆರು ಕಡೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆಯಾದರೂ ಎಲ್ಲಿಯೂ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ. ಹೀಗಾಗಿ ಸಿಬ್ಬಂದಿ ಬಿಸಿಲು, ಚಳಿ ಎನ್ನದೆ ಹಗಲು - ರಾತ್ರಿ ಕರ್ತವ್ಯ ನಿರ್ವಹಿಸುವಂತಾಗಿದೆ. ಆಳಂದ ತಾಲೂಕಿನ ಹೀರೋಳ್ಳಿ, ಖಜೂರಿ ಹಾಗೂ ನಿಂಬಾಳ ಮತ್ತು ಅಫಜಲಪುರ ತಾಲೂಕಿನ ಮಾದನಹಿಪ್ಪರಗಾ, ಬಳೂರ್ಗಿ ಮತ್ತು ಮಾಶಾಳ ಗ್ರಾಮಗಳ ಬಳಿ ಚೆಕ್ ಪೋಸ್ಟ್ ಸ್ಥಾಪನೆ ಮಾಡಲಾಗಿದೆ.
ಮಹಾರಾಷ್ಟ್ರದಿಂದ ಬರೋ ಪ್ರಯಾಣಿಕರಿಗೆ ಆರ್.ಟಿ.ಪಿ.ಸಿ.ಆರ್. ನೆಗೆಟಿವ್ ವರದಿಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ಮಹಾರಾಷ್ಟ್ರದಿಂದ ಬರೋ ವಾಹನಗಳನ್ನು ತಡೆಯುತ್ತಿರೋ ಆರೋಗ್ಯ ಇಲಾಖೆ ಸಿಬ್ಬಂದಿ ಆರ್.ಟಿ.ಪಿ.ಸಿ.ಆರ್. ವರದಿಯನ್ನು ಕೇಳುತ್ತಿದೆ. ಆದರೆ ಏಕಾಏಕಿ ಆರ್.ಟಿ.ಪಿ.ಸಿ.ಆರ್. ಕೇಳ್ತಿರೋದಕ್ಕೆ ಜನತೆ ಗೊಂದಲಕ್ಕೀಡಾಗಿದ್ದಾರೆ. ಹೀಗೆ ದಿಢೀರಾಗಿ ಕೇಳಿದರೆ ವರದಿಯನ್ನು ಎಲ್ಲಿಂದ ತರೋದು ಎಂದು ಪ್ರಯಾಣಿಕರು ಪ್ರಶ್ನಿಸುತ್ತಿದ್ದಾರೆ. ಆರ್.ಟಿ.ಪಿ.ಸಿ.ಆರ್. ಕಡ್ಡಾಯಗೊಳಿಸಿರೋದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವರದಿ ಕಡ್ಡಾಯದಿಂದ ತೊಂದರೆಯಾಗಲಿದೆ ಎಂದು ಪ್ರಯಾಣಿಕರು ಅಭಿಪ್ರಾಯಪಡುತ್ತಿದ್ದಾರೆ.
ಆರ್.ಟಿ.ಪಿ.ಸಿ.ಆರ್. ವರದಿಯಿಂದ ವಿನಾಯಿತಿ ಕೊಡುವಂತೆ ಪ್ರಯಾಣಿಕ ಸುಭಾಷ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾನೆ.ಬಹುತೇಕ ಪ್ರಯಾಣಿಕರ ಬಳಿ ಆರ್.ಟಿ.ಪಿ.ಸಿ.ಆರ್. ಇಲ್ಲದೇ ಇರೋದ್ರಿಂದಾಗಿ ಗಡಿಯಲ್ಲಿ ವಾಹನ ತಪಾಸಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವಾಹನ ದಟ್ಟಣೆಯೂ ಹೆಚ್ಚಾಗಲಾರಂಭಿಸಿದೆ. ಹೀಗಾಗಿ ಆರೋಗ್ಯ ಇಲಾಖೆ ಸಿಬ್ಬಂದಿ ಸದ್ಯಕ್ಕೆ ಸ್ಕ್ರೀನಿಂಗ್ ಮಾಡಿ ಗಡಿ ಪ್ರವೇಶಕ್ಕೆ ಅನುವು ಮಾಡಿಕೊಡುತ್ತಿದ್ದಾರೆ. ನಾಳೆಯಿಂದ ಕಡ್ಡಾಯವಾಗಿ ಆರ್.ಟಿ.ಪಿ.ಸಿ.ಆರ್. ವರದಿ ತರುವಂತೆ ಸೂಚನೆ ನೀಡುತ್ತಿದ್ದಾರೆ. ಆಳಂದ ಗಡಿಯಲ್ಲಿರೋ ಹಿರೋಳ್ಳಿ ಚೆಕ್ ಪೋಸ್ಟ್ ನಲ್ಲಿಯೂ ತಪಾಸಣೆ ಮಾಡಲಾಗುತ್ತಿದೆ.
ಕಲಬುರ್ಗಿಗೆ ಮಹಾರಾಷ್ಟ್ರದಿಂದ ಅತಿ ಹೆಚ್ಚು ವಾಹನ ಎಂಟ್ರಿಯಾಗೋ ದೊಡ್ಡ ರಸ್ತೆ ಇದಾಗಿರೋದ್ರಿಂದ, ಇಲ್ಲಿನ ಚೆಕ್ ಪೋಸ್ಟ್ ಬಳಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಆದರೆ ಇಲ್ಲಿ ಯಾವುದೇ ರೀತಿಯ ಸೌಲಭ್ಯಗಳಿಲ್ಲದೆ ಬಿಸಿಲಲ್ಲಿಯೇ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಯಾವುದೇ ಟೆಂಟ್ ಹಾಕದೇ ಇರೋದ್ರಿಂದಾಗಿ ಬಿಸಿನಲ್ಲಿಯೇ ಪೊಲೀಸ್ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಕುಳಿತು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕನಿಷ್ಟ ಸೌಲಭ್ಯ ಕಲ್ಪಿಸಿದರೆ ಹೇಗಾದ್ರೂ ಕೆಲಸ ಮಾಡಬಹುದು. ಯಾವುದೇ ಸೌಲಭ್ಯಗಳಿಲ್ಲದಿದ್ದರೂ ನಾವು ಮತ್ತು ನಮ್ಮ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರೋದಾಗಿ ಆಳಂದ ತಾಲೂಕು ಟಿ.ಎಚ್.ಒ. ಅಭಯಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Crime News: ಜಗಳವಾಡಿ ಮಗಳು ಹೊರಗೆ ಹೋಗಿದ್ದೇ ತಪ್ಪಾಯ್ತ?; ಕರುಳ ಕುಡಿಯನ್ನೇ ಕೊಂದ ತಂದೆ
ಮತ್ತೊಂದೆಡೆ ಅಫಜಲಪುರ ತಾಲೂಕಿನ ಬಳೂರ್ಗಿ ಬಳಿಯ ಚೆಕ್ ಪೋಸ್ಟ್ ಗೆ ಅಫಜಲಪುರ ತಹಶೀಲ್ದಾರ ನಾಗಮ್ಮ ಭೇಟಿ ನೀಡಿ ಪರಿಶೀಲಿಸಿದರು. ಆರ್.ಟಿ.ಪಿ.ಸಿ.ಆರ್. ವರದಿ ತೋರಿಸದೇ ಇರುವವರನ್ನು ವಾಪಸ್ ಕಳುಹಿಸಿಕೊಡಲಾಗುವುದು. ಯಾವುದೇ ಕಾರಣಕ್ಕೂ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡೋದಿಲ್ಲ. ರಾಜ್ಯ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದು, ಸಹಕರಿಸಬೇಕೆಂದು ಜನತೆಗೆ ಕೋರಿಕೊಂಡಿದ್ದಾರೆ.
ರಾಜ್ಯ ಸರ್ಕಾರ ನಿರ್ಣಯ ಕೈಗೊಂಡ ನಂತರ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಂತೆ ಚೆಕ್ ಪೋಸ್ಟ್ ಸ್ಥಾಪಿಸಲಾಗಿದ್ದು, ಇಂದು ಗಡಿ ಪ್ರವೇಶಕ್ಕೆ ಒಂದಷ್ಟು ರಿಯಾಯಿತಿ ನೀಡಿದ್ದು, ನಾಳೆಯಿಂದ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ.
(ವರದಿ - ಶಿವರಾಮ ಅಸುಂಡಿ)
Published by:
MAshok Kumar
First published:
February 23, 2021, 5:57 PM IST