ಕೋಲ್ಕತ್ತಾ: ಪ್ರೀತಿ (Love) ನಿಜಕ್ಕೂ ಮಾಯೆಯೇ ಸರಿ. ಪ್ರೀತಿಗಾಗಿ ಹಪಹಪಿಸೋ ಮನಗಳು ತಮ್ಮವರನ್ನು ಪಡೆಯಲು ಏನು ಬೇಕಾದರೂ ಮಾಡಲು ತಯಾರಿರುತ್ತವೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಹೌದು, ಬಾಂಗ್ಲಾದೇಶದ (Bangladesh) 22 ವರ್ಷದ ಯುವತಿಯೊಬ್ಬಳು ಭಾರತದಲ್ಲಿರುವ (India) ತನ್ನ ಪ್ರಿಯತಮನನ್ನು ವರಿಸಲು ಈಜುತ್ತಾ (Swim) ಗಡಿ ದಾಟಿದ್ದಾಳೆ. ಆದರೆ, ಭಾರತದೊಳಗೆ ಅಕ್ರಮ ಪ್ರವೇಶ ಮಾಡಿದ್ದರಿಂದ ಆಕೆಯನ್ನು ಬಂಧಿಸಲಾಗಿದ್ದು, ಈಗ ʼಇಂಟರ್ನ್ಯಾಷನಲ್ ಲವ್ʼ (International Love) ಅಡ್ಡಕತ್ತರಿಯಲ್ಲಿ ಸಿಲುಕಿದೆ. 22 ವರ್ಷದ ಕೃಷ್ಣ ಮಂಡಲ್ (Krishna Mandal) ಎನ್ನುವ ಯುವತಿಯೇ ಪ್ರಿಯತಮನ ಮದುವೆಯಾಗಲು ಈಜುತ್ತಾ ಗಡಿ ದಾಟಿದಾಕೆ. ಅತ್ಯಂತ ಕಠಿಣ ಸುಂದರ್ಬನ್ಸ್ ಕಾಡು ಹಾಗೂ ಮಾಲ್ಟಾ ನದಿಯನ್ನು ಧೈರ್ಯದಿಂದ ಈಜಿದ ಕೃಷ್ಣ ತನ್ನ ಪ್ರೀತಿಯನ್ನು ಉಳಿಸಿಕೊಂಡಿದ್ದಾಳೆ.
ಭಾರತ - ಬಾಂಗ್ಲಾದೇಶ ಗಡಿಯನ್ನು ದಾಟಲು ಒಂದು ಗಂಟೆಗೂ ಹೆಚ್ಚು ಕಾಲ ಮಾಲ್ಟಾ ನದಿಯನ್ನು ಕೃಷ್ಣ ಮಂಡಲ್ ಈಜಿರುವುದು ಪ್ರೀತಿಗಿರುವ ತಾಕತ್ತನ್ನು ತೋರಿಸುತ್ತದೆ.
ಫೇಸ್ಬುಕ್ನಲ್ಲಿ ಹುಟ್ಟಿದ್ದ ಪ್ರೀತಿ ಅಂದ್ರೇ ನಂಬ್ತೀರಾ?
ಆ ಕಡೆಯಿಂದ ಈಜುತ್ತಾ ಕೃಷ್ಣ ಮಂಡಲ್ ಗಡಿ ದಾಟುತಿದ್ದರೆ, ಈ ಕಡೆ ಭಾರತದಲ್ಲಿ ಆಕೆಯ ಪ್ರಿಯತಮ ಅಭಿಕ್ ಮಂಡಲ್, ಕೃಷ್ಣ ಮಂಡಲ್ಗಾಗಿ ಕಾಯುತ್ತಿದ್ದ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ. ನದಿಯನ್ನೇ ಈಜಿ ಗಡಿ ದಾಟುವ ಅಪ್ರತಿಮ ಪ್ರೀತಿ ಹುಟ್ಟಿದ್ದು ಆನ್ಲೈನ್ನಲ್ಲಿ ಎಂದರೆ ನೀವು ಅಚ್ಚರಿ ಪಡಲೇಬೇಕು. ಫೇಸ್ಬುಕ್ನಲ್ಲಿ ಈ ಇಬ್ಬರು ಪರಸ್ಪರ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಮೊಳಕೆಯೊಡೆದು, ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು.
ಇದನ್ನೂ ಓದಿ: Viral Video: ವಧುವಿನ ಮುಖಕ್ಕೆ ಕೇಕ್ ಮೆತ್ತಿದ ವರ; ಕಾರಣ ಕೇಳಿದ್ರೆ ನಿಮ್ಗೂ ನಗು ಬರುತ್ತೆ
ಆದರೆ, ಅಭಿಕ್ ಮಂಡಲ್ ಬಳಿ ಪಾಸ್ಪೋರ್ಟ್ ಇರದ ಕಾರಣ ಕಾನೂನು ಬದ್ಧವಾಗಿ ಬಾಂಗ್ಲಾದೇಶ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ತನ್ನ ಪ್ರಿಯತಮನನ್ನು ಮದುವೆಯಾಗಲು ಕೃಷ್ಣ ಮಂಡಲ್ ಸುಂದರ್ಬನ್ ಕಾಡುಗಳಲ್ಲಿ ಸಾಹಸಮಯ ಪ್ರಯಾಣ ಮಾಡಿದ್ದಾಳೆ. ಸುಂದರ್ಬನ್ ಕಾಡುಗಳು ಹೆಚ್ಚು ಹುಲಿಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಅಂತಹ ಅರಣ್ಯದಲ್ಲಿ ಪ್ರಯಾಣ ಸುಲಭದ ಮಾತಲ್ಲ. ಅದಲ್ಲದೇ ಭಾರತ - ಬಾಂಗ್ಲಾದೇಶ ಗಡಿ ದಾಡುವುದಕ್ಕಾಗಿ ಮಾಲ್ಟಾ ನದಿಯನ್ನು ಕೃಷ್ಣ ಮಂಡಲ್ ಈಜಿದ್ದಾಳೆ.
ಹಲವು ಸವಾಲುಗಳ ಬಳಿಕ ಇಬ್ಬರ ಭೇಟಿ, ವಿವಾಹ
ಹಲವು ಸವಾಲುಗಳ ಬಳಿಕ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಕೈಖಾಲಿ ಗ್ರಾಮದಲ್ಲಿ ಕೃಷ್ಣಾ ಮಂಡಲ್ ತನ್ನ ಪ್ರಿಯತಮನನ್ನು ಕೊನೆಗೂ ಭೇಟಿಯಾದಳು. ಇತ್ತ, ಅಭಿಕ್ ಮಂಡಲ್ ತನ್ನ ಪ್ರೇಯಸಿಗಾಗಿ ಕಾರಿನೊಂದಿಗೆ ಕಾಯುತ್ತಿದ್ದ. ಬಳಿಕ ಇಬ್ಬರೂ ಕೋಲ್ಕತ್ತಾಗೆ ತೆರಳಿ, ಅಲ್ಲಿನ ಕಾಲಿಘಟ್ ದೇವಸ್ಥಾನದಲ್ಲಿ ಕೃಷ್ಣ ಮಂಡಲ್ ಹಾಗೂ ಅಭಿಕ್ ಮಂಡಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇನ್ನು, ತನ್ನ ಪ್ರಿಯತಮನನ್ನು ಮದುವೆಯಾಗಲು ಗಡಿಯುದ್ದಕ್ಕೂ ಪ್ರಯಾಣಿಸಿದ ಯುವತಿ ಹಾಗೂ ಆಕೆಯ ಸಾಹಸವು ಆ ಪ್ರದೇಶದಲ್ಲಿ ವೇಗವಾಗಿ ಹಬ್ಬಿದೆ. ಈ ಸುದ್ದಿ ಪೊಲೀಸರಿಗೂ ತಲುಪಿದ್ದು, ಪ್ರಿಯತಮನಿಗಾಗಿ ಅಕ್ರಮವಾಗಿ ಗಡಿ ದಾಟಿದ ಮಹಿಳೆಯನ್ನು ಪೊಲೀಸರು ಸೋಮವಾರ ಬಂಧಿಸಿದ್ದು, ವರದಿಗಳಂತೆ ಕೃಷ್ಣ ಮಂಡಲ್ ಅನ್ನು ಬಾಂಗ್ಲಾದೇಶದ ಹೈಕಮಿಷನರ್ಗೆ ಹಸ್ತಾಂತರಿಸಬಹುದು ಎನ್ನಲಾಗಿದೆ.
ಇಂಟರ್ನೆಟ್ ಲೋಕದಲ್ಲಿ ಟ್ರೆಂಡ್
ಇನ್ನು, ಆನ್ಲೈನ್ನಲ್ಲಿ ಹುಟ್ಟಿದ ಪ್ರೀತಿಗಾಗಿ ಯುವತಿ ಕಠಿಣ ಅರಣ್ಯ, ನದಿ ಹಾಗೂ ಗಡಿ ದಾಟಿ ಬಂದಿದ್ದರ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹಲವು ಶಾಯಿರಿಗಳ ಮೂಲಕ ಈ ಲವ್ ಕಹಾನಿಗೆ ಜೈ ಎಂದಿದ್ದಾರೆ. “ಸಪ್ತ ಸಾಗರದಾಚೆಯೂ ನಾನು ನಿನ್ನ ಹಿಂಬಾಲಿಸುತ್ತೇನೆ ಎಂಬುದು ಈಗ ನಿಜವಾಗಿದೆ” ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದರೆ, ಮತ್ತೊಬ್ಬರು ಗಡಿ ಗೋಡೆ ದಾಟಿದ ಅದ್ಭುತ ಪ್ರೀತಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Love Story: ಈ ಜೋಡಿಯ ಒಂದು ಕಪ್ ಚಹಾದಿಂದ ವೈರಲ್ ಆಗ್ತಿದೆ ಇವರಿಬ್ಬರ ಲವ್ ಸ್ಟೋರಿ
ಪತ್ನಿಗಾಗಿ ಸಾಗರಯಾನ ಮಾಡಿದ್ದ ಪತಿ
ಇನ್ನು, ಮಾರ್ಚ್ನಲ್ಲಿ ವಿಯೆಟ್ನಾಂ ವ್ಯಕ್ತಿಯೊಬ್ಬ ಭಾರತದಲ್ಲಿದ್ದ ತನ್ನ ಪತ್ನಿಯನ್ನು ನೋಡಲು 2000 ಕಿಮೀ ಸಮುದ್ರದಲ್ಲಿ ರಾಪ್ಟಿಂಗ್ ದೋಣಿಯಲ್ಲಿ ಬರಲು ಮುಂದಾಗಿದ್ದ ಎನ್ನುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕೋವಿಡ್ ಕಾರಣದಿಂದ ಎರಡು ವರ್ಷದಿಂದ ಆತ ತನ್ನ ಪತ್ನಿಯನ್ನು ನೋಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಇಂತಹ ಸಾಹಸಮಯ ಯಾತ್ರೆಗೆ ಕೈಹಾಕಿದ್ದ. 18 ರಾತ್ರಿಗಳನ್ನು ಸಮುದ್ರದಲ್ಲಿ ಏಕಾಂಗಿಯಾಗಿ ಕಳೆದ ಬಳಿಕ ಥಾಯ್ಲೆಂಡ್ ಮೀನುಗಾರರಿಗೆ ಆತ ಸಿಕ್ಕಿದ್ದ, ಬಳಿಕ ಪ್ರಕರಣ ಸುಖಾಂತ್ಯವಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ