ಸಿಲಿಕಾನ್ ಸಿಟಿಯಲ್ಲಿ (Silicon city )ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಸದ್ಯದ ವಿಚಾರ ಅಂದರೆ ಬಾಡಿಗೆ ಮನೆ. ಸೋಶಿಯಲ್ ಮೀಡಿಯಾದಿಂದ ಹಿಡಿದು ಕ್ರಿಕೆಟ್ ಸ್ಟೇಡಿಯಂವರೆಗೆ ಬಾಡಿಗೆ ಮನೆ (Rent House) ಹುಡುಕಾಟದ ತೊಂದರೆಯದ್ದೇ ಚರ್ಚೆ. ಉದ್ಯಾನ ನಗರಿಯಲ್ಲಿ ಮನೆ ಹುಡುಕುವುದು ಈಗ ಸುಲಭದ ಮಾತೇ ಅಲ್ಲ. ಮನೆ ಓಕೆಯಾದರೂ ಮಾಲೀಕರನ್ನು (Owner) ಒಪ್ಪಿಸುವುದು ದೊಡ್ಡ ಕಷ್ಟವಾಗಿದೆ. ಮನೆ ಮಾಲೀಕರು ಹಾಕುವ ಕಂಡಿಷನ್ಸ್, ರೂಲ್ಸ್ಗಳಿಗೆ ಬಾಡಿಗೆದಾರರು ಸುಸ್ತಾಗಿ ಹೋಗಿದ್ದಾರೆ. ಬೆಂಗಳೂರಲ್ಲಿ (Bengaluru) ಒಂದು ಕಂಪನಿಯನ್ನಾದರೂ ಆರಂಭಿಸಬಹುದು. ಆದರೆ ಬಾಡಿಗೆಗೆ ಮನೆ ಪಡೆಯೋದು ಕಷ್ಟವಾಗಿದೆ ಅಂತಾ ಬಾಡಿಗೆದಾರರು ಗೊಣಗಾಟ ನಡೆಸುತ್ತಿದ್ದಾರೆ.
ದಿನಕ್ಕೊಂದು ಪೋಸ್ಟ್ಗಳು, ಫೋಟೋಗಳು ಈ ವಿಚಾರವಾಗಿ ವೈರಲ್ ಆಗುತ್ತಲೇ ಇವೆ. ಹೀಗೆ ಪ್ರಸ್ತುತ ಬಾಡಿಗೆ ಮನೆಗೆ ಸಂಬಂಧಿಸಿದಂತೆ ಬಾಡಿಗೆದಾರರ ಪೋಸ್ಟ್ ಒಂದು ಸಖತ್ ವೈರಲ್ ಆಗಿದೆ. ಶುಭ್ ಎಂಬ ಬಳಕೆದಾರರು ಮಾಡಿರುವ ಪೋಸ್ಟ್ ಟ್ವಿಟರ್ನಲ್ಲಿ ಹರಿದಾಡುತ್ತಿದೆ.
ಪಿಯುಸಿಯಲ್ಲಿ ಕಡಿಮೆ ಅಂಕ.. ಬಾಡಿಗೆಗೆ ಮನೆ ಕೊಡಲು ಒಪ್ಪದ ಮಾಲೀಕರು
ಬೆಂಗಳೂರಲ್ಲಿ ಸಾಮಾನ್ಯವಾಗಿ ಅವಿವಾಹಿತರಿಗೆ, ಮಾಂಸಹಾರ ತಿನ್ನುವವರಿಗೆ ಬಾಡಿಗೆ ಕೊಡಲ್ಲ ಅಂತಾ ಮನೆ ಮಾಲೀಕರು ಮುಖಕ್ಕೆ ಹೊಡೆದ ಹಾಗೆ ಹೇಳುತ್ತಾರೆ. ಆದರೆ ಇದೆಲ್ಲಾ ಮೀರಿ ಮತ್ತೊಂದು ಹಂತಕ್ಕೆ ಹೋಗಿರುವ ಮನೆ ಮಾಲೀಕರು ಪಿಯುಸಿಯಲ್ಲಿ ಕಡಿಮೆ ಮಾರ್ಕ್ ಬಂದಿದೆ ಅನ್ನೋ ಕಾರಣಕ್ಕೆ ಮನೆ ಬಾಡಿಗೆಗೆ ನೀಡಲು ನಿರಾಕರಿಸಿದ್ದಾರೆ. ಸದ್ಯ ಈ ಬಗ್ಗೆ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
"12 ನೇ ತರಗತಿಯಲ್ಲಿ ಕಡಿಮೆ ಅಂಕಗಳ ತೆಗೆದುಕೊಂಡಿರುವ ಕಾರಣದಿಂದ ಬೆಂಗಳೂರಿನಲ್ಲಿ ತನ್ನ ಸೋದರಸಂಬಂಧಿಗೆ ಮನೆಯನ್ನು ಬಾಡಿಗೆಗೆ ನೀಡಲು ಮನೆ ಮಾಲೀಕರು ನಿರಾಕರಿಸಿದ್ದಾನೆ" ಎಂದು ಶುಭ್ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: West Bengal: ತರಗತಿಗೆ ನುಗ್ಗಿದ ಗನ್ ಮ್ಯಾನ್! ಕಂಗಾಲಾದ ವಿದ್ಯಾರ್ಥಿಗಳು
ಮಾಲೀಕರ ಜೊತೆ ನಡೆದ ಚಾಟ್ ಅನ್ನು ಪೋಸ್ಟ್ ಮಾಡಿದ ಟ್ವಿಟರ್ ಬಳಕೆದಾರ ಶುಭ್
ಶುಭ್ ಅವರು ಮನೆ ಮಾಲೀಕರ ಜೊತೆ ನಡೆದ ಚಾಟ್ ಸಂಭಾಷಣೆಗಳ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಯೋಗೇಶ್ ಎಂಬುವವರು ಮನೆ ಬಾಡಿಗೆ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಮನೆ ಮಾಲೀಕರು ದಾಖಲೆ, ಕಾಲೇಜ್ ಕ್ಯಾಂಪಸ್, ಲಿಂಕ್ಡ್ಇನ್ ಪ್ರೊಪೈಲ್ ಮತ್ತು ಪಿಯುಸಿ ಅಂಕಪಟ್ಟಿ ಸಹ ಕೇಳಿದ್ದಾರೆ. ಇದನ್ನು ಬಾಡಿಗೆದಾರ ಕಳುಹಿಸಿ ಕೊಟ್ಟಿದ್ದಾನೆ.
ಆದರೆ ನಂತರ ಮನೆ ಮಾಲೀಕರು ಆತ ಪಿಯುಸಿಯಲ್ಲಿ ಶೇ.75ರಷ್ಟು ಮಾರ್ಕ್ಸ್ ತೆಗೆದುಕೊಂಡಿದ್ದಾನೆ ಎಂಬ ಕಾರಣ ನೀಡಿ ಮನೆ ಬಾಡಿಗೆ ಕೊಡಲ್ಲ ಅಂತಾ ಹೇಳಿದ್ದಾರೆ. ಈ ಎಲ್ಲಾ ಸಂಭಾಷಣೆಯ ಸ್ಕ್ರೀನ್ ಶಾಟ್ಗಳನ್ನು ಶುಭ್ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. 12ನೇ ತರಗತಿಯಲ್ಲಿ ಶೇ.75ರಷ್ಟು ಅಂಕ ಪಡೆದಿದ್ದು, ಮಾಲೀಕರು ಕನಿಷ್ಠ ಶೇ. 90ರಷ್ಟನ್ನು ನಿರೀಕ್ಷಿಸುತ್ತಿದ್ದ ಕಾರಣ ನನ್ನ ಸೋದರ ಸಂಬಂಧಿಯ ಸಹೋದರನಿಗೆ ಮಾಲೀಕರು ಬಾಡಿಗೆ ಫ್ಲಾಟ್ ನಿರಾಕರಿಸಿದ್ದಾರೆಂದು ನನಗೆ ನಂಬಲಾಗುತ್ತಿಲ್ಲ ಎಂದು ಶುಭ್ ಟ್ವೀಟ್ ಮಾಡಿದ್ದಾರೆ.
ಮನೆಗಳ ಹೆಚ್ಚಿನ ಬೇಡಿಕೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮಾಲೀಕರು ಅನಗತ್ಯ ವಿವರಗಳನ್ನು ಹಂಚಿಕೊಳ್ಳಲು ಬಾಡಿಗೆದಾರರ ಮೇಲೆ ಹೆಚ್ಚುವರಿ ಒತ್ತಡವನ್ನು ಹಾಕುತ್ತಿದ್ದಾರೆ ಎಂದು ಬಾಡಿಗೆದಾರರು ಆರೋಪಿಸುತ್ತಿದ್ದಾರೆ. ಹಲವಾರು ಅನಗತ್ಯ ವಿವರಗಳನ್ನು ಮತ್ತು ಹೆಚ್ಚಿನ ಬಾಡಿಗೆಯನ್ನು ಕೇಳುವುದರಿಂದ ಬಾಡಿಗೆದಾರರಿಗೆ ಸಮಸ್ಯೆಗಳು ದಿನದಿಂದ ದಿನಕ್ಕೆ ಬೆಳೆಯುತ್ತಿವೆ ಎನ್ನುತ್ತಿದ್ದಾರೆ.
ಕೋವಿಡ್ ಸಮಯದಲ್ಲಿ ನಗರದಲ್ಲಿ ಹಲವರು ಮನೆ ಖಾಲಿ ಮಾಡಿ ತಮ್ಮ ತಮ್ಮ ಊರಿಗೆ ಹೋಗಿದ್ದರು. ಆದರೆ ಈಗ ಬಹುತೇಕ ಕಚೇರಿಗಳು ಆಫೀಸಿಗೆ ಬಂದು ಕೆಲಸ ಮಾಡುವಂತೆ ಆದೇಶಿಸುವುದಿಂದ ಹಲವು ಟೆಕ್ ಕಂಪನಿಗಳ ಉದ್ಯೋಗಿಗಳು ಬೆಂಗಳೂರಿಗೆ ಮರಳುತ್ತಿದ್ದಾರೆ. ಹೀಗಾಗಿ ಮನೆಗಳಿಗೆ ಬೇಡಿಕೆ ಕೂಡ ಹೆಚ್ಚಿದೆ ಮತ್ತು ಇದೇ ಕಾರಣದಿಂದ ಬಾಡಿಗೆ ಕೊಡುವ ನೀತಿ-ನಿಯಮಗಳು ಸಹ ಮಿತಿ ಮೀರಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ