ನಮ್ಮ ದೇಶ ಅನೇಕ ನಿಗೂಢ ಸ್ಥಳಗಳನ್ನು (Mysterious Place) ಒಳಗೊಂಡಿದೆ. ಯಾರ ಕಲ್ಪನೆಗೂ ಸಿಗದಂಥಹ, ಯಾರ ತರ್ಕಕ್ಕೂ ನಿಲುಕದಂತಹ ಅನೇಕ ಸಂಗತಿಗಳು ಇಂದಿಗೂ ಹಾಗೆಯೇ ಇವೆ. ಅನೇಕ ಸಂಶೋಧಕರು (Researchers), ತಜ್ಞರು, ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ಮಾಡಿಯೂ ಉತ್ತರ ಸಿಗದೇ ಬಂದದಾರಿಗೆ ಸುಂಕವಿಲ್ಲ ಅನ್ನೋ ಹಾಗೆ ವಾಪಸ್ಸಾಗಿದ್ದಾರೆ. ಅನೇಕ ಕೋಟೆಗಳು, ದೇವಾಲಯಗಳು, ಕೆಲವೊಮ್ಮೆ ಪುರಾತನ ಬಂಗಲೆಗಳು, ಕೆಲವೊಂದು ಕಾಡು ಹೀಗೆ ನಿಗೂಢಗಳನ್ನು ಒಡಲಲ್ಲಿ ಹೊತ್ತ ಅದೆಷ್ಟೋ ಜಾಗಗಳಿವೆ.
ಇದರೊಂದಿಗೆ ಕೆಲವೊಂದು ನಿರ್ದಿಷ್ಟ ಜಾಗಗಳನ್ನು ಕೂಡ ಭೂತದ ನಡೆಯಿದೆ ಅನ್ನೋ ಕಾರಣಕ್ಕೆ ಅಲ್ಲಿ ಓಡಾಡುವುದು, ಅದರ ಹತ್ತಿರ ಹೋಗುವುದನ್ನು ನಿಷೇಧಿಸಲಾಗಿರುತ್ತದೆ. ಇಂಥ ಒಂದು ಜಾಗ ಪಶ್ಚಿಮ ಬಂಗಾಳದಲ್ಲೂ ಇದೆ. ಆಶ್ಚರ್ಯ ಎಂದರೆ ಅದೊಂದು ರೈಲ್ವೆ ನಿಲ್ದಾಣ.
ಶಾಪಗ್ರಸ್ಥ ರೈಲ್ವೆ ನಿಲ್ದಾಣ!
ಅಂಥದ್ದೊಂದು ಶಾಪಗ್ರಸ್ತ ರೈಲ್ವೆ ನಿಲ್ದಾಣ ಇರುವುದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ. ಜಾರ್ಖಂಡ್ ರಾಜ್ಯದ ರಾಜಧಾನಿಯಾದ ರಾಂಚಿ ವಿಭಾಗದ ಕೋಟ್ಶಿಲಾ-ಮುರಿ ಹತ್ತಿರವಿದೆ. ಈ ರೈಲ್ವೇ ನಿಲ್ದಾಣದ ಹೆಸರನ್ನು ಕೇಳಿದ ತಕ್ಷಣ ಜನರು ಭಯಭೀತರಾಗುತ್ತಾರೆ. ಈ ಭಯ ಎಷ್ಟರ ಮಟ್ಟಿಗೆ ಇದೆಯೆಂದರೆ ಯಾವುದೇ ರೈಲ್ವೆ ಉದ್ಯೋಗಿಗಳು ಈ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿಲ್ಲ. ಆದ್ದರಿಂದಲೇ ರೈಲ್ವೆ ಇಲಾಖೆಯು ಬರೋಬ್ಬರಿ 42 ವರ್ಷಗಳ ಕಾಲ ಈ ನಿಲ್ದಾಣವನ್ನು ಮುಚ್ಚಬೇಕಾಯಿತು.
ಇದನ್ನೂ ಓದಿ: ಪರಿಸರ ಸ್ನೇಹಿ ಮನೆ ನಿರ್ಮಿಸಿಕೊಂಡ ಅತ್ತೆ-ಸೊಸೆಯ ಸಾಧನೆಗೆ ನೀವು ಚಪ್ಪಾಳೆ ತಟ್ಟಲೇಬೇಕು!
ಇದು ಭೂತದ ರೈಲ್ವೆ ನಿಲ್ದಾಣವಾಗಿದ್ದು ಹೇಗೆ ?
ಬೇಗಂಕೋಡರ್ ಎಂಬುದು ಈ ರೈಲು ನಿಲ್ದಾಣದ ಹೆಸರು. ಸಂತಾಲ್ನ ರಾಣಿ ಲಚನ್ ಕುಮಾರಿಯವರ ಪ್ರಯತ್ನದಿಂದಾಗಿ ಇದು 1960 ರ ದಶಕದಲ್ಲಿ ಜನನಿಬಿಡ ನಿಲ್ದಾಣವಾಗಿತ್ತು. ಈ ರೈಲು ನಿಲ್ದಾಣ ಸ್ಥಾಪನೆಯಿಂದ ಸುತ್ತಮುತ್ತಲಿನ ಜನರು ಸಂತೋಷಗೊಂಡಿದ್ದರು. ಆದಾಗ್ಯೂ, ಅವರ ಸಂತೋಷವು ಹೆಚ್ಚು ಕಾಲ ಉಳಿಯಲಿಲ್ಲ.
1967 ರಲ್ಲಿ, ರೈಲ್ವೆ ಹಳಿಯಲ್ಲಿ ಭೂತದ ರೀತಿಯ ಆಕಾರವನ್ನು ನೋಡಿದ್ದಾಗಿ ಸ್ಟೇಷನ್ ಮಾಸ್ಟರ್ ಹೇಳಿದರು. ಬಿಳಿ ಸೀರೆಯುಟ್ಟ ಮಾಟಗಾತಿಯೊಬ್ಬಳು ರಾತ್ರಿ ರೈಲ್ವೇ ಹಳಿಯ ಸುತ್ತಲೂ ಗಸ್ತು ತಿರುಗುತ್ತಿರುವುದನ್ನು ಕಂಡಿದ್ದಾಗಿ ಅವರು ಹೇಳಿದ್ದರು. ಈ ವದಂತಿಯು ಕಾಳ್ಗಿಚ್ಚಿನಂತೆ ಹರಡಿತು. ಇದಾದ ಮೇಲೆ ಬಹಳಷ್ಟು ಜನರು ಈ ಬಿಳಿ ಸೀರೆಯ ಈ ರೂಪವನ್ನು ನೋಡಿದ್ದಾಗಿ ಹೇಳಿದರು. ಈ ರೈಲ್ವೇ ಹಳಿಯಲ್ಲಿ ತನ್ನ ಪ್ರಾಣವನ್ನು ಬಿಟ್ಟ ಹುಡುಗಿಯೊಬ್ಬಳು ದೆವ್ವವಾಗಿ ಬದಲಾಗಿದ್ದಾಳೆ ಎಂದು ಜನರು ನಂಬಲು ಪ್ರಾರಂಭಿಸಿದರು.
ಈ ನಿಲ್ದಾಣಕ್ಕೆ ಬರಲು ಸಿದ್ಧರಿರಲಿಲ್ಲ ರೈಲ್ವೆ ನೌಕರರು !
ರೈಲ್ವೆ ಆಡಳಿತವು ಈ ವದಂತಿಗಳನ್ನು ನಂಬಲು ನಿರಾಕರಿಸಿತು. ಆದರೆ ಕೆಲವು ದಿನಗಳ ನಂತರ ಸ್ಟೇಷನ್ ಮಾಸ್ಟರ್ ಮತ್ತು ಅವರ ಇಡೀ ಕುಟುಂಬವು ಶವವಾಗಿ ಪತ್ತೆಯಾಯಿತು. ಸ್ಟೇಷನ್ ಮಾಸ್ಟರ್ ನಿಧನದ ನಂತರ, ಇಲ್ಲಿ ನೆಲೆಸಿದ್ದ ಎಲ್ಲಾ ಸಿಬ್ಬಂದಿ ಕೆಲಸ ಮಾಡಲು ನಿರಾಕರಿಸಿದರು. ಇದರಿಂದಾಗಿ ಈ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಸ್ಥಗಿತಗೊಂಡಿದೆ. ನಂತರದ ಕೆಲವು ತಿಂಗಳುಗಳವರೆಗೆ, ರೈಲ್ವೆಯು ಇಲ್ಲಿ ಸಿಬ್ಬಂದಿಯನ್ನು ನಿಯೋಜಿಸಲು ಪ್ರಯತ್ನಿಸಿತು, ಆದರೆ ಯಾವುದೇ ನೌಕರರು ಕಾಣಿಸಿಕೊಳ್ಳಲಿಲ್ಲ. ನಂತರ, ಒಂದು ದಿನ, ಅಧಿಕಾರಿಗಳು ನಿಲ್ದಾಣವನ್ನು ಮುಚ್ಚುವುದಾಗಿ ಘೋಷಿಸಿದರು.
ಕೆಲವೇ ಸಮಯದಲ್ಲಿ, ಈ ನಿಲ್ದಾಣವು ನಿಜ ಜೀವನದ 'ಭೂತ' ನಿಲ್ದಾಣವಾಯಿತು. ಕಥೆಗಳ ಪ್ರಕಾರ, ಇಂದಿಗೂ, ರೈಲುಗಳು ಈ ನಿಲ್ದಾಣದಿಂದ ಹಾದುಹೋದಾಗ, ಗಾಡಿಯೊಳಗೆ ಶಾಂತವಾಗಿರುತ್ತದೆ. ಈ ರೈಲು ನಿಲ್ದಾಣ ಸಂಜೆಯಾದರೆ ನಿರ್ಜನವಾಗಿರುತ್ತದೆ. ಇಲ್ಲಿ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಕೂಡ ಕಾಣಸಿಗುವುದಿಲ್ಲ.
90 ರ ದಶಕದಲ್ಲಿ, ಹಲವಾರು ಸ್ಥಳೀಯರು ಈ ನಿಲ್ದಾಣವನ್ನು ಪುನಃ ತೆರೆಯುವಂತೆ ಮನವಿ ಮಾಡಿದರು. ಭಾರತೀಯ ರೈಲ್ವೇ ಇದನ್ನು ಪರಿಗಣಿಸಲು ಪ್ರಾರಂಭಿಸಿತು. ಆಗಿನ ರೈಲ್ವೇ ಸಚಿವೆಯಾಗಿದ್ದ ಮಮತಾ ಬ್ಯಾನರ್ಜಿಯವರ ಪ್ರಯತ್ನದಿಂದಾಗಿ 42 ವರ್ಷಗಳ ನಂತರ ಬೇಗಂಕೋದರ್ ರೈಲು ನಿಲ್ದಾಣವು 2009 ರಲ್ಲಿ ಪುನರಾರಂಭವಾಯಿತು. ಪ್ರಸ್ತುತ, ಈ ನಿಲ್ದಾಣವು ನಿಲುಗಡೆ ನಿಲ್ದಾಣವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಖಾಸಗಿ ಸಂಸ್ಥೆಯಿಂದ ನಿರ್ವಹಿಸಲ್ಪಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ