ಬೆಂಗಳೂರಿನಂತಹ (Bengaluru) ನಗರಗಳಲ್ಲಿ ಪ್ರತಿ ದಿನ ಬೆಳಗಾದರೆ ಸಾಕು, ಬೀದಿಗಳಲ್ಲಿ ತರಕಾರಿ (Vegetables), ಸೊಪ್ಪು ಕೊಳ್ಳಿ ಎಂದು ಅರಚುತ್ತ ವ್ಯಾಪಾರಿಗಳು ಸುಳಿದಾಡಲು ಪ್ರಾರಂಭಿಸುತ್ತಾರೆ, ಅಲ್ಲದೆ ನೀವು ಬೆಳಗ್ಗೆಯ ಸಮಯದಲ್ಲಿ ಸಂತೆಗೆ ತರಕಾರಿ ಕೊಳ್ಳಬೇಕೆಂದು ನಡೆದರೆ ಸಾಕು, ಈ ಎರಡೂ ಸಂದರ್ಭಗಳಲ್ಲಿ ಹಚ್ಚ ಹಸಿರಿನಿಂದ ಕೂಡಿದ ಮೈದುಂಬಿ ಅರಳಿದ ಸೊಪ್ಪುಗಳು ನಿಮ್ಮ ಕಣ್ಣುಗಳನ್ನು ಆಕರ್ಷಿಸುತ್ತವೆ.
ಆದರೆ, ನಮ್ಮಲ್ಲಿ ಬಹುತೇಕರಿಗೆ ವ್ಯಾಪಾರಿಗಳು ತಮ್ಮ ತರಕಾರಿ ಸೊಪ್ಪುಗಳು ಕಣ್ಣಿಗೆ ರಾಚುವಂತೆ ಮಾಡಲು ಏನೆಲ್ಲ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಾರೆ ಎಂಬುದರ ಬಗ್ಗೆ ತಿಳಿದೇ ಇರುತ್ತದೆ.
ಹೌದು, ತರಕಾರಿ ಅದರಲ್ಲೂ ವಿಶೇಷವಾಗಿ ಹಸಿರಿನ ಸೊಪ್ಪುಗಳು ಹೆಚ್ಚು ಹೆಚ್ಚು ತಾಜಾ ಆಗಿದ್ದಷ್ಟು ಅಡುಗೆ ರುಚಿಕರವಾಗಿರುತ್ತದೆ. ಹಾಗಾಗಿ ನಾವು ಇಂತಹ ತರಕಾರಿಗಳನ್ನು ಕೊಳ್ಳುವಾಗ ಅದು ಎಷ್ಟು ತಾಜಾ ಆಗಿದೆ ಎಂಬುದನ್ನೇ ಮೊದಲು ಪರಿಶೀಲಿಸಿ ಹೆಚ್ಚಿನ ಬೆಲೆ ತೆತ್ತಾದರೂ ಖರೀದಿಸುತ್ತೇವೆ.
ನಮ್ಮ ಈ ಮನಸ್ಥಿತಿಯನ್ನೇ ಬಂಡವಾಳ ಮಾಡಿಕೊಳ್ಳುವ ಅದೆಷ್ಟೋ ತರಕಾರಿ ವ್ಯಾಪಾರಿಗಳು ಇತರೆ ಜನರ ಪರ ಯಾವುದೇ ರೀತಿಯ ಆರೋಗ್ಯದ ಕಾಳಜಿ ವಹಿಸದೆ, ಇಲ್ಲ ಸಲ್ಲದ ಮಾರ್ಗಗಳನ್ನು ಬಳಸಿಕೊಳ್ಳುತ್ತಿರುತ್ತಾರೆ. ಇದೀಗ ಇಂತಹುದ್ದೇ ಅಂಶದ ಮೇಲೆ ಬೆಳಕು ಚೆಲ್ಲುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ ಎನ್ನಬಹುದು.
ಅಮಿತ ತಡಾನಿ ಎಂಬ ಟ್ವಿಟರ್ ಬಳಕೆದಾರರಿಂದ ವಿಡಿಯೋ ಹಂಚಿಕೊಳ್ಳಲಾಗಿದ್ದು ಅದರಲ್ಲಿ ಅವರು ಈ ವಿಡಿಯೋದ ಮೂಲ ಲಿಂಕ್ಡ್ ಇನ್ ನಲ್ಲಿ ಹಂಚಿಕೊಳ್ಳಲಾಗಿರುವ ದೇವರಾಜನ್ ರಾಜಗೋಪಾಲನ್ ಎಂದಿದ್ದಾರೆ. ಅಲ್ಲದೆ ಅವರು ಹಂಚಿಕೊಂಡ ಈ ವಿಡಿಯೊಗೆ "ವಾಸ್ತವ ಜೀವನದ ಎರಡು ನಿಮಿಷಗಳ ಭಯಾನಕ ಕಥೆ" ಎಂಬ ಶಿರ್ಷಿಕೆಯನ್ನೂ ಸಹ ನೀಡಿದ್ದಾರೆ.
ವಿಡಿಯೋದಲ್ಲೇನಿದೆ?
ಅಷ್ಟಕ್ಕೂ ಈ ವಿಡಿಯೋದಲ್ಲೇನಿದೆ ಎಂಬ ಬಗ್ಗೆ ನಿಮಗೂ ಕುತೂಹಲ ಮೂಡಿರಬಹುದು ಅಲ್ಲವೆ? ಅಸಲಿಗೆ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮುದುಡಿದ ಎಲೆಗಳಿರುವ ತರಕಾರಿ ಸೊಪ್ಪೊಂದನ್ನು ತೆಗೆದುಕೊಂಡು ಅದನ್ನು ಒಂದು ಬಗೆಯ ರಾಸಾಯನಿಕ ದ್ರಾವಣದಲ್ಲಿ ಅದ್ದುತ್ತಾನಷ್ಟೆ.
A two minute real life horror story. 😱 pic.twitter.com/gngzaTT56q
— Amit Thadhani (@amitsurg) March 17, 2023
ಪ್ರಸ್ತುತ ವಿಡಿಯೋ ಈಗ ಟ್ವಿಟರ್ ನಲ್ಲಿ 470k ವೀಕ್ಷಣೆಗಳನ್ನು ಗಳಿಸಿದ್ದರೆ ಲಿಂಕ್ಡ್ ಇನ್ ನಲ್ಲಿ 2k ಕ್ಕೂ ಅಧಿಕ ಪ್ರತಿಕ್ರಿಯೆ ಗಳಿಸಿದೆ. ಇದನ್ನು ನೋಡಿದ ಬಳಕೆದಾರರು ತಮ್ಮದೆ ಆದ ಜ್ಞಾನಕ್ಕನುಸಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಬಹುದು. ಕೆಲವರು ಆ ದ್ರಾವಣದಿಂದ ಯಾವುದೇ ಹಾನಿ ಇಲ್ಲ ಎಂದರೆ ಬಹಳಷ್ಟು ಜನರು ಇದು ನಿಜಕ್ಕೂ ಆರೋಗ್ಯಕ್ಕೆ ಹಾನಿ ಉಂಟು ಮಾಡುವುದರಲ್ಲಿ ಸಂಶಯವೇ ಇಲ್ಲ ಎಂದಿದ್ದಾರೆ.
ಬೆಚ್ಚಿ ಬೀಳಿಸಿದ ವಿಡಿಯೋ
ಒಬ್ಬ ಬಳಕೆದಾರರು, "ಇದು ನಿಜಕ್ಕೂ ಭಯಾನಕ ಹಾಗೂ ಆಘಾತಕಾರಿಯಾಗಿದೆ. ನಾವು ಏನೆಲ್ಲ ತಿನ್ನುತ್ತಿದ್ದೇವೆ ಎಂಬುದೇ ಗೊತ್ತಾಗುತ್ತಿಲ್ಲ. ಯಾವುದಕ್ಕೂ ನಿಮಗೆ ಗೊತ್ತಿರುವ ಮೂಲಗಳಿಂದ ಮಾತ್ರ ತರಕಾರಿ ಖರೀದಿಸಿ" ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬ ಬಳಕೆದಾರರು, "ಈ ರಾಸಾಯನಿಕ ಯಾವುದು? ನಮ್ಮ ಪ್ರತಿರೋಧಕ ಶಕ್ತಿ ದಿನೇ ದಿನೇ ಕ್ಷೀಣಿಸುತ್ತಿರುವುದರ ಬಗ್ಗೆ ಯಾವುದೇ ಸೋಜಿಗವಿಲ್ಲ" ಎಂದು ಬೇಸರಿಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಎಲ್ರೂ ತೂಕ ಇಳಿಸೋಕೆ ಊಟ ಬಿಟ್ರೆ, ತಿಂದು ತಿಂದೂ ತೂಕ ಇಳಿಸಿದ್ರು ಈ ಜೋಡಿ!
ಆದರೆ ಈ ಮೇಲಿನ ಪ್ರತಿಕ್ರಿಯೆಗಳಿಗೆ ವ್ಯತಿರಿಕ್ತವಾಗಿ ಮಗದೊಬ್ಬ ಬಳಕೆದಾರರು, "ಇದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಇದೊಂದಿ ಸಿಲಿಕಾನ್ ಆಧಾರಿತ ಪದಾರ್ಥವಾಗಿದ್ದು ಕೀಟನಾಶಕಗಳ ಪರಿಣಾಮಕಾರಿತ್ವವನ್ನು ವರ್ಧಿಸಲೆಂದು ಅಡಿಕ್ಟಿವ್ ಆಗಿ ಬಳಸಲಾಗುತ್ತದೆ. ಇದು ಯಾವುದೇ ಹಾನಿ ಉಂಟು ಮಾಡುವುದಿಲ್ಲ ಹಾಗೂ ಸಾವಯವದಲ್ಲೂ ಇದನ್ನು ಬಳಸಲು ಅನುಮೋದಿಸಲಾಗಿದೆ. ಆದರೆ ಇದರ ಬಳಕೆಯನ್ನು ತಾಜಾ ಆಗಿ ಕಾಣುವಂತೆ ಮಾಡಲು ಹೇಳಲಾಗಿಲ್ಲ" ಎಂದು ವಿವರಿಸಿದ್ದಾರೆ.
ಈ ವಿಡಿಯೋ ನೋಡಿರುವ ಬಹಳಷ್ಟು ಜನರು, ಇಂದು ನಮ್ಮಲ್ಲಿ ಕ್ಯಾನ್ಸರ್ ಹಾಗೂ ಇತರೆ ಮಾರಣಾಂತಿಕ ಕಾಯ್ಲೆಗಳ ಪ್ರಮಾಣಗಳು ಏಕೆ ಹೆಚ್ಚಾಗುತ್ತಿವೆ, ಇದು ಆತಂಕಕಾರಿಯಾದ ಬೆಳವಣಿಗೆ ಹಾಗೂ ಇಂತಹ ರಾಸಾಯನಿಕಗಳ ಪದಾರ್ಥಗಳೇ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲು ಕಾರಣವಾಗುತ್ತಿವೆ ಇತ್ಯಾದಿಯಾಗಿ ತಮ್ಮ ತಮ್ಮ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ಸಂತೋಷವಾಗಿರೋದನ್ನ ಕಲಿಯೋಕೆ ಫ್ರೀ ಟ್ರಿಪ್, ಫಿನ್ಲ್ಯಾಂಡ್ನಿಂದ ಹೊಸ ಆಫರ್
ಒಟ್ಟಿನಲ್ಲಿ ಹೇಳಬೇಕೆಂದರೆ ವೈಜ್ಞಾನಿಕವಾಗಿಯಾಗಲಿ ಅಥವಾ ಅಧಿಕೃತ ಮೂಲಗಳಿಂದಾಗಲಿ ಇದನ್ನು ತರಕಾರಿಗಳಿಗೂ ಬಳಸಬಹುದೆಂಬುದರ ಬಗ್ಗೆ ಯಾವ ಹೇಳಿಕೆಗಳಿಲ್ಲ, ಹಾಗಾಗಿ ಇದನ್ನು ಉಪಯುಕ್ತ ಎನ್ನಲಾಗದು ಎಂಬುದೇ ಬಹುತೇಕ ಅಭಿಪ್ರಾಯವಾಗಿದೆ. ಮುಂದಿನ ಸಲ ನೀವು ಸೊಪ್ಪು ಕೊಳ್ಳಲು ಹೋದಾಗ ಈ ಬಗ್ಗೆ ಎಚ್ಚರಿಕೆವಹಿಸಿ ಹಾಗೂ ನಿಮ್ಮ ಗೊತ್ತಿರುವ ಮೂಲದಿಂದಲೇ ಖರೀದಿಸಲು ಪ್ರಯತ್ನಿಸಿ ಎಂದಷ್ಟೆ ನಾವು ಹೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ