ಚೆನ್ನೈ ಮೃಗಾಲಯದಲ್ಲಿ (Chennai Zoo) ಚಿರತೆ ಸಾವನ್ನಪ್ಪಿದ್ದು, ಚಿಕ್ಕ ಬೋನಿನಲ್ಲಿ ಉಸಿರುಗಟ್ಟಿ(Leopard Died) ಸತ್ತಿದೆ ಎಂದು ಮರಣೋತ್ತರ ಪರೀಕ್ಷೆ ಹೇಳಿದೆ.ಕೊರೊನಾ ಮನುಷ್ಯರಿಗೆ ಮಾತ್ರವಲ್ಲದೇ ಪರೋಕ್ಷವಾಗಿ ಪ್ರಾಣಿಗಳಿಗೂ ಕಂಟಕವಾಗಿಬಿಟ್ಟಿದೆ ಎಂಬುವುದಕ್ಕೆ ಈ ಘಟನೆ ಸಾಕ್ಷಿ. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಅನ್ನುವ ಹಾಗಿದೆ ಈ ಸುದ್ದಿ. ಮೃಗಾಲಯದಲ್ಲಿ ಸುಮಾರು 70ಕ್ಕೂ ಹೆಚ್ಚು ಸಿಬ್ಬಂದಿಗಳು COVID-19ಗೆ ಸೋಂಕಿತರಾಗಿದ್ದರು. ಈ ಹಿನ್ನೆಲೆ ಮೃಗಾಲಯದ ಪ್ರಾಣಿಗಳಿಗೆ ಸೋಂಕು ತಗಲಿರಬಹುದೇ ಎಂಬ ಕಾರಣಕ್ಕೆ ಪ್ರಾಣಿಗಳನ್ನು ಪರೀಕ್ಷಿಸಲು ವೈದ್ಯಾಧಿಕಾರಿಗಳು (Doctors) ಸೂಚಿಸಿದ್ದರು. ಹಾಗಾಗಿ ಮೃಗಾಲಯ ಸಿಬ್ಬಂದಿಗಳು ವಿಶೇಷ ಪಂಜರದಲ್ಲಿ(Special Cage) ಪ್ರಾಣಿಗಳನ್ನು ಕೂಡಿದ್ದರಂತೆ. ಆದರೆ ಸಿಬ್ಬಂದಿಯ ಈ ಕ್ರಮ ಪಾಪ ಮೃಗಾಲಯದ ಚಿರತೆಯನ್ನೇ ಬಲಿ ತೆಗೆದುಕೊಂಡಿದೆ.
ರೋಗ ಕಾರಣ ಎನ್ನಲಾಗಿತ್ತು
ಹೌದು ಚೆನ್ನೈನ ಮೃಗಾಲಯದಲ್ಲಿ ಚಿರತೆಯು ಸಣ್ಣ ಪಂಜರದಲ್ಲಿ ಕೂಡಿ ಹಾಕಿದ್ದರಿಂದ ಉಸಿರುಗಟ್ಟಿದಂತಾಗಿ ಪ್ರಾಣ ಬಿಟ್ಟಿದೆ. ಚೆನ್ನೈನ ಅರಿಗ್ನರ್ ಅಣ್ಣಾ ಝೂಲಾಜಿಕಲ್ ಪಾರ್ಕ್ನಲ್ಲಿ 15 ವರ್ಷದ ಹೆಣ್ಣು ಚಿರತೆ ಮೃಗಾಲಯದಲ್ಲಿಯೇ ಮೃತಪಟ್ಟಿದೆ. ಸಾವಿನ ಬಳಿಕ ಮರಣೋತ್ತರ ಪರೀಕ್ಷೆಯ ವರದಿಯು ಅನ್ನನಾಳದ ಛಿದ್ರ ಮತ್ತು ಶ್ವಾಸಕೋಶದ ರಕ್ತಸ್ರಾವದಿಂದ ಚಿರತೆ ಮೃತಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ವೈಧ್ಯಾಧಿಕಾರಿಗಳು ತಿಳಿಸಿದ್ದಾರೆ.
ಜಯಾ ಎಂಬ ಹೆಸರಿನ ಚಿರತೆ ಸೋಮವಾರ, ಜನವರಿ 17ರಂದು ಸಾವನ್ನಪ್ಪಿದೆ. ಅಧಿಕಾರಿಗಳು ಆರಂಭದಲ್ಲಿ ಚಿರತೆ ಸಾವಿಗೆ ಯಾವುದೋ ರೋಗ ಕಾರಣ ಎಂದು ಶಂಕಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯು ಸಣ್ಣ ಮತ್ತು ಕಳಪೆ-ನಿರ್ವಹಣೆಯ ಪಂಜರದಲ್ಲಿ ಇರಿಸಲಾಗಿದ್ದ ಕಾರಣ ಚಿರತೆ ಸಾವನ್ನಪ್ಪಿದೆ ಎಂದಿದ್ದಾರೆ.
ಇದನ್ನೂ ಓದಿ: Leopard: ನಾಗಾಲ್ಯಾಂಡ್ ಕಾಡುಗಳಲ್ಲಿ ಪ್ರತ್ಯಕ್ಷವಾಯ್ತು ಅಪರೂಪದ ಬೂದು ಬಣ್ಣದ ಚಿರತೆ..!
ಚಿರತೆ ಜಯಾ ಸಾವಿನ ಅಸಲಿಯತ್ತ ಬಹಿರಂಗ
ಸಣ್ಣ ಪಂಜರದಲ್ಲಿ ಇರಿಸಿದ್ದರಿಂದ ಚಿರತೆಗೆ ಉಸಿರು ಕಟ್ಟಿದಂತಾಗಿದೆ ಎಂದು ವರದಿಯಲ್ಲಿ ತಿಳಿದು ಬಂದಿದೆ. ಮರಣೋತ್ತರ ಪರೀಕ್ಷೆಯನ್ನು ತಮಿಳುನಾಡು ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾಲಯ ((TANUVAS)ನಲ್ಲಿ ನಡೆಸಲಾಗಿದ್ದು, ಅಲ್ಲಿ ಚಿರತೆ ಜಯಾ ಸಾವಿನ ಅಸಲಿಯತ್ತನ್ನು ಬಹಿರಂಗ ಪಡಿಸಿದ್ದಾರೆ.
ವೈದ್ಯಕೀಯ ಸಮಯದಲ್ಲಿ ಸಾಮಾನ್ಯವಾಗಿ ಮೃಗಾಲಯದ ಪ್ರಾಣಿಗಳನ್ನು ಈ ಪಂಜರಗಳಿಗೆ ಕರೆದೊಯ್ಯಲಾಗುತ್ತದೆ.
ಚುಚ್ಚುಮದ್ದು ಅಥವಾ ಲಸಿಕೆ ಹಾಕಲು ಪಶುವೈದ್ಯರು ಮತ್ತು ಅವುಗಳನ್ನು ನಿಯಂತ್ರಿಸಲು ಕೀಪರ್ಗಳಿಗೆ ಸುಲಭವಾಗುತ್ತದೆ. ಆದರೆ, ಚಿರತೆಯಿಂದ ಮಾದರಿಗಳನ್ನು ಸಂಗ್ರಹಿಸಿದ ನಂತರ ನೌಕರರು ಚಿರತೆಯಿದ್ದ ಪಂಜರದ ರಾಟೆ ಕೆಲಸ ಮಾಡದೇ ಇದ್ದದ್ದರಿಂದ ಚಿರತೆ ಸಣ್ಣ ಜಾಗದಲ್ಲಿಯೇ ಇರಬೇಕಾಯಿತು. ಇದರಿಂದಾಗಿ ಚಿರತೆ ಜಯಾ ಅಲ್ಲೇ ಉಸಿರುಕಟ್ಟುವಿಕೆಯಿಂದ ಸತ್ತಿದ್ದಾಳೆ ಎಂದಿದ್ದಾರೆ.
ಸ್ವ್ಯಾಬ್ ಪರೀಕ್ಷೆ
ಮೃಗಾಲಯದ ಸಿಬ್ಬಂದಿಗಳನ್ನು ಈಗಾಗಲೇ ಕ್ವಾರಂಟೈನ್ ಮಾಡಲಾಗಿದ್ದರೂ, ಅವರಿಂದ ಪ್ರಾಣಿಗಳಿಗೂ ಸೋಂಕು ತಗುಲಿರಬಹುದು ಎಂದು ನಾವು ಶಂಕಿಸಿದ್ದೇವೆ. ಹಾಗಾಗಿ ಪ್ರಾಣಿಗಳಿಗೆ ಸ್ವ್ಯಾಬ್ ಪರೀಕ್ಷೆ ನಡೆಸಲು ನಿರ್ಧರಿಸಿದ್ದೆವು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಲು ಮೂಗಿನ ಸ್ವ್ಯಾಬ್ಗಳನ್ನು ಅಳವಡಿಸಲು ಅನುಕೂಲವಾಗುವಂತೆ ದೊಡ್ಡ ಪ್ರಾಣಿಗಳನ್ನು ವಿಶೇಷ ಪಂಜರಕ್ಕೆ ಸ್ಥಳಾಂತರಿಸಲಾಯಿತು, ಇದನ್ನು 'ಸ್ಕ್ವೀಜ್ ಕೇಜ್' ಎಂದು ಕರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶವಪರೀಕ್ಷೆಯಲ್ಲಿ ಹೆಣ್ಣು ಚಿರತೆ ಉಸಿರಾಟದ ಸಮಸ್ಯೆಯಿಂದ ಸಾವನ್ನಪ್ಪಿದೆ ಎಂಬುವುದು ತಿಳಿದು ಬಂದಿದೆ.
ಇದನ್ನೂ ಓದಿ: Spot Leopard: ನಿಮ್ಮ ಕಣ್ಣಿಗೊಂದು ಕಸರತ್ತು.. ಈ ಫೋಟೋದಲ್ಲಿ ಚಿರತೆ ಎಲ್ಲಿದೆ ಗುರುತಿಸಬಲ್ಲಿರಾ..?
ದುರಂತವೇ ಸರಿ
ಕಳೆದ ವರ್ಷ ಜೂನ್ನಲ್ಲಿ ಸಿಂಹಿಣಿ ಕವಿತಾ (23) ಕೊರೊನಾ ವೈರಸ್ನಿಂದ ಸಾವನ್ನಪ್ಪಿದೆ ಎಂದು ಶಂಕಿಸಲಾಗಿತ್ತು. ಆದರೆ ಸಿಂಹ ಕ್ಯಾನ್ಸರ್ನಿಂದ ಸಾವನ್ನಪ್ಪಿರುವುದು ಧೃಡವಾಯಿತು. ಮುನ್ನೆಚ್ಚರಿಕೆಯಾಗಿ ಮೃಗಾಲಯದಲ್ಲಿರುವ ಸುಮಾರು 16 ಪ್ರಾಣಿಗಳಿಂದ ಸಂಗ್ರಹಿಸಿದ ಮಾದರಿಗಳನ್ನು ಭೋಪಾಲ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ಗೆ ಕಳುಹಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ಸ್ಪಷ್ಟಿಕರಿಸಿದ್ದಾರೆ.
ಇನ್ನು ಚಿರತೆ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಚಿರತೆ ಸಾವಿನ ಬಗ್ಗೆ ಹೆಚ್ಚಿನ ತನಿಖೆ ನಡೆಯಲಿದೆ. ಪಾಪ ಮಾಡದ ತಪ್ಪಿಗೆ ಅನ್ಯಾಯವಾಗಿ ಚಿರತೆ ಪ್ರಾಣ ಬಿಟ್ಟಿದ್ದು ದುರಂತವೇ ಸರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ