ಕೇರಳ: ದೇವಾಲಯಗಳ (Temple) ಮುಂದೆ ಆನೆ (Elephant) ಇದ್ದರೆ ಅದೊಂದು ದೊಡ್ಡ ಆಕರ್ಷಣೆಯಾಗಿರುತ್ತದೆ. ಅದಕ್ಕಾಗಿಯೇ ಹಲವು ಪ್ರಸಿದ್ಧ ದೇವಾಲಯಗಳ ಮುಂದೆ ಆನೆಗಳನ್ನು ಕಟ್ಟಲಾಗಿರುತ್ತದೆ. ಹಬ್ಬ (Festival), ಜಾತ್ರೆಗಳ ಸಂದರ್ಭದಲ್ಲಿ ಆನೆಯನ್ನು ಸಿಂಗರಿಸಿ ಮೆರವಣಿಗೆ ಮಾಡಲಾಗುತ್ತದೆ. ಈ ಕಾರ್ಯಗಳಿಗೆ ಕಾಡಿನಲ್ಲಿ (Forest) ಸೆರೆ ಹಿಡಿದು ಪಳಗಿಸಲ್ಪಟ್ಟ ಆನೆಗಳನ್ನು ಬಳಸಿಕೊಳ್ಳಲಾಗುತ್ತದೆ. ಆದರೆ ಇದಕ್ಕೆ ಪ್ರಾಣಿ ಪ್ರಿಯರು ವಿರೋಧ ವ್ಯಕ್ತಪಡಿಸುತ್ತಿರುತ್ತಾರೆ. ಆದರೂ ಕೆಲವು ಕಡೆ ಆನೆಗಳ ಬಳಸುವ ಸಂಪ್ರದಾಯ ಮುಂದುವರಿದಿದೆ. ಆದರೆ ಇದೀಗ ಕಾಲ ಬದಲಾದಂತೆ, ಆಧುನಿಕತೆ, ತಂತ್ರಜ್ಞಾನ ತುಂಬಾ ಮುಂದುವರಿದಿದೆ. ದೇವಾಲಯದ ಉತ್ಸವಗಳಿಗೆ ಸೆರೆಯಲ್ಲಿರುವ ಆನೆಗಳನ್ನು ಬಳಸಿಕೊಳ್ಳುವ ಪರಂಪರೆಯನ್ನು (Heritage) ತೊಡೆದು ಹಾಕಬೇಕೆಂಬ ಕರೆಗಳು ಜೋರಾಗುತ್ತಿರುವ ಸಮಯದಲ್ಲಿ, ದೇವತೆಗಳನ್ನು(God) ಹೊತ್ತೊಯ್ಯುವಂತಹ ಆಚರಣೆಗಳನ್ನು ನಿರ್ವಹಿಸಲು ಕೇರಳದ (Kerala) ದೇವಾಲಯವೊಂದು ರೋಬೋಟಿಕ್ ಆನೆಯನ್ನು (Robotic Elephant) ಪರಿಚಯಿಸಿದೆ.
ಕೇರಳದ ವಿವಿಧ ದೇಗುಲಗಳಲ್ಲಿ ಈಗ ಪೂರಂ ಉತ್ಸವ ನಡೆಸಲಾಗುತ್ತದೆ. ಈ ಸಂಭ್ರಮಾಚರಣೆಯ ವೇಳೆ ಆನೆಗಳನ್ನು ಸುಂದರವಾಗಿ ಅಲಂಕರಿಸಿ ಮೆರವಣಿಗೆ ಮಾಡುವುದು ಇಲ್ಲಿನ ಪ್ರಧಾನ ಆಕರ್ಷಣೆಯಾಗಿದೆ. ಇದಕ್ಕಾಗಿ ಸೆರೆ ಹಿಡಿಯಲ್ಪಟ್ಟ ಆನೆಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ತ್ರಿಶ್ಶೂರ್ ಜಿಲ್ಲೆಯ ಇರಿಂಜಲಕ್ಕುಡ ಗ್ರಾಮದ ಶ್ರೀಕೃಷ್ಣ ದೇವಾಲಯವೊಂದರಲ್ಲಿ ಪ್ರಾಣಿ ಹಿಂಸೆ ತಪ್ಪಿಸಲು ರೋಬೋಟ್ ಆನೆಯನ್ನು ಉತ್ಸವದಲ್ಲಿ ಬಳಸಲಾಗಿದೆ.
5 ಲಕ್ಷ ಮೌಲ್ಯದ ರೋಬೋ ಆನೆ
ಧಾರ್ಮಿಕ ಉತ್ಸವ ಹೆಸರಿನಲ್ಲಿ ಕಾಡಿನಲ್ಲಿ ಹಿಡಿದ ಆನೆಗಳನ್ನು ನಾಡಿಗೆ ಕರೆತಂದು ಹಿಂಸಿಸಲಾಗುತ್ತಿದೆ. ಅಲ್ಲದೆ ಅವುಗಳಿಗೆ ಹಿಡಿಸದ ಆಹಾರವನ್ನು ಬಲವಂತವಾಗಿ ನೀಡಲಾಗುತ್ತದೆ. ಸರಿಯಾದ ಚಿಕಿತ್ಸೆಯನ್ನು ನೀಡುವುದಿಲ್ಲ ಎಂದು ಹಿಂದಿನಿಂದಲೂ ಪೇಟಾ (PETA)ದೂರುತ್ತಿತ್ತು. ಇದೀಗ ಅದೇ ಎನ್ಜಿಒ ಸಂಸ್ಥೆ ಈ ರೋಬೋಟ್ ಆನೆಯನ್ನು ದೇವಾಲಯಕ್ಕೆ ನೀಡಿದೆ. 800-ಕೆಜಿ ತೂಕ, 11 ಅಡಿ ಎತ್ತರದ ರೋಬೋ ಆನೆ ಕಬ್ಬಿಣದ ಫ್ರೇಮ್ ಮತ್ತು ರಬ್ಬರ್ ಲೇಪನವನ್ನು ಬಳಸಿ ತಯಾರಿಸಲಾಗಿದೆ. ಇದನ್ನು ತ್ರಿಶೂರ್ ಜಿಲ್ಲೆಯ ಇರಿಂಜಲಕ್ಕುಡ ಶ್ರೀಕೃಷ್ಣ ದೇವಸ್ಥಾನಕ್ಕೆ ಕೊಡುಗೆಯಾಗಿ ನೀಡಿದೆ. 5 ಲಕ್ಷ ರೂಪಾಯಿ ವೆಚ್ಚದ ರೋಬೋ ಆನೆಯನ್ನು ದೇಣಿಗೆ ನೀಡುವಲ್ಲಿ ಪೇಟಾದ ಮಹತ್ಕಾರ್ಯಕ್ಕೆ ಚಿತ್ರನಟಿ ಪಾರ್ವತಿ ತಿರುವೋತು ಕೂಡ ಕೈಜೋಡಿಸಿದ್ದಾರೆ.
ನಾಲ್ಕು ಜನ ಕುಳಿತುಕೊಳ್ಳಬಹುದು
ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ತಯಾರಾಗಿರುವ ಈ ರೋಬೋ ಆನೆ ದೇವಾಲಯದಲ್ಲಿ ಮೆರವಣಿಗೆ ನಡೆಸುವ ವೇಳೆ 4 ಜನ ಕುಳಿತುಕೊಳ್ಳವ ಹಾಗೆ ವಿನ್ಯಾಸ ಮಾಡಲಾಗಿದೆ. ಜೀವಂತ ಆನೆಗಳ ಮೆರವಣಿಗೆ ನಡೆಸುವುದು ಅವುಗಳ ಸಾಗಣೆ ವೆಚ್ಚ, ಸೇರಿದಂತೆ ಹಲವು ಆತಂಕಗಳು ಇರುತ್ತವೆ. ಹಾಗಾಗಿ ರೋಬೋ ಆನೆಯ ಬಳಕೆ ಮಾಡುವ ನಿರ್ಧಾರ ತೆಗದುಕೊಂಡಿದ್ದೇವೆ ಎಂದು ದೇವಾಲಯದ ಪೂಜಾರಿ ತಿಳಿಸಿದ್ದಾರೆ. ಈ ಅನುಕ್ರಮದೊಂದಿಗೆ ಪ್ರಾಣಿ ಹಿಂಸೆಯನ್ನು ತಡೆಯುವುದಕ್ಕಾಗಿ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಪ್ರಾಣಿಗಳಿಗೆ ಗೌರವಾನ್ವಿತ ಜೀವನ ಒದಗಿಸಿಕೊಡುವ ಕಾರ್ಯ
ಪ್ರಾಣಿಗಳನ್ನು ಮನರಂಜನೆಗಾಗಿ ಬಳಸಿದಾಗ ಅವುಗಳು ಅನುಭವಿಸುವ ನೋವನ್ನು ಅರ್ಥ ಮಾಡಿಕೊಳ್ಳುವ ಜ್ಞಾನವನ್ನು ನಾವೆಲ್ಲಾ ಹೊಂದಿದ್ದೇವೆ. ಇಂತಹ ದುರುಪಯೋಗವನ್ನು ನಿಲ್ಲಿಸಲು ಮತ್ತು ಪ್ರಾಣಿಗಳು ಕೂಡ ಗೌರವಾನ್ವಿತ ಜೀವನವನ್ನು ಹೊಂದುವುದಕ್ಕೆ ನಾವು ಬಲವಾದ ಮತ್ತು ಹೆಚ್ಚು ಪರಿಣಾಮಕಾರಿ ದಾಪುಗಾಲುಗಳನ್ನು ಹಾಕಲು ಇದು ಸೂಕ್ತ ಸಂದರ್ಭವಾಗಿದೆ ಎಂದು ಪೇಟಾ ಕಾರ್ಯಕ್ಕೆ ಬೆಂಬಲ ನೀಡಿರುವ ಪಾರ್ವತಿ ತಿರುವೋತು ಹೇಳಿದ್ದಾರೆ.
ಕ್ರೌರ್ಯ ಮುಕ್ತ ಸಮಾರಂಭ
ರಾಮನ್ ರೋಬೋ ಸುರಕ್ಷಿತ ಮತ್ತು ಕ್ರೌರ್ಯ-ಮುಕ್ತ ರೀತಿಯಲ್ಲಿ ದೇವಾಲಯದಲ್ಲಿ ಸಮಾರಂಭಗಳನ್ನು ನಡೆಸಲು ಸಹಾಯ ಮಾಡುತ್ತದೆ. ಇದರಿಂದ ನಿಜವಾದ ಆನೆಗಳು ಅನುಭವಿಸುತ್ತಿದ್ದ ಭಯಾನಕತೆ ಕೊನೆಗೊಳಿಸುತ್ತದೆ ಎಂದು ಪೇಟಾ ಮೂಲಗಳು ತಿಳಿಸಿವೆ. ಜೀವಂತ ಆನೆಗಳನ್ನು ತಾಳವಾದ್ಯ ಮತ್ತು ಪಟಾಕಿಗಳ ವಿಪರೀತ ಶಬ್ದಕ್ಕೆ ಒಳಪಡಿಸುವುದು ಕ್ರೂರವಾಗಿದೆ. ಏಕೆಂದರೆ ಆ ರೀತಿಯ ಶಬ್ಧ ಜೀವಂತ ಆನೆಗಳಿಗೆ ಸಂಕಟವನ್ನುಂಟು ಮಾಡುತ್ತವೆ ಎಂದು ಪೇಟಾ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ