ಕೋವಿಡ್-19 ಸಾಂಕ್ರಾಮಿಕ ರೋಗ ಇಡೀ ಜಗತ್ತನ್ನೇ ಬಾಧಿಸುತ್ತಿದ್ದು, ದೊಡ್ಡ ಮಟ್ಟದಲ್ಲಿ ಬಿಕ್ಕಟ್ಟನ್ನು ಉಂಟುಮಾಡಿದೆ. ಬಡವರು, ಮಧ್ಯಮ ವರ್ಗದವರು ಚಿಕಿತ್ಸೆ ಪಡೆದುಕೊಳ್ಳಲು ಹಣವಿಲ್ಲದೆ ಪರದಾಡುತ್ತಿದ್ದಾರೆ. ರೋಗಿ ಮೃತಪಟ್ಟ ಬಳಿಕವೂ ರೋಗಿಯ ಮೃತ ದೇಹ ನೀಡದೆ ಹಣ ನೀಡಬೇಕೆಂದು ಆಸ್ಪತ್ರೆಗಳು ಒತ್ತಾಯಿಸಿರುವ ಸಾಕಷ್ಟು ಘಟನೆಗಳು ವರದಿಯಾಗಿವೆ. ಅಲ್ಲದೆ, ಆರೋಗ್ಯ ವಿಮೆ ಇದ್ದರೂ ಆಸ್ಪತ್ರೆಗೆ ದಾಖಲಾದರೆ ಹಣ ಕಟ್ಟಬೇಕಾದ ಪರಿಸ್ಥಿತಿಯೂ ಎದುರಾಗಿದೆ. ವೈಯಕ್ತಿಕ ವಿಮೆದಾರರು, ವೈದ್ಯಕೀಯ ಮತ್ತು ಆರೋಗ್ಯ ವಿಮಾ ಕ್ಷೇತ್ರಗಳೂ ಸಹ, ಆಗಾಗ್ಗೆ ಎದುರಾಗದ ಹಕ್ಕು ಸನ್ನಿವೇಶಗಳನ್ನು ಎದುರಿಸುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕೆಲವು ಸಂದರ್ಭಗಳಲ್ಲಿ, ವಿಮಾ ಪರಿಸರ ವ್ಯವಸ್ಥೆಯು ಪರಿಹಾರಗಳನ್ನು ಕಂಡುಕೊಂಡಿದೆ. ಆದರೆ ಇತರೆ ಸಂದರ್ಭಗಳಲ್ಲಿ, ಅಂತಹ ಸನ್ನಿವೇಶಗಳು ವಿವಾದಗಳಿಗೆ ಕಾರಣವಾಗಿವೆ. ನಿಮ್ಮ ವೈದ್ಯರು ಕೋವಿಡ್ -19 ಪ್ರಿಸ್ಕ್ರಿಪ್ಷನ್ಗಳನ್ನು ವಾಟ್ಸ್ಆ್ಯಪ್ನಲ್ಲಿ ಕಳಿಸುತ್ತಿದ್ದರೆ ನಿಮ್ಮ ಆರೋಗ್ಯ ವಿಮೆ ಕಂಪನಿಯು ನಿಮ್ಮ ಇನ್ಶೂರೆನ್ಸ್ ಕ್ಲೈಮ್ ಮಾಡಿಕೊಳ್ಳುವ ಹಕ್ಕನ್ನು ನಿರಾಕರಿಸಬಹುದು.
1) ಮನೆಯಲ್ಲಿದ್ದುಕೊಂಡೇ ಟೆಲಿಮೆಡಿಕಲ್ ಚಿಕಿತ್ಸೆ
ಕೋವಿಡ್ - 19 ಮೊದಲನೇ ಅಲೆಯ ಆರಂಭಿಕ ಹಂತಗಳಲ್ಲಿ ಕಡ್ಡಾಯವಾಗಿ ಆಸ್ಪತ್ರೆಗೆ ದಾಖಲಾಗುವುದು ಪ್ರೋಟೋಕಾಲ್ ಆಗಿತ್ತು. ನಂತರ ಸೌಮ್ಯ ಲಕ್ಷಣಗಳುಳ್ಳ ಕೋವಿಡ್ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ಅಥವಾ ಹೋಂ ಐಸೊಲೇಷನ್ನಲ್ಲಿರಲು ಅನುಮತಿ ನೀಡಲಾಯ್ತು. ನಂತರ ವಿಮಾ ಕಂಪೆನಿಗಳು ಸಹ ಮನೆ ಚಿಕಿತ್ಸೆಗೆ ವಿಮೆ ಪಾವತಿಸಲು ಪ್ರಾರಂಭಿಸಿದರು. ಬಳಿಕ ಕೊರೋನಾ ಕವಚ ನೀತಿಗಳನ್ನು ಪರಿಚಯ ಮಾಡಿದ್ದರು. ಇದರಲ್ಲಿ ರೋಗನಿರ್ಣಯ ಪರೀಕ್ಷೆಗಳ ವೆಚ್ಚ, ವೈದ್ಯರ ಸಮಾಲೋಚನೆ ಶುಲ್ಕ ಮತ್ತು ಔಷಧಿಯ ಬಿಲ್ ಸೇರಿಸಲಾಗಿತ್ತು.
ಆದರೆ, ಕೊರೋನಾ ಎರಡನೇ ಅಲೆ ದೇಶದಲ್ಲಿ ಜೋರಾಗಿರುವ ಕಾರಣ ಸೋಂಕಿತರ ಆರೈಕೆ ಮಾಡುವವರಿಗೂ ತಮ್ಮ ಮನೆಗಳಿಂದ ಹೊರಬರಲು ಕಷ್ಟವಾಯಿತು. ಜೊತೆಗೆ ಪ್ರಿಸ್ಕ್ರಿಪ್ಷನ್ ಮತ್ತು ಫಾರ್ಮಸಿ ಬಿಲ್ಗಳ ಹಾರ್ಡ್ ಕಾಪಿಗಳನ್ನು ಪಡೆಯಲು ಹಲವರಿಗೆ ಸಾಧ್ಯವಾಗಲಿಲ್ಲ. ವೈದ್ಯರಿಗೆ ವಿಪರೀತ ಕೆಲಸದ ಒತ್ತಡವಿದ್ದ ಕಾರಣ ಮೆಸೇಜಿಂಗ್ ಆ್ಯಪ್ಗಳಲ್ಲಿ ಅನೇಕ ಸೂಚನೆಗಳು ಮತ್ತು ಖರೀದಿ ಆರ್ಡರ್ಗಳನ್ನು ಶೇರ್ ಮಾಡಿಕೊಳ್ಳಲಾಯ್ತು. ಈ ರೀತಿ ಸೇವೆ ಪಡೆದವರಿಗೆ ವಿಮೆ ಹಕ್ಕು ಪಡೆಯುವುದು ಕಷ್ಟವಾಗುತ್ತಿದೆ. “ಕೇವಲ ವಾಟ್ಸ್ಆ್ಯಪ್ ಮೆಸೇಜ್ನಿಂದ ವಿಮೆ ತೆಗೆದುಕೊಳ್ಳಲು ಆಗಲ್ಲ. ಆಸ್ಪತ್ರೆಗಳಿಂದ ಅಥವಾ ವೈದ್ಯರ ಲೆಟರ್ಹೆಡ್ಗಳಲ್ಲಿ ಸರಿಯಾದ ಪ್ರಿಸ್ಕ್ರಿಪ್ಷನ್ ಪಡೆಯಲು ನಾವು ಪಾಲಿಸಿದಾರರಿಗೆ ಸಲಹೆ ನೀಡುತ್ತೇವೆ. ಔಪಚಾರಿಕವಾಗಿ ವೈದ್ಯರು ಫೋಟೋದಲ್ಲಿ ಕಳಿಸಿದ ಪ್ರಿಸ್ಕ್ರಿಪ್ಷನ್ಗಳನ್ನು ಸಹ ವಿಮೆ ಹಕ್ಕಿಗೆ ಸ್ವೀಕರಿಸಲಾಗಿದೆ'' ಎಂದು ವಿಡಾಲ್ ಹೆಲ್ತ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಶಂಕರ್ ಬಾಲಿ ಹೇಳಿದ್ದಾರೆ.
ಆದರೆ, ಕೆಲವು ವಿಮೆ ಸಂಸ್ಥೆಗಳು ಇಂತಹ ದಾಖಲೆಗಳಿಗಾಗಿ ಒತ್ತಾಯ ಮಾಡದೆಯೂ ವಿಮೆ ಹಕ್ಕು ಸ್ವೀಕರಿಸಿದ್ದಾರೆ. ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶುರೆನ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ.ಎಸ್. ಪ್ರಕಾಶ್, “ನಮ್ಮ ನೀತಿಗಳ ಅಡಿಯಲ್ಲಿ ನಾವು 14 ದಿನಗಳವರೆಗೆ ಮನೆಯ ಆರೈಕೆಯನ್ನು ಪ್ಯಾಕೇಜ್ನಂತೆ ನೀಡುತ್ತೇವೆ. ನಮಗೆ ಬೇಕಾಗಿರುವುದು ಆರ್ಟಿ-ಪಿಸಿಆರ್ ಸಕಾರಾತ್ಮಕ ವರದಿ ಮತ್ತು ನಿಯಮಿತ ಫಾಲೋ-ಅಪ್ಗಳನ್ನು ಒಳಗೊಂಡಂತೆ ಟೆಲಿಮೆಡಿಸಿನ್ ಸೇವೆಗಳ ಎಲೆಕ್ಟ್ರಾನಿಕ್ ಪುರಾವೆ, ಆರ್ಡರ್ ಮಾಡಿದ ಔಷಧಿ ಹಾಗೂ ರಕ್ತ ಪರೀಕ್ಷೆಗಳನ್ನು ಸಹ ವಿಮೆಯಲ್ಲಿ ಒಳಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
2) RTPCR ನೆಗೆಟಿವ್ ಇದ್ದರೂ ಕೋವಿಡ್ ಚಿಕಿತ್ಸೆ..!
ನೀವು ಕೋವಿಡ್ RTPCR ಪರೀಕ್ಷೆ ಮಾಡಿಸಿದರೆ ನೆಗೆಟಿವ್ ಬಂದಿರುತ್ತದೆ. ಆದರೂ, ನಿಮ್ಮ ವೈದ್ಯರು ಕೋವಿಡ್ ಚಿಕಿತ್ಸೆ ತೆಗೆದುಕೊಳ್ಳಲು ಹೇಳುತ್ತಾರೆ. ಇಂತಹ ವಿಚಾರಗಳಲ್ಲೂ ವ್ಯಕ್ತಿಗಳು ವಿಮೆ ಕಂಪನಿಗಳಿಂದ ತೊಂದರೆಗೊಳಗಾಗಿದ್ದಾರೆ. ಏಕೆಂದರೆ, ಕೆಲ ವಿಮೆ ಕಂಪನಿಗಳು ಈ ರೀತಿಯ ಹಕ್ಕುಗಳನ್ನು ತಿರಸ್ಕರಿಸಿವೆ.
3) ಹಕ್ಕು ಸಲ್ಲಿಸುವಿಕೆ ಮತ್ತು ದಾಖಲೆ ಸಲ್ಲಿಕೆಯಲ್ಲಿ ವಿಳಂಬ
ಹಕ್ಕು ಸಲ್ಲಿಸುವಾಗ ಆಸ್ಪತ್ರೆಗೆ ದಾಖಲಾದ ಮತ್ತು ಹೋಂ ಕ್ವಾರಂಟೈನ್ನಲ್ಲಿದ್ದ ಪಾಲಿಸಿದಾರರು ಮತ್ತೊಂದು ತೊಂದರೆಯನ್ನು ಎದುರಿಸಿದ್ದಾರೆ. ಅದೇನೆಂದರೆ ಇತರ ಕೋವಿಡ್ ಪೀಡಿತ ಕುಟುಂಬದ ಸದಸ್ಯರನ್ನು ನೋಡಿಕೊಂಡ ಕಾರಣ ಕ್ಲೈಮ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಳಂಬವಾಗಿರುತ್ತದೆ. ಅಂದರೆ ಉದಾಹರಣೆಗೆ ಜನವರಿಯಲ್ಲಿ ಕ್ಲೈಮ್ ಅರ್ಜಿ ಸಲ್ಲಿಸಿ ಮೇ ತಿಂಗಳಲ್ಲಿ ದಾಖಲೆ ಸಲ್ಲಿಸಿರುವ ಉದಾಹರಣೆಯೂ ಇದೆ. ಈ ರೀತಿಯ ಕೆಲ ಪ್ರಕರಣಗಳನ್ನೂ ಮಾನವೀಯ ಆಧಾರದ ಮೇಲೆ ಸ್ವೀಕರಿಸಲಾಗಿದೆ ಎಂದು ಪ್ರಕಾಶ್ ಹೇಳಿದ್ದಾರೆ. ಹೆಚ್ಚಿನ ವಿಮಾ ಕಂಪನಿಗಳು ಸಮಯದ ಬಗ್ಗೆ ಕಠಿಣವಾಗಿಲ್ಲ ಎಂದೂ ತಿಳಿದುಬಂದಿದೆ.
ಇದನ್ನೂ ಓದಿ: Kareena Kapoor: ಸೀತೆಯ ಪಾತ್ರದಲ್ಲಿ ನಟಿಸೋಕೆ 12 ಕೋಟಿ ಕೇಳಿದ್ರಂತೆ ಕರೀನಾ ಕಪೂರ್..!
ಸಲ್ಲಿಕೆಯ ವಿಳಂಬವನ್ನು ಉಲ್ಲೇಖಿಸಿ ನಿಮ್ಮ ವಿಮಾದಾರರು ನಿಮ್ಮ ಹಕ್ಕನ್ನು ನಿರಾಕರಿಸಿದರೆ, ನೀವು ಮೊದಲು ವಿಮಾದಾರರಿಗೆ ಮತ್ತು ನಂತರ ವಿಮಾ ಓಂಬುಡ್ಸ್ಮನ್ ಕಚೇರಿಗಳಿಗೆ ದೂರು ಸಲ್ಲಿಸಬಹುದು. IRDAI ಆರೋಗ್ಯ ವಿಮಾ ನಿಯಮಗಳ ಪ್ರಕಾರ ವಿಮಾ ಕಂಪನಿಗಳು ವಿಳಂಬಕ್ಕೆ ಸರಿಯಾದ ಕಾರಣಗಳಿದ್ದಾಗ ಅಂತಹ ಹಕ್ಕುಗಳನ್ನು ಪರಿಗಣಿಸಬೇಕು.
4) ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಕ್ಯಾಶ್ಲೆಸ್ ಚಿಕಿತ್ಸೆಯನ್ನು ನಿರಾಕರಿಸುವುದು
ಕೋವಿಡ್ - 19 ರೋಗಿಗಳಿಗೆ ನಗದು ರಹಿತ ಸೌಲಭ್ಯಗಳನ್ನು ವಿಸ್ತರಿಸಲು ಹಲವಾರು ಆಸ್ಪತ್ರೆಗಳು ನಿರಾಕರಿಸಿದ್ದು, ಈ ವಿಚಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು IRDAI ಗಮನವನ್ನೂ ಸೆಳೆದಿದೆ. ನಂತರ, ಈ ಬಗ್ಗೆ ದೆಹಲಿ ಹೈಕೋರ್ಟ್ ಆಸ್ಪತ್ರೆಗೆ ದಾಖಲಾಗುವಾಗ ಹಾಗೂ ಡಿಸ್ಚಾರ್ಜ್ ಆಗಿ ಹೋಗುವಾಗ ಕ್ಯಾಶ್ಲೆಸ್ ಚಿಕಿತ್ಸೆಗೆ 60 ನಿಮಿಷಗಳಲ್ಲಿ ಅನುಮತಿ ನೀಡಬೇಕೆಂದು ತೀರ್ಪು ನೀಡಿದರೂ, ಪಾಲಿಸಿದಾರರ ಸಂಕಟ ಇನ್ನು ಸಂಪೂರ್ಣವಾಗಿ ದೂರವಾಗಿಲ್ಲ.
IRDAI ಆಸ್ಪತ್ರೆಗಳನ್ನು ನಿಯಂತ್ರಿಸುವುದಿಲ್ಲವಾದ್ದರಿಂದ, ಆಸ್ಪತ್ರೆಯು ನಗದುರಹಿತ ಸೌಲಭ್ಯಗಳನ್ನು ವಿಸ್ತರಿಸದಿದ್ದರೆ ಪಾಲಿಸಿದಾರರು ಹೆಚ್ಚೇನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ, 9-12 ತಿಂಗಳ ಮನೆಯ ಖರ್ಚುಗಳನ್ನು ನೋಡಿಕೊಳ್ಳುವ ಸಾಮರ್ಥ್ಯವಿರುವ ಸಾಕಷ್ಟು ದೊಡ್ಡ ತುರ್ತು ಹಣವನ್ನು ಹೊಂದಿರುವುದು ಉತ್ತಮ. ಕೋವಿಡ್ - 19 ಬಿಕ್ಕಟ್ಟು ಈ ನಿಧಿಯ ಅಗತ್ಯವನ್ನು ಇನ್ನೂ ಹೆಚ್ಚಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ